ADVERTISEMENT

ಕೆಜಿಎಫ್‌| ಪೊಲೀಸ್‌ ಠಾಣೆ ಮರು ವಿಂಗಡಣೆಯಿಂದ ಸಾರ್ವಜನಿಕರಿಗೆ ಅನ್ಯಾಯ: ಆನಂದ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:14 IST
Last Updated 23 ಜನವರಿ 2026, 7:14 IST
ಕೆಜಿಎಫ್‌ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗುರುವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಸಮುದಾಯದ ಪ್ರತಿನಿಧಿಗಳು
ಕೆಜಿಎಫ್‌ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗುರುವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಸಮುದಾಯದ ಪ್ರತಿನಿಧಿಗಳು   

ಕೆಜಿಎಫ್‌: ಬೆಮಲ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆಲವು ಪ್ರದೇಶಗಳನ್ನು ಬಂಗಾರಪೇಟೆಗೆ ಸೇರಿಸಿದ್ದರಿಂದ, ಸಾಮಾನ್ಯ ನಾಗರಿಕರಿಗೆ ಅನಾನುಕೂಲವಾಗುತ್ತಿದೆ. ಇದೇ ರೀತಿ ಹಲವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್‌ ಠಾಣೆಗಳ ಮರುವಿಂಗಡನೆ ಮಾಡಬೇಕೆಂದು ದಲಿತ ಮುಖಂಡ ಸೂಲಿಕುಂಟೆ ಆನಂದ್‌ ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗುರುವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಬೆಮಲ್‌ ಸುತ್ತಮುತ್ತಲಿನ ಪ್ರದೇಶವು ಬೆಮಲ್‌ ಪೊಲೀಸ್‌ ಠಾಣೆಗೆ ಸಮೀಪದಲ್ಲಿದೆ. ಆದರೆ, ಪೊಲೀಸ್‌ ಠಾಣೆಗಳ ಮರು ವಿಂಗಡನೆ ಸಮಯದಲ್ಲಿ ಕೆಲವು ಪ್ರದೇಶವನ್ನು ಬಂಗಾರಪೇಟೆ ಪೊಲೀಸ್‌ ಠಾಣೆಗೆ ಸೇರಿಸಲಾಗಿದೆ. ಇದರಿಂದ ಸಣ್ಣ ಪ್ರಕರಣಕ್ಕೂ ಸಹ ನಾಗರಿಕರು ಬಂಗಾರಪೇಟೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಆದ್ದರಿಂದ ಮರುವಿಂಗಡನೆ ಪೂರ್ವದಲ್ಲಿ ಇದ್ದ ರೀತಿಯಲ್ಲಿಯೇ ಬೆಮಲ್‌ ನಗರದ ಪ್ರದೇಶವನ್ನು ಬೆಮಲ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿಸಬೇಕು. ಇದೇ ರೀತಿ ಬೂದಿಕೋಟೆ, ಕಾಮಸಮುದ್ರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೂಡ ಅವ್ಯವಸ್ಥೆ ಇದೆ. ಕೂಡಲೇ ಅದನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.

ಕಳೆದ ಬಾರಿ ನಡೆದಿದ್ದ ಸಭೆಯಲ್ಲಿ ಮಂಡಿಸಿದ್ದ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಪೊಲೀಸರನ್ನು ಬಿಟ್ಟು ಬೇರೆ ಇಲಾಖೆಯ ಅಧಿಕಾರಿಗಳು ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬಂಗಾರಪೇಟೆ ಮತ್ತು ಕೆಜಿಎಫ್‌ ತಾಲ್ಲೂಕು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ದಲಿತರಿಗಾಗಿ ಕೋಟ್ಯಂತರ ರೂಪಾಯಿ ಹಣ ಬರುತ್ತಿದೆ. ಅದು ದಲಿತರಿಗೆ ಸೇರುತ್ತಿಲ್ಲ. ಇಲಾಖೆಗೆ ಬರುವ ಅನುದಾನವನ್ನು ಮರೆ ಮಾಚಲಾಗುತ್ತಿದೆ. ಕೂಡಲೇ ನಿಗಮದವರು ಅನುದಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೆಜಿಎಫ್‌ ದಲಿತರಿಗೆ ಸ್ಮಶಾನವನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ADVERTISEMENT

ತಾಲ್ಲೂಕನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್‌ ಠಾಣೆಗಳ ಮರು ವಿಂಗಡನೆ ಮಾಡಲಾಗಿದೆ. ಮುಂದಿನ ಮರು ವಿಂಗಡನೆ ಸಂದರ್ಭದಲ್ಲಿ ಈ ಕೋರಿಕೆಯನ್ನು ಪರಿಗಣಿಸುವುದಾಗಿ ಎಸ್‌ಪಿ ಶಿವಾಂಶು ರಜಪೂತ್‌ ತಿಳಿಸಿದರು. 

ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಪರಿಶಿಷ್ಟರು ಸಲ್ಲಿಸುವ ಅರ್ಜಿಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಇ ಖಾತೆ ಸೇರಿದಂತೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ನಿವೃತ್ತ ಬೆಮಲ್‌ ನೌಕರರೊಬ್ಬರು ದೂರಿದರು.

ಪ್ರತಿ ಠಾಣೆಗಳಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಸಬೇಕು. ಗುಲಾಮರ ಅಪ್ಪ ಎಂಬ ಫೇಸ್‌ ಬುಕ್‌ ಪೇಜ್‌ನಲ್ಲಿ ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಲಾಗುತ್ತಿದೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀನಾಥ್ ಒತ್ತಾಯಿಸಿದರು.

ನಗರಸಭೆಯಲ್ಲಿ ಡಿ ಗ್ರೂಪ್‌ ನೌಕರರಿಗೆ ಪ್ರತಿ ತಿಂಗಳು ಸಮರ್ಪಕವಾಗಿ ಸಂಬಳ ನೀಡಬೇಕು. ದಲಿತರಿಗೆ ಮೀಸಲಿರುವ ಸ್ಮಶಾನ ಒತ್ತುವರಿ ತೆರವುಗೊಳಿಸಿ ಎಂದು ಎಪಿಎಲ್‌ ರಂಗನಾಥ್‌ ಮನವಿ ಮಾಡಿದರು.

ಬೇತಮಂಗಲ ವೃತ್ತದಲ್ಲಿ ದಲಿತ ಮಹಿಳೆಗೆ ಆಸ್ತಿ ವಿಚಾರ ಹಂಚಿಕೆಯಲ್ಲಿ ಮೋಸ ಮಾಡಲಾಗುತ್ತಿದೆ. ಅವರಿಗೆ ನ್ಯಾಯ ಕೊಡಿಸಿ ಎಂದು ಸಂದ ಮುನಿಸ್ವಾಮಿ ಕೋರಿದರು.

ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ರಂಗಶಾಮಯ್ಯ, ಮಾರ್ಕೊಂಡಯ್ಯ, ದಯಾನಂದ್‌, ನವೀನ್‌, ವಿವಿಧ ಠಾಣೆಗಳ ಸಬ್‌ ಇನ್‌ಸ್ಪೆಕ್ಟರ್‌ಗಳು, ಹಲವು ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.