
ಕೋಲಾರದಲ್ಲಿ ಭಾನುವಾರ ನಡೆದ ಓದುಗ ಕೇಳುಗ ಕಾರ್ಯಕ್ರಮದಲ್ಲಿ ಕೃತಿಕಾರ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿದರು. ಚಿಂತಕ ಪ್ರೊ.ಮುನಿರತ್ನಪ್ಪ ಪಾಲ್ಗೊಂಡಿದ್ದರು
ಕೋಲಾರ: ಖಲೀಲ್ ಗಿಬ್ರಾನ್ ಬರೀ ಕವಿಯಲ್ಲ, ಆತ ಒಬ್ಬ ಅನುಭಾವ ಕವಿ, ಸಂತ, ದಾರ್ಶನಿಕ. ನಮ್ಮ ಇಂದ್ರೀಯಗಳಿಗೆ ಪ್ರವೇಶ ಮಾಡಿಕೊಳ್ಳಲು ಕಷ್ಟ ಎಂದು ಚಿಂತಕ ಪ್ರೊ.ಮುನಿರತ್ನಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ಬಳಗ ಹಮ್ಮಿಕೊಂಡಿದ್ದ 54ನೇ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಅವರು ಖಲೀಲ್ ಗಿಬ್ರಾನ್ ಅವರ ದಿ ಪ್ರೊಫೆಟ್ ಪುಸ್ತಕದ ಬಗ್ಗೆ ಮಾತನಾಡಿದರು.
ಖಲೀಲ್ ಅವರನ್ನು ನಾವು ಬಳಸುವ ಭಾಷೆಯಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಇವರ ಬಾಲ್ಯ ಕಡುಬಡತನದಾಗಿದ್ದು, ಚರ್ಚ್ ಮೂಲಕ ಶಿಕ್ಷಣ ಪಡೆದು ಒಬ್ಬ ದಾರ್ಶಿಕನಾಗುತ್ತಾರೆ. ಇವರ ಬಾಲ್ಯ, ಬಡತನ, ದುಃಖ ಸಾವುಗಳಲ್ಲಿ ಕಳೆಯಿತು. ಇವರ ಸಾಹಿತ್ಯದ ಭಾವಗಳು ಇವರನ್ನು ಗಡೀಪಾರನ್ನಾಗಿ ಮಾಡಿತು. ಜೀವನದಲ್ಲಿ ಮನಶುದ್ಧಿ ಬೇಕೆಂದು ಹೇಳುವ ಅಲ್ಲಮಪ್ರಭು ಮಾತುಗಳು ಗಿಬ್ರಾನನಲ್ಲಿ ಕಾಣಬಹುದು. ತಮ್ಮನ್ನು ತಾವು ಗ್ರಹಿಸುವ ಶಕ್ತಿ ತರ್ಕ, ಧರ್ಮ, ಪ್ರಮಾಣ ಭಾಷೆಯನ್ನು ಆಧರಿಸಿರುತ್ತದೆ. ಇವುಗಳಿಗೆ ಇರುವ ಮಿತಿಯಂತ್ಯರ ಸತ್ಯವನ್ನು ಹಿಡಿಯಲು ಹೋಗುವುದೇ ಸಂತ, ಅವಧೂತ. ಅಂತರಂಗದ ಸತ್ಯದ ಬೆನ್ನಟ್ಟಿ ಹೋಗುವವರು ಪ್ರವಾದಿಗಳು. ಇಂಥ ಪ್ರವಾದಿ ಖಲೀಲ್ ಗಿಬ್ರಾನ್ ಎಂದರು.
ಖಲೀಲ್ ಗಿಬ್ರಾನ್ ಎಲ್ಲಾ ಧರ್ಮಗಳ ಚೌಕಟ್ಟನ್ನು ಧಿಕ್ಕರಿಸುತ್ತಾರೆ. ಅಂತರಂಗದ ಪಾವಿತ್ರತೆಯ ಸಾಧನೆ, ತನ್ನನ್ನೇ ತಾನು ಪ್ರಾಮಾಣಿಸಿಕೊಳ್ಳುವ ಕ್ರಿಯೆ ಆತ್ಮ, ಆಪ್ತ ,ಸಖಿಯ ಸಂವಾದ ಎನ್ನುತ್ತಾರೆ ಎಂದು ವಿವರಿಸಿದರು.
ಕೃತಿಕಾರ, ಅನುವಾದಕ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿ, ಖಲೀಲ್ ಗಿಬ್ರಾನ್ ಅವರ ಕೃತಿಯ ಅನುವಾದಕ್ಕೆ ಬಹಳ ದೊಡ್ಡ ಎದೆಗಾರಿಕೆ ಬೇಕಾಗುತ್ತದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾರಾಟವಾದಂತಹ ಪುಸ್ತಕ ದಿ ಪ್ರೊಫೆಟ್ ಅಥವಾ ಪ್ರವಾದಿ. ಇದಕ್ಕೆ ಪ್ರಕಾಶಕರು ಯಾರೂ ಮುಂದೆ ಬಂದಿಲ್ಲ ಎಂಬುದು ವಿಪರ್ಯಾಸ ಸಂಗತಿ. ಐದು ವರ್ಷಗಳ ನಂತರ ಒಂದು ಒಪ್ಪಂದದ ಮೂಲಕ ಪುಸ್ತಕವನ್ನು ಮುದ್ರಿಸಲಾಯಿತು ಎಂದರು.
ಗಿಬ್ರಾನ್ ಒಬ್ಬ ಕಲಾವಿದ ಎಂದೇ ವಿದೇಶಗಳಲ್ಲಿ ಸ್ವೀಕರಿಸಿದ್ದಾರೆ. ಪಾಶ್ಚಾತ್ಯರು ಈತನನ್ನು ದಾರ್ಶನಿಕ ಎಂದು ಸ್ವೀಕರಿಸಲಿಲ್ಲ. ಭಾರತದಲ್ಲಿ ಆತನನ್ನು ಒಬ್ಬ ದೊಡ್ಡ ದಾರ್ಶನಿಕ, ಅನುಭವಿ, ಸಂತ ಎಂದು ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಸಂವಾದದಲ್ಲಿ ನಟರಾಜ್, ಆದಿಮ ಡ್ರಾಮ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹ.ಮಾ.ರಾಮಚಂದ್ರ, ಜೆ.ಜಿ.ನಾಗರಾಜ, ಸಿ.ಎಂ.ಮುನಿಯಪ್ಪ, ನೇತ್ರಾವತಿ, ನಡುಪಳ್ಳಿ ಮಂಜುನಾಥ, ವಿಶ್ವ ಕುಂದಾಪುರ, ಆದಿಮ ಗೋವಿಂದಪ್ಪ, ನೀಲಕಂಠೆ ಗೌಡ, ಕೆ.ಎಸ್.ಗಣೇಶ್, ಸತೀಶ್ ಕಾಟೇರಿ, ಜಯಸಿಂಹ, ಟೀಚರ್ ನಂಜುಂಡಪ್ಪ, ಇಂಚರ ನಾರಾಯಣಸ್ವಾಮಿ, ಪ್ರೀತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.