ADVERTISEMENT

ಕೋಚಿಮುಲ್‌ ಚುನಾವಣೆ: ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 15:06 IST
Last Updated 4 ಮೇ 2019, 15:06 IST
ಮುಳಬಾಗಿಲು ತಾಲ್ಲೂಕಿನ ಆರ್.ರಾಜೇಂದ್ರಗೌಡ ಅವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌್ ಹಾಗೂ ಬೆಂಬಲಿಗರೊಂದಿಗೆ ಶನಿವಾರ ಕೋಲಾರಕ್ಕೆ ಬಂದು ಕೋಚಿಮುಲ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಮುಳಬಾಗಿಲು ತಾಲ್ಲೂಕಿನ ಆರ್.ರಾಜೇಂದ್ರಗೌಡ ಅವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌್ ಹಾಗೂ ಬೆಂಬಲಿಗರೊಂದಿಗೆ ಶನಿವಾರ ಕೋಲಾರಕ್ಕೆ ಬಂದು ಕೋಚಿಮುಲ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.   

ಕೋಲಾರ: ಕೋಚಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮೇ 13ರಂದು ಚುನಾವಣೆ ನಡೆಯಲಿದ್ದು, ಮುಳಬಾಗಿಲು ತಾಲ್ಲೂಕಿನಿಂದ ಆರ್.ರಾಜೇಂದ್ರಗೌಡ ಇಲ್ಲಿ ಶನಿವಾರ ಉಪ ವಿಭಾಗಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಮುಳಬಾಗಿಲು ತಾಲ್ಲೂಕಿನ ಅಂಬ್ಲಿಕಲ್ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಯಾಗಿರುವ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ರಾಜೇಂದ್ರಗೌಡರ ಉಮೇದುವಾರಿಕೆಗೆ ಸೂಚಕರಾಗಿ ಸಹಿ ಹಾಕಿದರು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊತ್ತೂರು ಮಂಜುನಾಥ್, ‘ಇಡೀ ಜಿಲ್ಲೆಗೆ ಮಾದರಿಯಾಗುವಂತೆ ಅಂಬ್ಲಿಕಲ್‌ ಡೇರಿ ಅಭಿವೃದ್ಧಿಪಡಿಸಿದ್ದೇನೆ. ಹಾಲು ಉತ್ಪಾದಕರಿಗೆ ಸ್ವಂತ ಹಣದಲ್ಲಿ 10 ಮತ್ತು 20 ಲೀಟರ್ ಸಾಮರ್ಥ್ಯದ ಹಾಲಿನ ಕ್ಯಾನ್ ವಿತರಿಸಿದ್ದೇನೆ. ತಾಲ್ಲೂಕಿನ ಹಲವೆಡೆ ಹೊಸ ಡೇರಿ ಕಟ್ಟಡ ನಿರ್ಮಾಣಕ್ಕೆ ₹ 2 ಲಕ್ಷ ಕೊಟ್ಟಿದ್ದೇನೆ. ಕೋಚಿಮುಲ್‌ನಿಂದ ತಲಾ ₹ 5 ಲಕ್ಷ ಬಂದಿದೆ’ ಎಂದರು.

ADVERTISEMENT

‘ಡೇರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಾಲಿ ನಿರ್ದೇಶಕರನ್ನೇ ಒಮ್ಮತದಿಂದ ಚುನಾವಣಾ ಕಣಕ್ಕಿಳಿಸಿದ್ದೇವೆ. ಹಾಲು ಉತ್ಪಾದಕರ ಮಹಿಳಾ ಸಂಘದ ಪ್ರತಿನಿಧಿ ಸ್ಥಾನಕ್ಕೆ ಕುರುಬರಹಳ್ಳಿಯ ಪ್ರಭಾವತಿ ಅವರು ಮೇ 6ರಂದು ನಾಮಪತ್ರ ಸಲ್ಲಿಸುತ್ತಾರೆ’ ಎಂದು ವಿವರಿಸಿದರು.

ಕೋಚಿಮುಲ್‌ ಹಾಲಿ ನಿರ್ದೇಶಕ ಹಾಗೂ ಅಭ್ಯರ್ಥಿ ರಾಜೇಂದ್ರಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ, ಮುಳಬಾಗಿಲು ನಗರಸಭೆ ಮಾಜಿ ಅಧ್ಯಕ್ಷ ಮುರಳಿ, ಎಪಿಎಂಸಿ ಅಧ್ಯಕ್ಷ ವಿಶ್ವನಾಥಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ವಿ.ಶ್ರೀನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಪಿ.ರವಿಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.