ADVERTISEMENT

14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 15:36 IST
Last Updated 18 ಫೆಬ್ರುವರಿ 2023, 15:36 IST
   

ಕೋಲಾರ: 14ರ ಹರೆಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜಿಲ್ಲೆಯ ಕೆಜಿಎಫ್ ಉಪವಿಭಾಗದ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಪೊಲೀಸ್ ಠಾಣೆ ಸರಹದ್ದಿನ ನಾಲ್ವರು ಅಪರಾಧಿಗಳಿಗೆ ಪೋಕ್ಸೊ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ವಾಸಿ ಆನಂದ್‌, ಕೆಜಿಎಫ್‌ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕಾಂತರಾಜ್, ಬಂಗಾರಪೇಟೆ ತಾಲ್ಲೂಕಿನ ಕಾಮಸಮದ್ರಂ ಎ.ಕೆ.ಕಾಲೋನಿ ನಿವಾಸಿ ಪ್ರವೀಣ್ ಮತ್ತು ಬೆಂಗನೂರು ಗ್ರಾಮದ ವೇಣು ಶಿಕ್ಷೆಗೆ ಒಳಗಾದವರು.

2022ರ ಫೆಬ್ರುವರಿ 18ರಂದು ಬಾಲಕಿಯು ತನ್ನ ಜನ್ಮದಿನದ ಪ್ರಯುಕ್ತ ಹೊಸ ಬಟ್ಟೆ ಕೊಡಿಸುವಂತೆ ತಾಯಿ ಬಳಿ ಕೇಳಿದ್ದಳು. ಬಟ್ಟೆ ಕೊಡಿಸದ ಕಾರಣ ಮುನಿಸಿಕೊಂಡು ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದಳು. ಈ ಸಂದರ್ಭದಲ್ಲಿ ಆ ಬಾಲಕಿಯನ್ನು ಅಪಹರಿಸಿದ ಯುವಕರು ತನಿಮಡುಗು ಗ್ರಾಮದ ಬಾರ್‌ ಹಿಂಭಾಗದಲ್ಲಿರುವ ಸರ್ವೆ ನಂ 17ರ ಬೀಡು ಜಮೀನಿನಲ್ಲಿ ಬಿಯರ್‌ ಕುಡಿಸಿ, ಎಗ್‌ ರೈಸ್‌ ತಿನ್ನಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಸಂಬಂಧ ದೂರು ದಾಖಲಾಗಿತ್ತು.

ADVERTISEMENT

ಕಲಂ 363, 376 (ಡಿಎ), 376 (3), 34 ಐಪಿಸಿ ಮತ್ತು ಕಲಂ 6 ಪೋಕ್ಸೊ ಕಾಯ್ದೆ ರೀತಿ ಪ್ರಕರಣ ದಾಖಲಿಸಿಕೊಂಡ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು. ಸಾಮೂಹಿಕ ಅತ್ಯಾಚಾರವೆಸಗಿರುವುದು ತನಿಖೆಯಿಂದ ಸಾಬೀತಾಗಿದ್ದು, ಸರ್ಕಲ್‌ ಇನ್‌ಸ್ಪೆಕ್ಟರ್‌ ಜೆ.ಎನ್‌.ಆನಂದ್‌ ಕುಮಾರ್‌ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಧಿಗಳಾದ ಆನಂದ್ (ಎ1), ಕಾಂತರಾಜ್ (ಎ2), ಪ್ರವೀಣ್ (ಎ3) ಮತ್ತು ವೇಣು (ಎ4) ಅವರಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.