ADVERTISEMENT

ಕೋಲಾರ | ರಾಜ್ಯದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ: ಕೇಶವ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 7:03 IST
Last Updated 15 ಫೆಬ್ರುವರಿ 2026, 7:03 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಕೇಶವ ಪ್ರಸಾದ್ ಮಾತನಾಡಿದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಕೇಶವ ಪ್ರಸಾದ್ ಮಾತನಾಡಿದರು   

ಕೋಲಾರ: ರಾಜ್ಯದಲ್ಲಿ ಸಾವಿರ ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ್ದು ಶೂನ್ಯ ಸಾಧನೆ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಜಿಲ್ಲಾ ಉಸ್ತುವಾರಿ ಕೇಶವ ಪ್ರಸಾದ್ ಆರೋಪಿಸಿದರು.

ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿ ಇಲಾಖೆಯೂ ಭ್ರಷ್ಟಾಚಾರದ ತವರು ಮನೆಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳನ್ನು ತಂದು ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಕೋಲಾರ ಜಿಲ್ಲೆಗೆ ಸಂಬಂಧಪಟ್ಟಂತೆ ಹಿಂದಿನ ಕೋಚಿಮುಲ್‍ನಲ್ಲಿ ಉದ್ಯೋಗ ನೀಡಲು ಅಭ್ಯರ್ಥಿಗಳಿಂದ ₹30 ಲಕ್ಷ ವಸೂಲಿ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಅಧಿಕಾರಕ್ಕೆ ಬಂದ ಆರಂಭದಲ್ಲಿ ಮುಡಾದಲ್ಲಿ ₹3,500 ಕೋಟಿ ಹಗರಣ, ಎಸ್‌ಸಿಪಿ ₹7,713 ಕೋಟಿ. ಟಿಎಸ್‌ಪಿ ₹3,430 ಕೋಟಿ ‌ದುರುಪಯೋಗ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣ ಬೆಳಕಿಗೆ ತಂದು ಸಚಿವರು ರಾಜೀನಾಮೆ ಕೊಟ್ಟಿದ್ದರು. ಇದೀಗ ಅಬಕಾರಿ ಹಗರಣ ಬಯಲಿಗೆ ಎಳೆದಿದ್ದು, ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿದ್ದೇವೆ. ಆದರೆ, ಅವರು ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕವನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿರುವ ಕಾಂಗ್ರೆಸ್ ಸರ್ಕಾರ, ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಮರಣ, ಜನನ ಪ್ರಮಾಣ ಪತ್ರ ಪಡೆದುಕೊಳ್ಳಲು ₹20 ಶುಲ್ಕ ನಿಗದಿಪಡಿಸಿದೆ. ಹಾಲು, ವಿದ್ಯುತ್, ನೀರು, ಬಿತ್ತನೆ ಬೀಜ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರಿದೆ ಎಂದು ಕಿಡಿಕಾರಿದರು.

ಹಗರಣಗಳಲ್ಲಿ ಭಾಗಿಯಾಗಿದ್ದ ಬಿ.ನಾಗೇಂದ್ರ, ಶಾಸಕರಾದ ಸತೀಶ್ ಸೈಲ್‌, ವೀರೇಂದ್ರ ಪಪ್ಪಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಜೈಲು ವಾಸ ಅನುಭವಿಸಿ ಬಂದಿದ್ದಾರೆ. 2 ವರ್ಷಗಳಲ್ಲಿ 1,886 ಮಂದಿ ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಕೈ ಸರ್ಕಾರ ಕಾರಣ. ಕಾಲಕಾಲಕ್ಕೆ ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದರೆ ಅನಾಹುತಗಳು ಸಂಭವಿಸುತ್ತಿರಲಿಲ್ಲ ಎಂದರು.

ಇಲಾಖೆಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಿ 2 ಲಕ್ಷ ಉದ್ಯೋಗಸ್ಥರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. ದರೋಡೆಗಳು, ದೌರ್ಜನ್ಯಗಳು, ಮಾದಕ ವಸ್ತುಗಳ ಸಾಗಾಟ, ಮಾರಾಟ, ಜೈಲಿನಲ್ಲಿ ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡಿರುವುದನ್ನು ಗಮನಿಸುತ್ತಿದ್ದರೆ ರಾಜ್ಯದ ಕಾನೂನು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಐದು ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ ಅಭಿವೃದ್ಧಿ ಗ್ಯಾರಂಟಿ ನೀಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೆಂಡರ್ ಹಣ ಪಡೆದುಕೊಳ್ಳಲು ಗುತ್ತಿಗೆದಾರರು ಶೇ 60ರಷ್ಟು ಕಮಿಷನ್ ನೀಡಬೇಕಾಗಿರುವ ಆರೋಪ ಮಾಡಿದ್ದಾರೆ. ಬಡವರ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಪಡಿಸುವ ಮೂಲಕ ಬಡವರ ಅನ್ನಕ್ಕೂ ಕನ್ನ ಹಾಕಿದೆ. 1000 ದಿನಗಳ ಆಚರಣೆ ಮಾಡಲು ಹೊರಟಿರುವುದು ಸರ್ಕಾರದ ಲಜ್ಜೆಗೇಡಿತನ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಜಿಲ್ಲೆಗೆ ಸಿಮೀತವಾಗಿಯೂ ಕೃಷ್ಣಬೈರೇಗೌಡರ ವಿರುದ್ಧ ಹೋರಾಟ, ಶಾಲೆಗೆ ಭೂದಾನ ಆಗಿದ್ದ ಪ್ರಕರಣ ಬೆಳಕಿಗೆ ತಂದು ಹೋರಾಟ ನಡೆಸುತ್ತಿದ್ದೇವೆ. ಜನರಿಗೆ ಯಾವುದೇ ವಿಚಾರದಲ್ಲಿ ತೊಂದರೆಯಾದರೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ವಿಜಯ್ ಕುಮಾರ್, ಸಿ.ಡಿ.ರಾಮಚಂದ್ರ, ಅರುಣಮ್ಮ, ಬೆಗ್ಲಿ ಪ್ರಕಾಶ್, ಬಾಲಾಜಿ, ಕೆಂಬೋಡಿ ನಾರಾಯಣಸ್ವಾಮಿ, ಕೃಷ್ಣಪ್ಪ, ಚಂದ್ರಶೇಖರ್, ರಾಜೇಶ್ ಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.