ಮಾಲೂರು: ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಇಗಲೂರು ಗ್ರಾಮದ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದು, ವೈದ್ಯರೊಬ್ಬರ ಎಡವಟ್ಟು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾನವಿ ಮೃತ ಬಾಲಕಿ. ಸೆ.30ರಂದು ಜ್ವರ ಕಾಣಿಸಿಕೊಂಡ ಕಾರಣ ಪೋಷಕರು ಪಕ್ಕದ ಸಂತೇಹಳ್ಳಿ ಗ್ರಾಮದಲ್ಲಿರುವ ಕ್ಲಿನಿಕ್ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆಗ ವೈದ್ಯರು ಚುಚ್ಚುಮದ್ದು ನೀಡಿದ್ದಾರೆ. ನಂತರ ಬಾಲಕಿ ನೋವಿನಿಂದ ನರಳಾಡಿದ್ದಾಳೆ. ಪೋಷಕರು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಇನ್ನೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗುರುವಾರ ನಸುಕಿನಲ್ಲಿ ವಾಂತಿ ಮಾಡಿಕೊಂಡು ಬಾಲಕಿ ಮೃತಪಟ್ಟಿದ್ದಾಳೆ.
ಪೋಷಕರಾದ ರಾಜೇಂದ್ರ ಹಾಗೂ ರೇಣುಕಾ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವೈದ್ಯರೊಬ್ಬರು ನೀಡಿದ ಚುಚ್ಚುಮದ್ದಿನಿಂದ ಈ ಎಡವಟ್ಟು ಸಂಭವಿಸಿದೆ ಎಂದು ದೂರಿದ್ದಾರೆ. ಚುಚ್ಚು ಮದ್ದು ನೀಡಿದ್ದು ನಕಲಿ ವೈದ್ಯ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ರಕ್ತವನ್ನು ಪರೀಕ್ಷೆಗೆ ಕಳಿಸಲಾಗಿದೆ ಎಂಬುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.