
ಕೋಲಾರದ ಗಾಂಧಿನಗರದಲ್ಲಿ ಮಂಗಳವಾರ ಚಂದ್ರ ಗ್ರಹಣ ವೇಳೆ ಬಹುಜನ ವಿಚಾರ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಪದಾಧಿಕಾರಿಗಳು ಆಹಾರ ಸೇವಿಸಿದರು
ಕೋಲಾರ: ಮೌಢ್ಯ ಹೋಗಲಾಡಿಸಲು ನಗರದ ಗಾಂಧಿವನದಲ್ಲಿ ಮಂಗಳವಾರ ಬಹುಜನ ವಿಚಾರ ವೇದಿಕೆಯಿಂದ ಗ್ರಹಣ ಕಾಲದಲ್ಲಿ ಹಣ್ಣು, ತಿಂಡಿ, ಪಾನೀಯ ಸೇವನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಮಾತನಾಡಿ, ‘ಚಂದ್ರ ಗ್ರಹಣದ ನೆಪದಲ್ಲಿ ಮೌಢ್ಯವನ್ನು ಬಿತ್ತುವ ಮೂಲಕ ವೈಜ್ಞಾನಿಕ ಚಿಂತನೆಗಳಿಗೆ ಕೊಡಲಿಪೆಟ್ಟು ನೀಡುವ ಕ್ರಮ ಸರಿಯಲ್ಲ’ ಎಂದರು.
ಪ್ರಪಂಚದ ಎಲ್ಲ ಕಡೆ ಗ್ರಹಣ ಆಗುತ್ತಿದ್ದು, ಇದನ್ನು ವಿಜ್ಞಾನ, ವಿಸ್ಮಯ, ಕೌತುಕ ಎಂದು ಬಣ್ಣಿಸುವ ಮೂಲಕ ವೀಕ್ಷಣೆ ಮಾಡುತ್ತಿದ್ದರೆ ಭಾರತದಲ್ಲಿ ಮಾತ್ರ ಗ್ರಹಣ ಕಾಲದಲ್ಲಿ ತಿನ್ನಬಾರದು, ಓಡಾಡಬಾರದು, ಗರ್ಭಿಣಿಯರು ಕತ್ತಲಿನಲ್ಲಿ ಇರಬೇಕು, ಗ್ರಹಣ ಬಿಟ್ಟ ನಂತರ ಪೂಜೆ ಮಾಡಿ ಆಹಾರ ಸಾಮಗ್ರಿಗಳನ್ನು ದಾನ ಮಾಡಬೇಕು ಎಂದು ಪ್ರಚಾರ ಮಾಡಿ ಕಂದಾಚಾರವನ್ನು ಸಾರ್ವತ್ರಿಕವಾಗಿ ಹೇರಲಾಗುತ್ತಿದೆ. ಇದನ್ನು ವಿರೋಧಿಸಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಲಾಗುತ್ತಿದೆ ಎಂದು ಹೇಳಿದರು.
ಬಹುಜನ ವಿಚಾರ ವೇದಿಕೆ ಅಧ್ಯಕ್ಷ ಎಸ್.ಚಿನ್ನ ಮಾತನಾಡಿ, ‘ಮುಂದಿನ ಬಾರಿಯ ಗ್ರಹಣದಲ್ಲಿ ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸುವ ಮೂಲಕ ಯುವಶಕ್ತಿಯಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲಾಗುವುದು’ ಎಂದರು.
ಬಿವಿವಿ ಪ್ರಧಾನ ಕಾರ್ಯದರ್ಶಿ ದಿಂಬಚಾಮನಹಳ್ಳಿ ಪ್ರಕಾರ್, ಉಪಾಧ್ಯಕ್ಷ ಅಪ್ರೋಜ್ ಪಾಷ, ರೈತ ಸಂಘದ ಕೂಟೇರಿ ನಾಗರಾಜ್, ಗಾಂಧಿನಗರ ಶ್ರೀಕಾಂತ್, ಕರ್ನಾಟಕ ಸರ್ಕಾರಿ, ನಿಗಮ, ಮಂಡಳಿ ಒಳ ಗುತ್ತಿಗೆ ನೌಕರರ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ಕಮ್ಮಸಂದ್ರ ಎನ್.ದಿಕ್ಷೀತ್, ಶಿಳ್ಳಂಗರೆ ಆನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.