ಕೋಲಾರ: ‘ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಬೇಕು. ಶಾಲಾ ಆವರಣದಲ್ಲಿ ಗಿಡ ಮರ ಬೆಳೆಸಲು ಒತ್ತು ನೀಡಿ’ ಎಂದು ಮುಳಬಾಗಿಲು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ ಯಾದವಾಡ ಕಿವಿಮಾತು ಹೇಳಿದರು.
ಕಾನೂನು ಸೇವಾ ಸಮಿತಿ, ಮುಳಬಾಗಿಲು ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ‘ಮನುಷ್ಯನ ದುರಾಸೆ, ಸ್ವಾರ್ಥದಿಂದ ಅರಣ್ಯ ನಾಶವಾಗುತ್ತಿದೆ’ ಎಂದು ಕಳವಳ ವ್ಯಕ್ತಿಪಡಿಸಿದರು.
‘ಅರಣ್ಯ ನಾಶದಿಂದ ಪರಿಸರ ಅಸಮತೋಲನವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಗಿಡ ಮರ ಬೆಳೆಸುವ ಮೂಲಕ ಮುನಿಸಿಕೊಂಡಿರುವ ಪ್ರಕೃತಿಯನ್ನು ಶಾಂತಗೊಳಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸುವುದರಿಂದ ಮಾಲಿನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ’ ಎಂದರು.
‘ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮವಾಗುತ್ತಿದೆ. ಇದನ್ನು ತಪ್ಪಿಸಲು ಗಿಡ ಮರ ಬೆಳೆಸಬೇಕು’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಎನ್.ಕಾಂತಮ್ಮ ಸಲಹೆ ನೀಡಿದರು.
‘ವಿಶ್ವದಲ್ಲಿ ಪ್ರಕೃತಿ ಸಮತೋಲನಕ್ಕೆ ಇರಬೇಕಾದ ಪ್ರಮಾಣದಲ್ಲಿ ಗಿಡ ಮರಗಳಿಲ್ಲ. ಜನ ಮರ ಗಿಡ ಹಾಳು ಮಾಡಿದ್ದಾರೆ. ಮನೆ, ರಸ್ತೆ, ಕೈಗಾರಿಕೆ, ಉರುವಲಿಗಾಗಿ ಮರ ಕಡಿದಿದ್ದೇವೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಮರ ಬೆಳೆಸಬೇಕು’ ಎಂದು ಹೇಳಿದರು.
ಶಾಲೆ ಮುಖ್ಯ ಶಿಕ್ಷಕ ಬಿ.ಕೆ.ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಎಲ್.ವೆಂಕಟೇಶ್, ಕಾರ್ಯದರ್ಶಿ ಕೆ.ಆರ್.ವೇಣುಗೋಪಾಲ್, ವಕೀಲರಾದ ಎಂ.ಪ್ರಭಾಕರ್, ಎನ್.ಸತೀಶ್ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.