ADVERTISEMENT

ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ ಕೋಲಾರ ಜಿಲ್ಲಾಸ್ಪತ್ರೆ ವೈದ್ಯರು?

ಕೈಮೂಳೆ ಮುರಿತಕ್ಕೆ ಒಳಗಾಗಿ ಚಿಕಿತ್ಸೆಗೆಂದು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಾಗಿದ್ದ ಚಿಂತಾಮಣಿ ತಾಲ್ಲೂಕಿನ ವೃದ್ಧ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:07 IST
Last Updated 24 ಸೆಪ್ಟೆಂಬರ್ 2025, 7:07 IST
ಎಸ್‌ಎನ್‌ಆರ್‌ ಜಿಲ್ಲಾಸ್ಪ‍ತ್ರೆ
ಎಸ್‌ಎನ್‌ಆರ್‌ ಜಿಲ್ಲಾಸ್ಪ‍ತ್ರೆ   

ಕೋಲಾರ: ಸೀಮೆಹಸು ಗುದ್ದಿ ಕೈ ಮೂಳೆ ಮುರಿದುಕೊಂಡಿದ್ದ ವೃದ್ಧರೊಬ್ಬರ ಶಸ್ತ್ರಚಿಕಿತ್ಸೆಗೆ ನಗರದ ಎಸ್ಎನ್‌ಆರ್‌ ಜಿಲ್ಲಾಸ್ಪತ್ರೆಯ ವೈದ್ಯರು ₹ 15 ಸಾವಿರ ಲಂಚ ಕೇಳಿ ವಿಳಂಬ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ರೀತಿ ಆರೋಪ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವಾರು ಬಾರಿ ಶೇರ್‌ ಆಗಿದೆ.

ತಂದೆಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಚಿಕಿತ್ಸೆ ದೊರೆತಿಲ್ಲ ಎಂದು ನಾಗೇಶ್ ಎಂಬುವರು ವಿದೇಶದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿಕ್ಕಮುನಿಯಪ್ಪ ಎಂಬುವರು ಎಡಗೈನ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಮೊದಲು ಚಿಂತಾಮಣಿ ಆಸ್ಪತ್ರೆಯಲ್ಲಿ ತೋರಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಸಮೀಪದ ಕೋಲಾರ ಜಿಲ್ಲಾಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಅದರಂತೆ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿ ಆರು ದಿನ ಕಳೆದರೂ ವೈದ್ಯರು ಚಿಕ್ಕಮುನಿಯಪ್ಪ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಬದಲಾಗಿ ವಿವಿಧ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಕುಟುಂಬದವರು ರೋಸಿ ಹೋಗಿದ್ದಾರೆ.

ಚಿಕ್ಕಮುನಿಯಪ್ಪ ಅವರ ಪುತ್ರ ನಾಗೇಶ್‌ ಜರ್ಮನಿಯಲ್ಲಿದ್ದು, ಅಲ್ಲಿಂದಲೇ ಜಾಣತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

‘ತಂದೆಗೆ 75 ವರ್ಷ ದಾಟಿದ್ದು, ಸೆ.17ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ಮಾಡಿಲ್ಲ. ತಾಯಿ ಜೊತೆಯಲ್ಲಿದ್ದು, ಸಂಬಂಧಿಕರು ಬಂದು ನೋಡಿಕೊಂಡು ಹೋಗುತ್ತಿ‌ದ್ದಾರೆ. ಹಣ ಕೊಟ್ಟಿಲ್ಲವೆಂದು ನನ್ನ ತಂದೆಗೆ ವೈದ್ಯರು ಚಿಕಿತ್ಸೆ ನೀಡಿಲ್ಲ, ಶಸ್ತ್ರಚಿಕಿತ್ಸೆ ನಡೆಸಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೂ ದುಡ್ಡುಕೊಟ್ಟರೆ ಮಾತ್ರ ಕೆಲಸ ನಡೆಯುತ್ತದೆ, ಔಷಧಿ ಸಿಗುತ್ತದೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪಕ್ಕದ ರೋಗಿಯೊಬ್ಬರು ಹಣ ನೀಡಿದ್ದಾರೆ ಎಂದು ಬೇಗನೇ ಶಸ್ತ್ರಚಿಕಿತ್ಸೆ ಮಾಡಿ ಕಳಿಸಿದ್ದಾರೆ’ ಎಂದು ದೂರಿದ್ದಾರೆ.

ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕೋಲಾರ ಜಿಲ್ಲಾಸ್ಪತ್ರೆ ವೈದ್ಯ ಡಾ.ಪ್ರದೀಪ್ ಎಂಬುವರು ಚಿಕ್ಕಮುನಿಯಪ್ಪ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಚಿಕ್ಕಮುನಿಯಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಾವು ಆಸ್ಪತ್ರೆಗೆ ಬಂದು 7 ದಿನ ಆಯಿತು. ನಿತ್ಯ ವೈದ್ಯರು ಬಂದು ಕೇಳುತ್ತಿದ್ದರು. ಆದರೆ, ಇವತ್ತು (ಮಂಗಳವಾರ) ಸರ್ಜರಿ ಮಾಡಿದ್ದಾರೆ. ಚಿಕಿತ್ಸೆ ಸಿಕ್ಕಿದ್ದು ತಡವಾಯಿತು’ ಎಂದು ಪತ್ನಿ ಲಕ್ಷ್ಮಮ್ಮ ಹೇಳಿದರು.

ಚಿಕ್ಕಮುನಿಯಪ್ಪ
ಡಾ.ಜಗದೀಶ್‌

ಲಂಚ ಕೇಳಿದ್ದಾರೆ ಎಂದು ಪುತ್ರ ಆರೋಪ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಆರು ದಿನ ಆಸ್ಪತ್ರೆಯಲ್ಲಿದ್ದರೂ ನಡೆಯದ ಚಿಕಿತ್ಸೆ–ಆರೋಪ

ರೋಗಿ ಬಳಿ ಯಾರೂ ಹಣ ಕೇಳಿಲ್ಲ ನಾನು ಈ ಪ್ರಕರಣದ ಸಂಬಂಧ ವೈದ್ಯರಿಗೆ ನೋಟಿಸ್‌ ನೀಡಿ ವಿವರಣೆ ಕೋರಿದ್ದೆ. ವ್ಯಕ್ತಿಗೆ ವಯಸ್ಸಾಗಿದ್ದರಿಂದ ಕೆಲ ಪ್ರಕ್ರಿಯೆ ನಡೆಸಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಕೆಲ ಪರೀಕ್ಷೆ ತಪಾಸಣೆಗೆ ಒಳಗಾಗಬೇಕಿತ್ತು. ವಿಳಂಬವಾಗಿದ್ದನ್ನೇ ಬೇರೆ ರೀತಿ ಅರ್ಥ ಮಾಡಿಕೊಂಡು ಆರೋಪ ಮಾಡಿದ್ದಾರೆ. ಸಂವಹನ ಕೊರತೆ ಉಂಟಾಗಿದೆ. ರೋಗಿ ಬಳಿ ಯಾವ ವೈದ್ಯರೂ ಹಣ ಕೇಳಿಲ್ಲ. ಈಗ ಎಲ್ಲವೂ ಸರಿ ಹೋಗಿದ್ದು ವ್ಯಕ್ತಿಗೆ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ ಡಾ.ಜಗದೀಶ್‌ ಜಿಲ್ಲಾ ಶಸ್ತ್ರಚಿಕಿತ್ಸಕ ಕೋಲಾರ ಜಿಲ್ಲಾಸ್ಪತ್ರೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚ ಕೊಡಬೇಕೇ? ‘ವೈದ್ಯರಿಗೆ ಅನಸ್ತೇಸಿಯಾ ನೀಡುವವರಿಗೆ ಉಳಿದವರಿಗೆ ಎಲ್ಲಾ ಸೇರಿ ಒಟ್ಟು ₹ 15 ಸಾವಿರ ನೀಡಿದರೆ ಎಲ್ಲಾ ರೀತಿಯ ಚಿಕಿತ್ಸೆ ಕೊಟ್ಟು ಶಸ್ತ್ರಚಿಕಿತ್ಸೆ ನಡೆಸಿ ಕಳಿಸುತ್ತಾರೆ ಎಂಬುದು ಗೊತ್ತಾಯಿತು. ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೇ ರೀತಿ ನಡೆಯುತ್ತಿದೆಯೇ? ಎಲ್ಲಾ ಆಸ್ಪತ್ರೆಗಳಲ್ಲಿ ಲಂಚ ಕೊಡಬೇಕೇ? ದುಡ್ಡು ಕೊಟ್ಟರೆ ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ? ಬಡವರು ಯಾವ ಆಸ್ಪತ್ರೆಗೆ ಹೋಗಬೇಕು?ಶಾಸಕರು ಸಂಸದರು ಏನು ಮಾಡುತ್ತಿದ್ದಾರೆ’ ಎಂದು ನಾಗೇಶ್‌ ಎಂಬುವರು ವಿಡಿಯೊ ಮೂಲಕ ಪ್ರಶ್ನಿಸಿದ್ದಾರೆ.

ಜರ್ಮನಿಯಿಂದ ವಿಡಿಯೊ ಮಾಡಿದ ಪುತ್ರ ತಂದೆ ಚಿಕ್ಕಮುನಿಯಪ್ಪ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಕೋಲಾರ ಜಿಲ್ಲಾಸ್ಪತ್ರೆ ವೈದ್ಯರು ಲಂಚ ಕೇಳಿದ್ದಾರೆ ಎನ್ನಲಾದ ವಿಚಾರ ತಿಳಿದ ಅವರ ಪುತ್ರ ಜರ್ಮಿನಿಯ ಬರ್ಲಿನ್‌ನಿಂದ ವಿಡಿಯೊ ಮಾಡಿ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಹಲವರು ಲೈಕ್‌ ಕಮೆಂಟ್‌ ಮೂಲಕ ಆಸ್ಪತ್ರೆಯ ಕ್ರಮವನ್ನು ಖಂಡಿಸಿದ್ದಾರೆ. ಈ ವಿಡಿಯೊ ಸಾವಿರಕ್ಕೂ ಅಧಿಕ ಶೇರ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.