ADVERTISEMENT

ಕೋಲಾರ: ಹಾಸ್ಟೆಲ್‌ನ 41 ವಿದ್ಯಾರ್ಥಿಗಳು ಅಸ್ವಸ್ಥ

ಈರುಳ್ಳಿ ದೋಸೆ ತಿಂದ ಬಳಿಕ ಆರೋಗ್ಯದಲ್ಲಿ ಏರುಪೇರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:52 IST
Last Updated 14 ಆಗಸ್ಟ್ 2025, 7:52 IST
ಕೋಲಾರದ ಖಾಸಗಿ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ
ಕೋಲಾರದ ಖಾಸಗಿ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ   

ಪ್ರಜಾವಾಣಿ ವಾರ್ತೆ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜೊಂದರ ಹಾಸ್ಟೆಲ್‌ನ ಸುಮಾರು 41 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ವಿದ್ಯಾರ್ಥಿಗಳು ಈರುಳ್ಳಿ ದೋಸೆ, ಚಟ್ನಿ ಹಾಗೂ ಆಲೂ ಸಾಗು ಸೇವಿಸಿದ್ದಾರೆ. ಮುಂಜಾನೆ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಹಾಗೂ ಭೇದಿಯಾಗಿದೆ. ತಕ್ಷಣವೇ ಎಲ್ಲರನ್ನೂ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯಕ್ಕೆ ಕಾರಣವಾದ ಈ ವಿಚಾರವನ್ನು ಕೆಲ ವಿದ್ಯಾರ್ಥಿಗಳು ಹೇಳಿಕೊಂಡರು.

ADVERTISEMENT

ಒಬ್ಬ ಉಪನ್ಯಾಸಕ ಕೂಡ ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ 41 ಮಂದಿಯಲ್ಲಿ ಬಹುತೇಕರು ಚೇತರಿಸಿಕೊಳ್ಳುತ್ತಿದ್ದಾರೆ. ಪೂರ್ಣ ಚೇತರಿಸಿಕೊಂಡಿರುವ ನಾಲ್ಕೈದು ಮಂದಿ ಈಗಾಗಲೇ ಆಸ್ಪತ್ರೆಯಿಂದ ತೆರಳಿದ್ದಾರೆ. 

ಈ ಹಾಸ್ಟೆಲ್‌ನಲ್ಲಿ ಒಟ್ಟು 61 ಮಂದಿ ಇದ್ದಾರೆ. ಇವರು ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾರೆ. ಅಸ್ವಸ್ಥಗೊಂಡವರಲ್ಲಿ ವಿದ್ಯಾರ್ಥಿನಿಯೂ ಇದ್ದಾರೆ.

ಆಹಾರ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ತಿಳಿಸಿದರು. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟಾಗಿಲ್ಲ ಎಂದರು.

ಹಾಸ್ಟೆಲ್‌ನಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣೆಯ ಪ್ರಕ್ರಿಯೆ ಕುರಿತು ಆಹಾರ ಸುರಕ್ಷತಾ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್‌ ತಪಾಸಣೆ ನಡೆಸಿದರು. ಬಳಿಕ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದರು.

ತಹಶೀಲ್ದಾರ್‌ ಡಾ.ನಯನಾ ಮತ್ತು ಜಿಲ್ಲಾಸ್ಪತ್ರೆ ಸರ್ಜನ್‌ ಡಾ.ಜಗದೀಶ್‌ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. 

ಕಾಲೇಜಿನ ಆಡಳಿತ ಮಂಡಳಿಯು ಈ ಘಟನೆ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮ ವಹಿಸುವುದಾಗಿಯೂ ಹೇಳಿದೆ.

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಪರೀಕ್ಷೆಗಾಗಿ ಹಾಸ್ಟೆಲ್‌ನಿಂದ ಸಂಗ್ರಹಿಸಿರುವ ಆಹಾರ ಮಾದರಿ
ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿಗಳು

Highlights - null

Quote - ಆಸ್ಪತ್ರೆಗೆ ಒಟ್ಟು 41 ವಿದ್ಯಾರ್ಥಿಗಳು ದಾಖಲಾಗಿದ್ದು ನಮ್ಮ ಸಿಬ್ಬಂದಿ ಚಿಕಿತ್ಸೆ ನೀಡಿದರು. ಯಾವುದೇ ಅಪಾಯ ಇಲ್ಲ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವರು ಆಸ್ಪತ್ರೆಯಿಂದ ತೆರಳಿದ್ದಾರೆ ಡಾ.ಜಗದೀಶ್‌ ಜಿಲ್ಲಾ ಸರ್ಜನ್‌ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ

Cut-off box - ಪರೀಕ್ಷೆಗೆ ಆಹಾರ ಮಾದರಿ ಸಂಗ್ರಹ ‘ಹಾಸ್ಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದೆವು. ಅಕ್ಕಿ ಸಕ್ಕರೆ ನೀರು ಉದ್ದಿನ ಬೇಳೆ ಈರುಳ್ಳಿ ಸೇರಿದಂತೆ ವಿವಿಧ ಅಹಾರ ಮಾದರಿ ಸಂಗ್ರಹಿಸಿದ್ದೇವೆ. ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿಕೊಡುತ್ತೇವೆ. ಹಾಸ್ಟೆಲ್‌ನ ಅಡುಗೆ ಮನೆ ಬಂದ್‌ ಮಾಡಿದ್ದು ಮುಂದಿನ ಆದೇಶ ಬರುವವರೆಗೆ ತೆರೆಯುವಂತಿಲ್ಲ. ಮಹಜರ್‌ ಕೂಡ ಮಾಡಿದ್ದೇವೆ’ ಎಂದು ಆಹಾರ ಸುರಕ್ಷಿತ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.