ADVERTISEMENT

ಗೃಹಭಾಗ್ಯ ಯೋಜನೆ | ಪೌರಕಾರ್ಮಿಕರಿಗೆ ವಸತಿ ಸಮುಚ್ಚಯ: ನಗರಸಭೆಯ ಹೊಸ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 5:18 IST
Last Updated 26 ಸೆಪ್ಟೆಂಬರ್ 2023, 5:18 IST
ಕೆಜಿಎಫ್‌ ಹೊರವಲಯದ ಸೂರಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ
ಕೆಜಿಎಫ್‌ ಹೊರವಲಯದ ಸೂರಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ   

ವರದಿ – ಕೃಷ್ಣಮೂರ್ತಿ

ಕೆಜಿಎಫ್‌: ಅತಿ ಕಡಿಮೆ ವೆಚ್ಚದಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿ, ಅವರ ಸ್ವಂತಕ್ಕೆ ನೀಡಿದ ನಗರಸಭೆ ರಾಜ್ಯದಲ್ಲಿ ಹೊಸ ಮುನ್ನುಡಿ ಬರೆದಿದೆ.

ನಗರದ ಹೊರವಲಯದ ಸೂರಪಲ್ಲಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಎರಡು ಅಂತಸ್ತಿನ 59 ಮನೆಗಳ ಸಮುಚ್ಚಯವನ್ನು ಈಚೆಗೆ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಯಿತು.

ADVERTISEMENT

ಗೃಹಭಾಗ್ಯ ಯೋಜನೆಯಡಿ ಈ ಮನೆಗಳ ನಿರ್ಮಾಣಕ್ಕೆ ನಾಲ್ಕು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಮೊದ ಮೊದಲು ನಗರದಿಂದ ಹೊರಭಾಗದಲ್ಲಿರುವ ಸೂರಪಲ್ಲಿಗೆ ಹೋಗಲು ಪೌರಕಾರ್ಮಿಕರು ಹಿಂದೇಟು ಹಾಕಿದರು. ಆದರೆ ಅಲ್ಲಿನ ಮೂಲಭೂತ ಸೌಕರ್ಯ ಮತ್ತು ಇತರ ಪ್ರಯೋಜನಗಳನ್ನು ಕಂಡು, ಅಲ್ಲಿಗೆ ಸ್ಥಳಾಂತರವಾಗಲು ನಿರ್ಧರಿಸಿದರು.

ಎಲ್ಲಾ ಮನೆಗಳ ಮುಂದೆ ವಿಸ್ತಾರವಾದ ಸಿಮೆಂಟ್ ರಸ್ತೆ, ಸದಾ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಉದ್ಯಾನ ಮುಂತಾದ ಮೂಲಭೂತ ಸೌಕರ್ಯಗಳನ್ನು ವಸತಿ ಸಮುಚ್ಚಯ ಹೊಂದಿದೆ.

ಮನೆಗಳಿಗೆ ಪೌರಕಾರ್ಮಿಕರ ಜೊತೆ ಡಿ ಗ್ರೂಪ್‌ ನೌಕರರಿಂದಲೂ ಬೇಡಿಕೆ ಬಂದಿದ್ದು, ಆಶ್ರಯ ಬಡಾವಣೆಯಲ್ಲಿ ಅವರಿಗೂ ನಿವೇಶನ ನೀಡಿ, ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಶಾಸಕಿ ರೂಪಕಲಾ ಈಗಾಗಲೇ ಆಶ್ವಾಸನೆ ನೀಡಿದ್ದಾರೆ.

ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿರುವುದು ರಾಜ್ಯದಲ್ಲಿಯೇ ಇದೇ ಪ್ರಥಮ.
ಎಂ.ರೂಪಕಲಾ ಶಾಸಕಿ
ಯಾವುದೇ ಮೂಲಭೂತ ಸೌಕರ್ಯ ಇಲ್ಲದ ಮನೆಗಳಿಂದ ಇಲ್ಲಿಗೆ ಸ್ಥಳಾಂತರವಾಗಿದ್ದು ಖುಷಿ ತಂದಿದೆ
ರಾಜಾ ಪೌರಕಾರ್ಮಿಕ
‘30 ವರ್ಷ ಮನೆ ಪರಭಾರೆಗಿಲ್ಲ ಅವಕಾಶ’
ಸಮುಚ್ಚಯದಲ್ಲಿರುವ ಮನೆಗಳ ಸೌಂದರ್ಯ ಮತ್ತು ಸೌಲಭ್ಯ ಕಂಡು ಈಗ ಮನೆಗಳಿಗೆ ಬೇಡಿಕೆ ಬಂದಿದೆ. ಉಳಿದ ಪೌರಕಾರ್ಮಿಕರು ಸಹ ಮನೆಗಳನ್ನು ನೀಡುವಂತೆ ಕೋರುತ್ತಿದ್ದಾರೆ. ಒಂದು ಮನೆ ನಿರ್ಮಾಣಕ್ಕೆ ₹7.5 ವೆಚ್ಚವಾಗಿದ್ದು ಅದರಲ್ಲಿ ₹1.5 ಲಕ್ಷ ಮಾತ್ರ ಫಲಾನುಭವಿ ಭರಿಸಿದ್ದಾರೆ. ಅವರಿಗೆ ಸ್ವಾಧೀನ ಪತ್ರ ನೀಡಲಾಗಿದೆ. ಮೂವತ್ತು ವರ್ಷಗಳ ಕಾಲ ಅದನ್ನು ಪರಭಾರೆ ಮಾಡದಂತೆ ಷರತ್ತು ವಿಧಿಸಲಾಗಿದೆ. ಇನ್ನೂ 24 ಮನೆ ನಿರ್ಮಾಣ ಮಾಡಲು ಜಾಗವಿದ್ದು ಶೀಘ್ರದಲ್ಲಿಯೇ ಅಲ್ಲೂ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಪವನ್‌ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.