
ಕೋಲಾರ: ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹೊಸಕೋಟೆ ಆಟೊ ಚಾಲಕ ಹಾಗೂ ತನ್ನ ಸೋದರ ಮಾವ ನಯಾಜ್ ಖಾನ್ ಎಂಬುವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಶಾಹಿದ್ ಖಾನ್ ಹಾಗೂ ಆತನ ಸ್ನೇಹಿತ ಎಸ್.ಮುಬಾರಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ನಡೆದ 24 ಗಂಟೆಯೊಳಗೆ ಪ್ರಕರಣ ಬೇಧಿಸಿ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಲೂರು ತಾಲ್ಲೂಕಿನ ಮಿಟಿಗಾನಹಳ್ಳಿ ಬಳಿ ಬುಧವಾರ ನಯಾಜ್ ಖಾನ್ (38) ಎಂಬುವರನ್ನು ಶಾಹಿದ್ ಖಾನ್ (33) ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದ. ಆತನಿಗೆ ಮುಬಾರಕ್ (41) ಸಹಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಹೊಸಕೋಟೆಯ ಶಾಹಿದ್ ಸದ್ಯ ಮಿಟಿಗಾನಹಳ್ಳಿಯಲ್ಲಿ ವಾಸವಿದ್ದ. ಮುಬಾರಕ್ ಹೊಸಕೋಟೆಯ ಎಂ.ವಿ.ಬಡಾವಣೆಯಲ್ಲಿ ಆಟೊ ಚಾಲಕನಾಗಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಶಾಹಿದ್ ತಾಯಿಯ ತಮ್ಮ ನಯಾಜ್ ಖಾನ್. ಶಾಹಿದ್ ಮಿಟಿಗಾನಹಳ್ಳಿ ಗ್ರಾಮದ ಬಳಿ ವಹಾಬ್ ಖಾನ್ ಎಂಬುವರ ಜಮೀನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಈತನ ಸಂಸಾರ ಹೊಸಕೋಟೆಯಲ್ಲಿಯೇ ಇತ್ತು. ನಯಾಜ್ ತನ್ನ ಪತ್ನಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಎಂಬ ಕಾರಣಕ್ಕೆ ಶಾಹಿದ್ ತನ್ನ ಸಂಸಾರವನ್ನು ಈಚೆಗೆ ಮಿಟಿಗಾನಹಳ್ಳಿಗೆ ವರ್ಗಾಯಿಸಿದ್ದ. ಆದರೂ ನವಾಜ್ ಖಾನ್ ಅಕ್ರಮ ಸಂಬಂಧ ಮುಂದುವರಿಸಿದ್ದ. ಶಾಹಿದ್ ಹಾಗೂ ಆತನ ಸ್ನೇಹಿತ ಮುಬಾರಕ್ ಬುಧವಾರ ನವಾಜ್ನನ್ನು ತೋಟದ ಮನೆ ಬಳಿಗೆ ಕರೆಸಿಕೊಂಡಿದ್ದಾರೆ. ನಂತರ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್ ಹಾಗೂ ಜಗದೀಶ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ಮಾಸ್ತಿ ಸರ್ಕಲ್ ಇನ್ಸ್ಪೆಕ್ಟರ್ ಓಂಪ್ರಕಾಶ್ ಗೌಡ, ಸಿಬ್ಬಂದಿ ಪಿಎಸ್ಐ ವರಲಕ್ಷ್ಮಿ, ಎಎಸ್ಐ ಪಿ.ನಾಗಭೂಷಣರೆಡ್ಡಿ, ಎಎಸ್ಐ ಆರ್.ಕೆ.ಬಾಬು, ಎಎಸ್ಐ ರಾಮಪ್ಪ, ಬಾಬು, ಕನ್ನಪ್ಪ, ಅಲಾಪ್ ಹುಸೇನ್ ಪಠಾಣ್, ನಾಗೇಶ್ ಬಾಬು, ಶಿವಶಂಕರ್, ಮಂಜುನಾಥ್, ಜೀಪ್ ಚಾಲಕ ನಾಗೇಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಕಾರ್ಯಾಚರಣೆಯನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.