ಕೋಲಾರ: ಬೀದರ್, ಮಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಬ್ಯಾಂಕ್ ದರೋಡೆ, ಎಟಿಎಂಗೆ ಹಣ ಹಾಕುವಾಗ ದೋಚುವ ಪ್ರಕರಣಗಳ ಬೆನ್ನಲ್ಲೆ ಜಿಲ್ಲೆಯಲ್ಲಿಯೂ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳ ಭದ್ರತೆ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳು, ಕೆಲ ಖಾಸಗಿ ಬ್ಯಾಂಕ್ಗಳ ಹೊರತಾಗಿ ಬಹುತೇಕ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಕಂಡುಬರುತ್ತಿಲ್ಲ. ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಹುತೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ, ಕಾವಲುಗಾರರು ಇಲ್ಲ.
ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಮೂಲಕವೂ ವಹಿವಾಟು ಹೆಚ್ಚಿದ್ದು. ಸಹಕಾರ ಬ್ಯಾಂಕ್ಗಳಲ್ಲೂ ಭದ್ರತೆ ಇಲ್ಲವಾಗಿದೆ.
ಜಿಲ್ಲೆಯಲ್ಲಿ 210 ಬ್ಯಾಂಕ್ ಶಾಖೆಗಳು ಹಾಗೂ ಸುಮಾರು 210 ಎಟಿಎಂ ಕೇಂದ್ರಗಳು ಇವೆ. ಮಾರ್ಗಸೂಚಿಗಳ ಪ್ರಕಾರ ಪ್ರತಿ ಎಟಿಎಂನಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಕೆಲವೆಡೆ ಒಬ್ಬರೂ ಇಲ್ಲ.
‘ವೆಚ್ಚ ಕಡಿತದ ಕಾರಣ ನೀಡಿ ಬ್ಯಾಂಕ್ ಆಡಳಿತವು ಭದ್ರತಾ ಸಿಬ್ಬಂದಿ ಸಂಖ್ಯೆ ಸೀಮಿತಗೊಳಿಸುತ್ತಿದೆ’ ಎನ್ನುತ್ತಾರೆ ರಾಷ್ಟ್ರೀಕೃತ ಬ್ಯಾಂಕ್ವೊಂದರ ಹಿರಿಯ ಅಧಿಕಾರಿಯೊಬ್ಬರು.
ಈ ಮಧ್ಯೆ, ಹೊರಜಿಲ್ಲೆಗಳಲ್ಲಿ ನಡೆದ ದರೋಡೆ ಪ್ರಕರಣ, ಕೋಲಾರ ನಗರದ ಅಂಗಡಿ, ಮಳಿಗೆಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳ ಬಳಿಕ ಭದ್ರತೆ ವಿಚಾರವಾಗಿ ಜಿಲ್ಲಾ ಪೊಲೀಸರೂ ಅಲರ್ಟ್ ಆಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಈಚೆಗೆ ಜಿಲ್ಲಾ ಬ್ಯಾಂಕ್ ಅಧಿಕಾರಿಗಳು ಹಾಗೂ ಸೆಕ್ಯೂರಿಟಿ ಏಜೆನ್ಸಿ ಅಧಿಕಾರಿಗಳ ಸಭೆ ನಡೆಸಿ ಮಾರ್ಗಸೂಚಿಗಳನ್ನು (ಎಸ್ಒಪಿ) ಪಾಲಿಸಲು ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಪೊಲೀಸರು ಬ್ಯಾಂಕ್ ಮತ್ತು ಎಟಿಎಂಗಳ ಬಳಿ ಪೊಲೀಸ್ ಬೀಟ್ ಪಾಯಿಂಟ್ ಬುಕ್ ವ್ಯವಸ್ಥೆ ಮಾಡಿದ್ದು, ಪರಿಶೀಲನೆ ನಡೆಸಿ ನಿತ್ಯ ಸಹಿ ಹಾಕಿ ಬರುತ್ತಾರೆ, ಗಸ್ತು ಹೆಚ್ಚಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಹಾಗೂ ಬ್ಯಾಂಕ್ಗೆ ಬರುವ ಗ್ರಾಹಕರೊಂದಿಗೆ ಮಾತನಾಡಿ ಎಚ್ಚರಿಕೆಯಿಂದ ವ್ಯವಹರಿಸುವಂತೆ ಸಲಹೆ ಸೂಚನೆ ನೀಡುತ್ತಿದ್ದಾರೆ.
ಎಟಿಎಂ ಕೇಂದ್ರಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇದ್ದು ಅವುಗಳೇ ಕಾವಲುಗಾರನಾಗಿ ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಅವೂ ಕೆಟ್ಟು ಹೋಗಿವೆ. ರಾತ್ರಿಯೂ ಕಾವಲುಗಾರರು ಇರುವುದಿಲ್ಲ. ಎಟಿಎಂಗೆ ಬರುವ ಸಾರ್ವಜನಿಕರು ಹಿಂದೆ ಮುಂದೆ ನೋಡುತ್ತಾ ಆತಂಕದಿಂದ ಹಣ ಡ್ರಾ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಕೆಲವೆಡೆ ಎಟಿಎಂಗಳು ಸುತ್ತಮುತ್ತ ಬೀದಿ ದೀಪಗಳೂ ಇಲ್ಲ, ಜನರ ಓಡಾಟವೂ ಕಡಿಮೆ ಇರುತ್ತದೆ. ನಿರ್ವಹಣೆಯಂತೂ ಕೇಳುವುದೇ ಬೇಡ, ಕೆಲವೊಂದು ವಾರಗಟ್ಟಲೆ ಕಾರ್ಯನಿರ್ವಹಿಸುವುದಿಲ್ಲ. ಕೆಲ ಎಟಿಎಂ ಕೇಂದ್ರದೊಳಗೆ ನಾಯಿಗಳು ಮಲಗಿಕೊಂಡಿರುತ್ತವೆ.
‘ಬ್ಯಾಂಕ್, ಎಟಿಎಂಗಳ ಭದ್ರತೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಈಚೆಗೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಹೇಳಿದ್ದಾರೆ. ಭದ್ರತಾ ಸಿಬ್ಬಂದಿ ನೇಮಕ ಬ್ಯಾಂಕ್ಗಳ ಕೇಂದ್ರೀಯ ಮಂಡಳಿಯಿಂದ ನಡೆಯಬೇಕು. ಈ ಬಗ್ಗೆ ಮನವಿ ಮಾಡಿದ್ದೇವೆ’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಾ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ
ಬ್ಯಾಂಕ್ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಎಟಿಎಂಗೆ ಹಣ ರವಾನಿಸುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಾಗೂ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಭೆಯಲ್ಲಿ ಸಲಹೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ‘ಬ್ಯಾಂಕ್ಗಳು ಮಾರ್ಗಸೂಚಿ (ಎಸ್ಒಪಿ) ಪಾಲನೆ ಮಾಡಬೇಕು ಹಣ ರವಾನಿಸುವಾಗ ಎಚ್ಚರಿಕೆ ವಹಿಸಬೇಕು. ಸಿಬ್ಬಂದಿ ನಿಯೋಜಿಸಿ ರಕ್ಷಣೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ನಮ್ಮ ಪೊಲೀಸರೂ ಭೇಟಿ ನೀಡಿ ಪರಿಶೀಲಿಸುತ್ತಿರುತ್ತಾರೆ’ ಎಂದು ನಿಖಿಲ್ ಬಿ. ತಿಳಿಸಿದರು.
ಸೈಬರ್ ವಂಚನೆ ಜಾಗೃತಿ
ಸೈಬರ್ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ನೂರಾರು ಮಂದಿ ಹಣ ಕಳೆದುಕೊಂಡಿದ್ದಾರೆ. ಒಟಿಪಿ ಕೇಳುವುದು ಲಿಂಕ್ ಕಳಿಸುವುದು ಹೂಡಿಕೆ ವ್ಯವಹಾರ ಎಪಿಕೆ ಫೈಲ್ ಕಳಿಸುವುದು ನಕಲಿ ಆ್ಯಪ್ ಮೂಲಕ ವಂಚನೆ ಎಸಗುತ್ತಿದ್ದಾರೆ. ಕೆಲಸ ಕೊಡಿಸುವ ಭರವಸೆ ನೀಡಿ ವಂಚನೆ ಆನ್ಲೈನ್ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಡಿಜಿಟಲ್ ಬಂಧನ ಎಂದು ನಂಬಿಸಿ ಹಣ ಪಡೆಯುವುದು ಆನ್ಲೈನ್ ಟ್ರೇಡಿಂಗ್ ಮೂಲಕ ವಂಚನೆ ಮಾಡುವುದು ಕಂಡುಬರುತ್ತಿದೆ. ಈ ಸಂಬಂಧ ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಪೊಲೀಸರು ಸಭೆ ನಡೆಸಿ ಭದ್ರತೆ ಸಂಬಂಧ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಲು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ-ಸುಬ್ಬಾ ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್, ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.