ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವೆಡೆ ಸೋಮವಾರ ಮಧ್ಯಾಹ್ನ ಧಾರಾಕಾರ ಮಳೆಯಾಯಿತು.
ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನ ವೇಳೆಗೆ ಮಳೆ ಸುರಿಯಿತು. ಕೋಲಾರ ನಗರ, ವೇಮಗಲ್, ಮಾಲೂರು ಭಾಗದಲ್ಲಿ ಜೋರು ಮಳೆ ಬಂತು. ರಸ್ತೆಯಲ್ಲಿ ನೀರು ಉಕ್ಕಿ ಹರಿಯಿತು. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತು. ಚರಂಡಿಯಲ್ಲಿ ಕಸ ತುಂಬಿರುವ ಕಾರಣ ನೀರು ರಸ್ತೆಯತ್ತ ಮುಖಮಾಡಿತು. ಬಡಾವಣೆಗಳಲ್ಲಿನ ಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು.
ಮಳೆ ಜೊತೆಗೆ ಜೋರಾಗಿ ಗಾಳಿ ಕೂಡ ಬೀಸಿತು. ಕೋಲಾರ ನಗರದಲ್ಲಿರುವ ಎಸ್ಎನ್ಆರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬೃಹತ್ ಮರ ಬಿದ್ದು ಹಲವಾರು ಬೈಕ್ಗಳು ಜಖಂಗೊಂಡಿವೆ. ಹಲವೆಡೆ ವಿದ್ಯುತ್ ಕೈಕೊಟ್ಟಿತು.
ಕೋಲಾರ ತಾಲ್ಲೂಕಿನ ಮಣಿಘಟ್ಟದಲ್ಲಿ 60 ಮಿ.ಮೀ (6 ಸೆಂ.ಮೀ.) ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಕೂಡ.
ಬಂಗಾರಪೇಟೆ ಪಟ್ಟಣದಲ್ಲಿ 35 ಮಿ.ಮೀ., ಸೂಲಿಕುಂಟೆಯಲ್ಲಿ 34 ಮಿ.ಮೀ., ಮಾವಳ್ಳಿಯಲ್ಲಿ 31 ಮಿ.ಮೀ., ಹುಲಿಬೆಲೆಯಲ್ಲಿ 30 ಮಿ.ಮೀ., ಕೋಲಾರ ತಾಲ್ಲೂಕಿನ ಸೂಲೂರಿನಲ್ಲಿ 52 ಮಿ.ಮೀ., ಬೆಗ್ಲಿ ಹೊಸಹಳ್ಳಿಯಲ್ಲಿ 40 ಮಿ.ಮೀ., ನರಸಾಪುರದಲ್ಲಿ 36 ಮಿ.ಮೀ., ಬೆಳ್ಳೂರಿನಲ್ಲಿ 35 ಮಿ.ಮೀ., ಹರಟಿಯಲ್ಲಿ 29 ಮಿ.ಮೀ. ಮಳೆಯಾಗಿದೆ. ಮುಳಬಾಗಿಲು ತಾಲ್ಲೂಕಿನ ಅಂಬಿಕಲ್ಲಿನಲ್ಲಿ 22 ಮಿ.ಮೀ., ಗುಮ್ಮಕಲ್ಲಿನಲ್ಲಿ 19 ಮಿ.ಮೀ., ಶ್ರಿನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ 36 ಮಿ.ಮೀ., ಶ್ರೀನಿವಾಸಪುರ ಪಟ್ಟಣದಲ್ಲಿ 38 ಮಿ.ಮೀ., ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಪ್ರಮುಖವಾಗಿ ರಾಗಿ ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಈ ಮಳೆ ಖುಷಿ ಉಂಟು ಮಾಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮಳೆ ಕೊರತೆ ಉಂಟಾಗಿತ್ತು. ಜೂನ್ನಲ್ಲಿ ಶೇ 60ರಷ್ಟು ಮಳೆ ಕೊರತೆಯಾಗಿದೆ. ಜುಲೈನಲ್ಲಿ ಶೇ 47ರಷ್ಟು ಕೊರತೆ ಉಂಟಾಗಿತ್ತು. ಹೀಗಾಗಿ, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.