ADVERTISEMENT

ಬಂಗಾರಪೇಟೆ | ಬಂಗಾನತ್ತ ಗ್ರಾಮದಲ್ಲಿ ನೀರಿಗೆ ಬರ

ಐದು ದಿನಗಳಿಂದ ಬಾರದ ಕುಡಿಯುವ ನೀರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:17 IST
Last Updated 10 ಅಕ್ಟೋಬರ್ 2025, 5:17 IST
ಬಂಗಾರಪೇಟೆ ತಾಲ್ಲೂಕಿನ ಬಂಗಾನತ್ತ ಗ್ರಾಮದಲ್ಲಿ ನೀರಿಗಾಗಿ ಕಾಲಿ ಕೊಡಗಳೊಂದಿಗೆ ಟ್ಯಾಂಕ್ ಬಳಿ ಕಾಯುತ್ತಿರುವ ಗ್ರಾಮಸ್ಥರು
ಬಂಗಾರಪೇಟೆ ತಾಲ್ಲೂಕಿನ ಬಂಗಾನತ್ತ ಗ್ರಾಮದಲ್ಲಿ ನೀರಿಗಾಗಿ ಕಾಲಿ ಕೊಡಗಳೊಂದಿಗೆ ಟ್ಯಾಂಕ್ ಬಳಿ ಕಾಯುತ್ತಿರುವ ಗ್ರಾಮಸ್ಥರು   

ಬಂಗಾರಪೇಟೆ: ತಾಲ್ಲೂಕಿನ ಬಂಗಾನತ್ತ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್ ಐದು ದಿನಗಳ ಹಿಂದೆ ಸುಟ್ಟುಹೋಗಿದೆ. ಆದರೆ, ಟ್ರಾನ್ಸ್‌ಫಾರ್ಮರ್ ದುರಸ್ತಿಗೊಳಿಸುವ ಕಾಮಗಾರಿಯನ್ನು ಮಾಡದ ಕಾರಣದಿಂದಾಗಿ ಗ್ರಾಮಸ್ಥರು ಐದು ದಿನಗಳಿಂದ ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಬೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಮತ್ತು ನಿರ್ಲಕ್ಷ್ಯತೆಯಿಂದಾಗಿ ಗ್ರಾಮಸ್ಥರು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. 

ಕಳೆದ ಭಾನುವಾರ ರಾತ್ರಿ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್ ಸುಟ್ಟುಹೋಗಿದ್ದು, ಗ್ರಾಮದ ಕೊಳವೆಬಾವಿ ಸ್ಥಗಿತಗೊಂಡಿದೆ. ಇದರಿಂದ ನೀರು ಸರಬರಾಜು ಆಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್ ಸರಿಪಡಿಸುವಂತೆ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಇಲಾಖೆಯ ಸ್ಥಳೀಯ ಕಚೇರಿಗೆ ಮನವಿ ಮಾಡಿದ್ದಾರೆ. ಆದರೆ, ಐದು ದಿನಗಳಾದರೂ, ಯಾವುದೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿಗಳು, ‘ಗ್ರಾಮ ಪಂಚಾಯಿತಿಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಜೊತೆಗೆ ನಿಗದಿತ ಶುಲ್ಕವೂ ಪಾವತಿಯಾಗಿಲ್ಲ. ಹೀಗಾಗಿ, ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸಾಧ್ಯವಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಆದರೆ, ನಾವು ಈಗಾಗಲೇ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಗಿರುವ ಬಗ್ಗೆ ಬೆಸ್ಕಾಂ ಗಮನಕ್ಕೆ ತಂದಿದ್ದೇವೆ. ಅವರೇ ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳುತ್ತಾರೆ. ಒಟ್ಟಾರೆ, ಬೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಗ್ರಾಮಸ್ಥರು ಐದು ದಿನಗಳಿಂದ ನೀರಿಲ್ಲದೆ ಪರಿತಪಿಸುವಂತಾಗಿದೆ. 

‘ಟ್ರಾನ್ಸ್‌ಫಾರ್ಮರ್ ದುರಸ್ತಿ ಆಗದಿರಲು ಕಾರಣ ಯಾರು ಎಂಬುದು ನಮಗೆ ಬೇಕಿಲ್ಲ. ನಮಗೆ ನೀರು ಬೇಕಷ್ಟೇ. ಐದು ದಿನಗಳಿಂದ ಒಂದು ಹನಿ ನೀರು ಬಂದಿಲ್ಲ. ಮನೆಯಲ್ಲಿ ವಯಸ್ಸಾದವರು ಮತ್ತು ಮಕ್ಕಳು ಇದ್ದಾರೆ. ದನ ಕರುಗಳು ನೀರಿಲ್ಲದೆ ಕಷ್ಟಪಡುತ್ತಿವೆ. ದೂರದ ತೋಟಗಳಿಗೆ ಹೋಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ’ ಎಂದು ಗ್ರಾಮದ ಯುವಕ ಗಣೇಶ್ ಎಂಬುವರು ತಿಳಿಸಿದರು. 

ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ, ನಾಳೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಇನ್ನಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗ್ರಾಮಕ್ಕೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. 

ಬಂಗಾರಪೇಟೆ ತಾಲ್ಲೂಕಿನ ಬಂಗಾನತ್ತ ಗ್ರಾಮದಲ್ಲಿ ನೀರಿಗಾಗಿ ಖಾಲಿ ಕೊಡ ಗಳೊಂದಿಗೆ ಟ್ಯಾಂಕ್ ಬಳಿ ಕಾಯುತ್ತಿರುವ ಸಾರ್ವಜನಿಕರು

ಕೊಳವೆಬಾವಿ ಮೋಟಾರ್‌ಗೆ ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡುವ ಮೂಲಕ ಬಂಗಾನತ್ತ ಗ್ರಾಮಕ್ಕೆ ನೀರು ಪೂರೈಸುತ್ತೇವೆ

-ಪ್ರಭಾಕರ್ ರೆಡ್ಡಿ ಅಧ್ಯಕ್ಷ ತೊಪ್ಪನಹಳ್ಳಿ ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.