ಶ್ರೀನಿವಾಸಪುರ: ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ₹ 94 ಲಕ್ಷ ಕಾಮಗಾರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
‘ನೀರು ಅಮೂಲ್ಯವಾದ ಸಂಪತ್ತು ಇದನ್ನ ಸುರಕ್ಷಿತವಾಗಿ, ಮಿತವಾಗಿ ಬಳಸಬೇಕು. ಜಲ ಮೂಲಗಳನ್ನು ಸಂರಕ್ಷಿಸಿ ಇದರಿಂದ ಅಂತರ್ಜಲವನ್ನು ಹೆಚ್ಚಿಸಿ ಮುಂದಿನ ಪೀಳಗೆಗೆ ಉಳಿಸುವ ಪ್ರಯತ್ನ ಮಾಡುವುದು ನಮ್ಮೆಲರ ಜವಾಬ್ದಾರಿ’ ಎಂದು ತಿಳಿಸಿದರು.
‘ಸರ್ಕಾರವು ಎಷ್ಟೇ ಉಪಯುಕ್ತ ಯೋಜನೆಗಳು ತಂದರೂ ನಾಗರಿಕರು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೇಲೆ ಆ ಯೋಜನೆ ಪ್ರಭಾವ ಬೀರುತ್ತದೆ. ಆದ್ದರಿಂದ ನಾಗರಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ₹ 94 ಲಕ್ಷ ವೆಚ್ಚದಲ್ಲಿ ಗ್ರಾಮದ 700 ಮನೆಗಳಿಗೆ ಪಕ್ಷಾತೀತವಾಗಿ ನಲ್ಲಿಗಳ ಅಳವಡಿಸುವದರ ಮೂಲಕ ನೀರು ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಗ್ರಾಮದಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಿಕೊಡಲಾಗುವುದು ಎಂದರು.
ಇದೇ ಸಮಯದಲ್ಲಿ ಕೋಡಿಪಲ್ಲಿ ಗ್ರಾ.ಪಂ.ವ್ಯಾಪ್ತಿಯ ಚಿಲೇಪಲ್ಲಿ ಗ್ರಾಮದಲ್ಲಿ ₹ 57 ಲಕ್ಷ ವೆಚ್ಚದಲ್ಲಿ 150 ಮನೆಗಳಿಗೆ ಮನೆಗಳಿಗೆ ನಲ್ಲಿ ಹಾಗೂ ಒಂದು ಕೊಳವೆ ಬಾವಿ ಕೊರೆಯಿಸಲಾಗುವುದು ಎಂದು ಹೇಳಿದರು.
ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ಇರುವಂತೆ ಸೂಚಿಸಿ ನಿಗದಿತ ಸಮಯಕ್ಕೆ ಮುಗಿಸಿಕೊಡುವಂತೆ ಸೂಚನೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೋಡಿಪಲ್ಲಿ ಗ್ರಾ.ಪಂ ಪಿಡಿಒ ಸುನಂದ, ಮುಖಂಡರಾದ ಬಾಬುರೆಡ್ಡಿ, ರಘುನಾಥರೆಡ್ಡಿ, ಭಾಸ್ಕರ್, ಅಯ್ಯಪ್ಪ, ಗುತ್ತಿಗೆದಾರರಾದ ಕೆ.ಆರ್.ಮಹದೇವ, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.