ADVERTISEMENT

ಬಂಗಾರಪೇಟೆ | ಕೋಮುಲ್‌ ಅವ್ಯವಹಾರ; ಚರ್ಚೆಗೆ ಪಂಥಾಹ್ವಾನ!

ಒಕ್ಕೂಟದಲ್ಲಿನ ವೆಚ್ಚದ ಶ್ವೇತಪತ್ರ ಹೊರಡಿಸಿ: ಅಧ್ಯಕ್ಷ ನಂಜೇಗೌಡಗೆ ನಾರಾಯಣಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 6:32 IST
Last Updated 2 ಸೆಪ್ಟೆಂಬರ್ 2025, 6:32 IST
ಎಸ್‌.ಎನ್‌.ನಾರಾಯಣಸ್ವಾಮಿ
ಎಸ್‌.ಎನ್‌.ನಾರಾಯಣಸ್ವಾಮಿ   

ಬಂಗಾರಪೇಟೆ: ಕೋಮಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಪ್ರಾಮಾಣಿಕವಾಗಿದ್ದರೆ ಒಕ್ಕೂಟದಲ್ಲಿ ಕಳೆದ ಏಳು ವರ್ಷಗಳಲ್ಲಿ ಮಾಡಿರುವ ಖರ್ಚು ವೆಚ್ಚದ ಶ್ವೇತಪತ್ರ ಹೊರಡಿಸಲಿ ಎಂದು ನಿರ್ದೇಶಕ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲು ಹಾಕಿದರು.

ತಾಲ್ಲೂಕಿನ ಎಸ್ಎನ್ ಸಿಟಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಏಳು ವರ್ಷಗಳಲ್ಲಿ ಒಕ್ಕೂಟಕ್ಕೆ ಸಂಬಂಧಿಸಿದಂತೆ ವಿವಿಧ ವಸ್ತು, ಸಾಮಗ್ರಿ ಖರೀದಿ‌ಯನ್ನು ಮಾರುಕಟ್ಟೆಯ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿ ಅವ್ಯವಹಾರ ಮಾಡಿರುವ ಕೋಟ್ಯಂತರ ರೂಪಾಯಿಗಳ ಕುರಿತು ಬಹಿರಂಗವಾಗಿ ಚರ್ಚೆ ಮಾಡೋಣ ಬನ್ನಿ’ ಎಂದು ಪಂಥಾಹ್ವಾನ ನೀಡಿದರು.

‘ಕೋಮುಲ್ ವಾರ್ಷಿಕ ಸಭೆಯನ್ನು ನಡೆಸಲು ಯಾವುದೇ ಅಭ್ಯಂತರವಿಲ್ಲ, ಒಕ್ಕೂಟದಿಂದ ತಾವು ಸಾಮಾನ್ಯ ಸಭೆ ಮಾಡಿದ್ದೀರಿ. ಅದೇ ರೀತಿ ಸಭೆಯನ್ನು ಒಂದು ದಿನ ಮಾಡಿ, ಎರಡು ದಿನ ಮಾಡಿ, ಮೂರು ದಿನ ಮಾಡಿ. ಒಕ್ಕೂಟದ ಖರ್ಚು, ವೆಚ್ಚ, ಲಾಭ, ನಷ್ಟ, ನೌಕರರು, ದಿನಗೂಲಿ ನೌಕರರ ಸಮಸ್ಯೆಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಕೂಲಂಕಷ ಚರ್ಚೆ ಮಾಡಿದರೆ ನಾನು ಸ್ವಾಗತಿಸುತ್ತೇವೆ. ಆದರೆ, ತುರ್ತುಸಭೆ ಎಂದು ಹೇಳಿದ್ದೀರಿ. ಜಮಾ ಖರ್ಚುಗಳು, ಎಂವಿಕೆ ಗೋಲ್ಡನ್ ಡೇರಿ ಹಾಗೂ ಸೌರ ಘಟಕಗಳ ನಿರ್ಮಾಣ ಹೆಸರಿನಲ್ಲಿ ಮಾಡಿರುವ ಅಕ್ರಮಗಳನ್ನು ಮುಚ್ಚಿ ಹಾಕಲು ಸಭೆ ಅನುಮೋದನೆ ಕೊಟ್ಟಿದೆ ಎಂದು ಡಂಗೂರ ಬಾರಿಸಲು ತಾವು ಮಾಡಿದ ಕುತಂತ್ರದ ಸಭೆ ಎಂದು ನಾನು ಭಾವಿಸುತ್ತೇನೆ’ ಎಂದರು.

ADVERTISEMENT

‘ಏಳು ವರ್ಷದಿಂದ ತಮಗೆ ಎಲ್ಲಾ ಗೊತ್ತು ಎಂದು ಹೇಳುತ್ತೀರಿ. ಗೊತ್ತು ಸ್ವಾಮಿ, ತಾವು ಅದರಲ್ಲಿ ಪಂಡಿತರು, ನಂಜೇಗೌಡರೆಂದರೆ ಸಾಮಾನ್ಯವಾದವರಲ್ಲ, ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ಬಹಳ ಚೆನ್ನಾಗಿ ತಿಳಿದುಕೊಂಡವರು. ತಮ್ಮಲ್ಲಿ ಇರುವಂತಹ ವಿದ್ಯೆಯನ್ನು ಮೀರಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ನಾವು ನೇರವಾಗಿ ಮಾತನಾಡುತ್ತಿವೆ, ಅದಕ್ಕೆ ನಾವು ತಪ್ಪಿತಸ್ಥರು’ ಎಂದು ಲೇವಡಿ ಮಾಡಿದರು.

‘ನಾನು ಕಾನೂನು ಮೀರಿ, ಜನರ ಹಿತವನ್ನು ಮೀರಿ ವರ್ತನೆ ಮಾಡುತ್ತಿಲ್ಲ ಗೌಡರೇ? ಜನ ಗಮನಿಸುತ್ತಿದ್ದಾರೆ, ಹೈಕಮಾಂಡ್ ಗಮನಿಸುತ್ತಿದೆ ಎಂದು ತಾವು ಪದೇಪದೇ ಹೇಳುತ್ತೀರಿ. ನಾನೇನು ತಪ್ಪು ಮಾಡಿದ್ದೇನೆ? ಯಾವುದಾದರು ಸೋಲಾರ್‌ ಪೆನ್ಸಿಲಿಂಗ್‌ನಲ್ಲೋ, ಗೋಲ್ಡನ್ ಡೇರಿಯಲ್ಲೋ, ನೇಮಕಾತಿಯಲ್ಲೋ, ಎಲ್ಲಾದರೂ ಹಣವನ್ನು ಲೂಟಿ ಮಾಡಿದ್ದೀನಾ ಗೌಡರೇ’ ಎಂದು ಪ್ರಶ್ನಿಸಿದರು.

‘ಸೋಲಾರ್ ಘಟಕ ಹಾಗೂ ಐಸ್ ಕ್ರೀಮ್ ಪಾರ್ಲರ್ ಮಾಡಲು ಒಕ್ಕೂಟದಿಂದ ಹಣವನ್ನು ಖರ್ಚು ಮಾಡಬೇಡಿ, ಕೆಎಂಎಫ್ ಕಡೆಯಿಂದ ನೀಡುತ್ತೇವೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಬಳಿ ಜಿಲ್ಲಾ ಉಸ್ತುವಾರಿ ಮಂತ್ರಿ ಕರೆದುಕೊಂಡು ಹೋಗಿ ತಮ್ಮ ಬಳಿಯೇ ಹಣವಿದೆ ಎಂದು ಗಲಾಟೆ ಮಾಡಿ, ತಾನೇ ಖರ್ಚು ಮಾಡಬೇಕು ಎಂದು ಹಟಕ್ಕೆ ಬಿದ್ದಿದ್ದಿರಿ. ನಮ್ಮ ರೈತರ ಡೇರಿ ಹಣವನ್ನು ತೆಗೆದುಕೊಂಡು ಹೋಗಿ ಖರ್ಚು ಮಾಡಿದ್ದಿರಿ ಅಲ್ಲವೇ ಗೌಡರೇ? ಸಾಲ ತೆಗೆದುಕೊಂಡಿದ್ದೀರಿ, ಇದು ನ್ಯಾಯವೇ ಸ್ವಾಮಿ? ಈ ಬಗ್ಗೆ ತಮ್ಮನ್ನು ಕೇಳಲೇ ಬಾರದೇ? ತಮಗೆ 16 ನಿರ್ದೇಶಕರ ಬೆಂಬಲವಿದೆ, ನಾರಾಯಣಸ್ವಾಮಿ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ ಎಂದೆಲ್ಲಾ ಹೇಳುತ್ತೀರಿ. ಇದು ತಮಗೆ ನ್ಯಾಯ ಎನಿಸುತ್ತಿದೆಯೇ’ ಎಂದು ಕೇಳಿದರು.

‘ನಾನು ಜಿಲ್ಲೆಯ ರೈತರು. ಮಹಿಳೆಯರು ಹಾಗೂ ದಿನಗೂಲಿ ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ತಮಗೇನಾದರೂ ಇವರ ಬಗ್ಗೆ ಕಾಳಜಿ ಇದೆಯೇ? ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಘೋಷಣೆ ಮಾಡಿದೆ. ಒಕ್ಕೂಟದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೀರಿ ಅಲ್ಲವೇ? ಆದರೆ, ಆಡಳಿತ ಮಂಡಳಿ ಸಭೆಯಲ್ಲಿ ಯಾವತ್ತಾದರೂ ದಿನಗೂಲಿ ನೌಕರರಿಗೆ ಹೆಚ್ಚುವರಿ ಹಣ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೀರಾ? ಬರೀ ಯಾವಾಗಲೂ ಅದು ಕಟ್ಟಿದೇ, ಇದು ಕಟ್ಟಿದೆ ಎಂದು ಪದೇ ಪದೇ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತೀರಿ. ಆದರೆ ಇದೆಲ್ಲಾ ಕಟ್ಟಲು ಮೈದುಡಿದು ಮನೆಯ ಮಠ ಬಿಟ್ಟು ದಿನಗೂಲಿ ನೌಕರರಾಗಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.

‘ಕ್ಷೇತ್ರಕ್ಕೆ ₹ 2,500 ಕೋಟಿ ಅನುದಾನ ತೆಗೆದುಕೊಂಡು ಬಂದಿದ್ದೇನೆ, ಜಿಲ್ಲಾ ಉಸ್ತುವಾರಿ ಮಂತ್ರಿ ಕೇಳಿದ ಎಲ್ಲಾ ಕೆಲಸ ಮಾಡಿ ಕೊಟ್ಟಿದ್ದಾರೆ ಎಂದು ತಾವು ಪದೇಪದೇ ಹೇಳುತ್ತೀರಿ. ಹೆಚ್ಚು ಅನುದಾನ ತರುವರನ್ನು ಎಪಿಎಲ್ ಶಾಸಕ ಎಂದು ಕರೆಯುತ್ತಾರೆ. ಬಿಪಿಎಲ್ ಶಾಸಕರೆಂದರೆ ನಾಟಕ ಮಾಡಲು ಬಾರದ ಶಾಸಕ, ಗೇಮ್ ಆಡಲು ಬಾರದ ಶಾಸಕ. ನಾನು ನೇರವಾಗಿ ಮಾತನಾಡುವವನು. ಅವರಷ್ಟು ಅನುದಾನ ತರುವ ಶಕ್ತಿ ಇಲ್ಲ. ಆದರಿಂದ ನಾನು ಬಿಪಿಎಲ್ ಶಾಸಕ’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ನಂಜೇಗೌಡರಲ್ಲಿ ಇರುವಂಥ ಕಲೆ ಅಪಾರ. ಯಾರ ಬಳಿ ಹೇಗೆ ಮಾತನಾಡಬೇಕು? ಹೇಗೆ ಕೆಲಸ ಮಾಡಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಆ ಕಲೆಗೆ ನನ್ನ ಅಭಿನಂದನೆ
ಎಸ್‌.ಎನ್‌.ನಾರಾಯಣಸ್ವಾಮಿ ಶಾಸಕ ಕೋಮುಲ್‌ ನಿರ್ದೇಶಕ

ಬಿಪಿಎಲ್ ಎಂದರೆ ಬಡ ಎಂಎಲ್ಎ:

‘ಬಿಪಿಎಲ್‌ ಶಾಸಕ ಎಂದೂ ಹೇಳಿಕೋಳ್ಳುವ ಎಸ್‌.ಎನ್.ನಾರಾಯಣಸ್ವಾಮಿ ಬಿಪಿಎಲ್ ಕಾರ್ಡ್ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಾವು ಹೇಳಿದ್ದೀರಿ. ಬಿಪಿಎಲ್ ಕಾರ್ಡ್ ಎಂದರೆ ಬಿಪಿಎಲ್ ಕಾರ್ಡ್ ಇದೆ ಎಂದರ್ಥವಲ್ಲ. ತಾವು ಹಿರಿಯರು ಇದ್ದೀರಿ ಕೆಲ ಪದಗಳನ್ನು ಅರ್ಥಮಾಡಿಕೊಳ್ಳಬೇಕು. ಬಿಪಿಎಲ್ ಎಂಎಲ್ಎ ಎಂದರೆ ಬಡ ವರ್ಗಗಳಿಗೆ ಸೇರಿದ ಎಂಎಲ್ಎ ಎಂದರ್ಥ. ಸೌಲಭ್ಯಗಳಿಂದ ವಂಚಿತರಾದವರು ದುರ್ಬಲರನ್ನು ಬಿಪಿಎಲ್ ಎಂದು ಕರೆಯುತ್ತೇವೆ’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ನಂಜೇಗೌಡರ ಸವಾಲಿಗೆ ತಿರುಗೇಟು ನೀಡಿದರು.

ನನ್ನ ದಿಕ್ಕು ತಪ್ಪಿಸಲು ಆಗಲ್ಲ:

‘ನಾರಾಯಣಸ್ವಾಮಿ ತುರ್ತುಸಭೆಗೆ ಅಡ್ಡಗಾಲು ಹಾಕುತ್ತಾರೆ ಎಂಬುದಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವುದು ತಮಗೆ ಶೋಭೆ ತರುವುದಿಲ್ಲ. ತಾವು ಆಡಳಿತ ಮಂಡಳಿಯ ದಿಕ್ಕು ತಪ್ಪಿಸಬಹುದು ನಿರ್ದೇಶಕರನ್ನು ದಿಕ್ಕು ತಪ್ಪಿಸಬಹುದು. ಆದರೆ ತಾವು ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ನನ್ನ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ಹರಿಹಾಯ್ದರು.

ಅಕ್ರಮ ಬಯಲಿಗೆಳೆಯುವುದು ತಪ್ಪಾ?:

ಜನ ನೋಡುತ್ತಿದ್ದಾರೆ ಹೈಕಮಾಂಡ್‌ ಗಮನಿಸುತ್ತಿದೆ ಎಂದು ತಾವು ಪದೇಪದೇ ಹೇಳುತ್ತಿರಿ. ಜನರು ಹೈಕಮಾಂಡ್‌ ನೋಡಲಿ ಸ್ವಾಮಿ ಕೋಮುಲ್‌ನಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆಯುವುದು ತಪ್ಪಾ ಸ್ವಾಮಿ’ ಎಂದು ಎಸ್‌.ಎನ್‌.ನಾರಾಯಣಸ್ವಾಮಿ ಪ್ರಶ್ನಿಸಿದರು. ‘ಅಂಬೇಡ್ಕರ್ ವಸತಿ ಶಾಲೆ ಮತ್ತು ‌ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮಂಜೂರು ಮಾಡಿರುವ ಜಮೀನು ಅದು. ರೈತರು ನ್ಯಾಯಾಲಯ ಮೊರೆ ಹೋಗಿದ್ದರೂ ಆ ಸ್ಥಳವನ್ನು ಒತ್ತುವರಿ ಮಾಡಿಕೊಂಡು ದೌರ್ಜನ್ಯವಾಗಿ ಸೋಲಾರ್ ಬೇಲಿ ಹಾಕಿ ₹ 80 ಕೋಟಿ ನಷ್ಟ ಮಾಡಿದ್ದೀರಿ’ ಎಂದು ಆರೋಪಿಸಿದರು. ಈ ಬಗ್ಗೆ ಪ್ರಶ್ನೆ ಮಾಡಲೇಬಾರದೇ? ನಾವು ಇನ್ನೂ ಯಾವ ಇತಿಹಾಸದಲ್ಲಿದ್ದೇವೆ? ಇದೇನು ತೊಗಲಕ್ ದರ್ಬಾರ ಗೌಡರೇ ಇಲ್ಲವಾ ಬ್ರಿಟಿಷರ ಆಡಳಿತನಾ? ಅಂಬೇಡ್ಕರ್ ಬರೆದಿರುವಂತಹ ಸಂವಿಧಾನದಲ್ಲಿ ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನು ಪ್ರಶ್ನೆ ಮಾಡಲು ನಮಗೂ ಹಕ್ಕು ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.