
ಬಂಗಾರಪೇಟೆ: ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಬಂಗಾರಪೇಟೆ ಮಾರ್ಗವಾಗಿ ಮಾರಿಕುಪ್ಪಂಗೆ ಸಂಚರಿಸುತ್ತಿದ್ದ ರೈಲನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಕೆಜಿಎಫ್ ಮತ್ತು ಬಂಗಾರಪೇಟೆ ತಾಲ್ಲೂಕು ಸಮಿತಿಗಳು ನಗರದ ರೈಲ್ವೆ ನಿಲ್ದಾಣದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರೈಲ್ವೆ ಇಲಾಖೆ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು. ನಂತರ ನಿಲ್ದಾಣದ ವ್ಯವಸ್ಥಾಪಕರ ಮುಖಾಂತರ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಪಿ.ಶ್ರೀನಿವಾಸ್ ಮಾತನಾಡಿ, ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಂದ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಜನರು ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಇವರು ಸಂಚಾರಕ್ಕಾಗಿ ರೈಲನ್ನು ಅವಲಂಬಿಸಿದ್ದಾರೆ. ಹಾಗಾಗಿ ಕೆಎಸ್ಆರ್ನಿಂದ ಮಾರಿಕುಪ್ಪಂಗೆ ಸಂಚರಿಸುವ ರೈಲನ್ನು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದಲೇ ಪ್ರಾರಂಭಿಸಬೇಕು. ಮಧ್ಯಾಹ್ನ 2.55ರ ಹಳೆಯ ಸಮಯವನ್ನೇ ಕಾಯ್ದುಕೊಳ್ಳಬೇಕು. ವೈಟ್ಫೀಲ್ಡ್ಗೆ ಸ್ಥಳಾಂತರಿಸಿರುವ ಆರಂಭಿಕ ನಿಲ್ದಾಣವನ್ನು ಕೂಡಲೇ ರದ್ದುಗೊಳಿಸಿ, ಮೂಲ ನಿಲ್ದಾಣಕ್ಕೆ ವರ್ಗಾಯಿಸಬೇಕು. ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲ್ವೆ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎ.ಆರ್.ಬಾಬು ಮಾತನಾಡಿ, ಎಚ್ಎಎಲ್, ಬಿಇಎಂಎಲ್ ಮತ್ತು ಐಟಿಪಿಎಲ್ ನಂತಹ ದೊಡ್ಡ ಕಾರ್ಖಾನೆಗಳಲ್ಲಿ ಮೊದಲ ಪಾಳಿಯ ಕೆಲಸ ಮುಗಿಸುವ ಸಾವಿರಾರು ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ಆದರೆ, ಈ ರೈಲಿನ ಪ್ರಾರಂಭದ ನಿಲ್ದಾಣವನ್ನು ವೈಟ್ಫೀಲ್ಡ್ಗೆ ಬದಲಾಯಿಸಿರುವುದು ಕಾರ್ಮಿಕರಿಗೆ ಮಾಡಿದ ಅನ್ಯಾಯ. ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೆ ಹಳೆಯ ವೇಳಾಪಟ್ಟಿ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಜಿಎಫ್ ತಾಲ್ಲೂಕು ಕಾರ್ಯದರ್ಶಿ ಪಿ.ತಂಗರಾಜ್ ಟಿ.ಅಪ್ಪಯ್ಯಣ್ಣ, ಎಸ್.ಡಿ.ಆನಂದನ್, ಎ.ಪಿಚ್ಚಕಣ್ಣು, ಸಿ.ಆರ್.ಮೂರ್ತಿ, ತಿರುಪತಿ, ಪಿ.ಆನಂದ್ರಾಜ್, ನಿರೇಶ್ಬಾಬು, ವಿಜಯನ್, ಎ.ಸಿ.ವೇಲಾಯುದನ್, ಲಿಯೋರಾಜ, ಶಾಂತ್ಕುಮಾರ್, ನಿಕ್ಸನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.