ADVERTISEMENT

ಕೋಲಾರ: ಬಸ್‌ಗಳ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:00 IST
Last Updated 8 ಏಪ್ರಿಲ್ 2021, 13:00 IST
ಸಾರಿಗೆ ನೌಕರರ ಮುಷ್ಕರದ ನಡುವೆ ಕೋಲಾರ ಜಿಲ್ಲೆಯಲ್ಲಿ ಗುರುವಾರ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ಗಾಜು ಜಖಂಗೊಳಿಸಿರುವುದು.
ಸಾರಿಗೆ ನೌಕರರ ಮುಷ್ಕರದ ನಡುವೆ ಕೋಲಾರ ಜಿಲ್ಲೆಯಲ್ಲಿ ಗುರುವಾರ ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ಗಾಜು ಜಖಂಗೊಳಿಸಿರುವುದು.   

ಕೋಲಾರ: ಜಿಲ್ಲೆಯಲ್ಲಿ ಸಾರಿಗೆ ನೌಕರರ ಒಕ್ಕೂಟದ ಮುಷ್ಕರದ ನಡುವೆಯೂ ರಸ್ತೆಗಿಳಿದ ಕೆಎಸ್‌ಆರ್‌ಟಿಸಿಯ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, 2 ಬಸ್‌ಗಳ ಗಾಜು ಪುಡಿಪುಡಿಯಾಗಿವೆ.

ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಹೋಗುತ್ತಿದ್ದ ಬಸ್‌ ಮೇಲೆ ದುಷ್ಕರ್ಮಿಗಳು ಜಿಲ್ಲಾ ಕೇಂದ್ರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ತಂಬಳ್ಳಿ ಗೇಟ್‌ ಬಳಿ ಬುಧವಾರ ರಾತ್ರಿ ಕಲ್ಲು ತೂರಿ ಪರಾರಿಯಾಗಿದ್ದಾರೆ.ಕೋಲಾರದಿಂದ ಮಾಲೂರಿಗೆ ಹೋಗುತ್ತಿದ್ದ ಬಸ್‌ನ ಮೇಲೆ ಚಲುವನಹಳ್ಳಿ ಗೇಟ್‌ ಬಳಿ ಗುರುವಾರ ಮಧ್ಯಾಹ್ನ ಕಲ್ಲು ತೂರಲಾಗಿದೆ. ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್‌ನಲ್ಲಿ ಬಂದು ಈ ದುಷ್ಕೃತ್ಯ ಎಸಗಿದ್ದಾರೆ.

ಮುಷ್ಕರ ಬೆಂಬಲಿಸದೆ ಕರ್ತವ್ಯಕ್ಕೆ ಹಾಜರಾದ ಚಾಲಕರೊಬ್ಬರಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೆಎಸ್‌ಆರ್‌ಟಿಸಿಯ ಶ್ರೀನಿವಾಸಪುರ ಡಿಪೊದ ಮತ್ತೊಬ್ಬ ಚಾಲಕ ಶ್ರೀನಿವಾಸಪ್ಪ ಅವರನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಜತೆಗೆ ಶ್ರೀನಿವಾಸಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ.

ADVERTISEMENT

ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರಾಗಿರುವ ಕೆಜಿಎಫ್‌ ಡಿಪೊದ 7 ಸಿಬ್ಬಂದಿಗೆ ಸಂಸ್ಥೆಯ ವಸತಿ ಸಮುಚ್ಚಯದ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಮನೆ ಖಾಲಿ ಮಾಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.