ಕ್ಯಾಲನೂರು (ಕೋಲಾರ): ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷಿ ‘ಪಂಚರತ್ನ’ ರಥಯಾತ್ರೆಯ ಅಂಗವಾಗಿ ಇಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮಧ್ಯರಾತ್ರಿ 12.30ರವರೆಗೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಸಂಚರಿಸಿ ಕ್ಯಾಲನೂರು ಗ್ರಾಮಕ್ಕೆ ಬಂದಾಗಲೇ ರಾತ್ರಿ 11.45 ಗಂಟೆಯಾಗಿತ್ತು. ಕೊರೆವ ಚಳಿಯಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾದು ಕುಳಿತಿದ್ದರು. ಗ್ರಾಮಕ್ಕೆ ರಥಯಾತ್ರೆ ಬರುತ್ತಿದ್ದಂತೆ ಹೂವಿನ ಬೃಹತ್ ಹಾರ ಹಾಕಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.
ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರ ಜೈಕಾರ ಕೂಗಿದರು. ಇಲ್ಲಿನ ಶಾಲಾ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕುಮಾರಸ್ವಾಮಿ ಮಾತನಾಡಿ, ‘ನಾನು ಎರಡು ಬಾರಿ ಸಮ್ಮಿಶ್ರ ಸರ್ಕಾರಗಳಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ನುಡಿದಂತೆ ನಡೆದುಕೊಂಡಿದ್ದೇನೆ. ಹೀಗಾಗಿ, ವಿಶ್ವಾಸವಿಟ್ಟು ಸ್ವತಂತ್ರ
ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಿ. ಪಂಚರತ್ನ ಯೋಜನೆಯ ಮೂಲಕ ಸಮಸ್ಯೆ ಬಗೆಹರಿಸಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಇಲ್ಲವಾದರೆ ಎಂದಿಗೂ ನಿಮಗೆ ಮುಖ ತೋರಿಸುವುದಿಲ್ಲ, ಮತ ಕೇಳಲೂ ಬರುವುದಿಲ್ಲ’ ಎಂದುಭರವಸೆ ನೀಡಿದರು.
ಮಂಗಳವಾರ ಬೆಳಿಗ್ಗೆ ಆಂಜನೇಯಸ್ವಾಮಿ ದರ್ಶನ ಪಡೆದರು. ನಂತರ ದೇಗುಲ ಆವರಣದಲ್ಲಿ ಉಪಾಹಾರ ಸೇವಿಸಿ ಸುಗಟೂರು ಮೂಲಕ ಶ್ರೀನಿವಾಸಪುರ ತಾಲ್ಲೂಕು ಪ್ರವೇಶಿಸಿದರು.
ಗೌನಪಲ್ಲಿಯಲ್ಲಿ ಗ್ರಾಮ ವಾಸ್ತವ್ಯ:ಇಡೀ ದಿನ ಪಂಚರತ್ನ ಯಾತ್ರೆ ಬಳಿಕ ಮಂಗಳವಾರ ರಾತ್ರಿ ಕುಮಾರಸ್ವಾಮಿ, ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
ಬುಧವಾರ ಯಾತ್ರೆ ಚಿಕ್ಕಬಳ್ಳಾಪುರ ಜಿಲ್ಲೆಪ್ರವೇಶಿಸಲಿದೆ.
ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಬೋಜೇಗೌಡ, ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಕೆಜಿಎಫ್ನ ರಮೇಶ್ ಬಾಬು, ಮುಖಂಡರಾದ ತೂಪಲ್ಲಿ ಚೌಡರೆಡ್ಡಿ, ವಕ್ಕಲೇರಿ ರಾಮು, ಕಡಗಟ್ಟೂರು ವಿಜಯ್ಕುಮಾರ್, ಹರೀಶ್ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.