ADVERTISEMENT

ಕುಂಬಾರ ನಿಗಮಕ್ಕೆ ₹100 ಕೋಟಿ ಕೊಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:57 IST
Last Updated 21 ಫೆಬ್ರುವರಿ 2026, 7:57 IST
ಕೋಲಾರದಲ್ಲಿ ಶುಕ್ರವಾರ ಸರ್ವಜ್ಞ ಜಯಂತಿಯನ್ನು ಮಣ್ಣಿನ ಮಡಕೆ ತಯಾರಿಸುವ ಪ್ರಾತ್ಯಕ್ಷಿಕ್ಷೆ ಮೂಲಕ ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ಉದ್ಘಾಟಿಸಿದರು. ಎನ್‌.ವಿಜಯಲಕ್ಷ್ಮಿ, ಡಾ.ಕೆ.ನಾಗರಾಜ್‌, ತಬಲ ನಾರಾಯಣಪ್ಪ, ಶ್ರೀನಿವಾಸಪ್ಪ, ರೆಡ್ಡಪ್ಪ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ಸರ್ವಜ್ಞ ಜಯಂತಿಯನ್ನು ಮಣ್ಣಿನ ಮಡಕೆ ತಯಾರಿಸುವ ಪ್ರಾತ್ಯಕ್ಷಿಕ್ಷೆ ಮೂಲಕ ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ಉದ್ಘಾಟಿಸಿದರು. ಎನ್‌.ವಿಜಯಲಕ್ಷ್ಮಿ, ಡಾ.ಕೆ.ನಾಗರಾಜ್‌, ತಬಲ ನಾರಾಯಣಪ್ಪ, ಶ್ರೀನಿವಾಸಪ್ಪ, ರೆಡ್ಡಪ್ಪ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು   

ಕೋಲಾರ: ಕುಂಬಾರರ ಅಭಿವೃದ್ಧಿ ನಿಗಮಕ್ಕೆ ₹ 100 ಕೋಟಿ ಅನುದಾನ ಕೊಡಿ, ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಬೇಕು, ವಿಧಾನ ಪರಿಷತ್ತಿಗೆ ಸಮುದಾಯದವರನ್ನು ನಾಮನಿರ್ದೇಶನ ಮಾಡಿ, ಕುಂಬಾರಿಕೆಗೆ ಕೆರೆ ಮೀಸಲಿಡಿ…

ನಗರದ ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುಂಬಾರರ ಸಂಘದ ಆಶ್ರಯದಲ್ಲಿ ನಡೆದ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಕುಂಬಾರ ಸಮುದಾಯದವರು ಮುಂದಿಟ್ಟ ಬೇಡಿಕೆಗಳಿವು.

ಜಯಂತಿ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕುಂಬಾರರ ಮಹಾಸಭಾ ರಾಷ್ಟ್ರೀಯು ಯುವ ಅಧ್ಯಕ್ಷ ಡಾ.ಕೆ.ನಾಗರಾಜ್ ಮಾತನಾಡಿ, ‘ನಮ್ಮ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳ ಹಿಂದೆ‌ ಉಳಿದಿದೆ. ಹೀಗಾಗಿ, ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಕುಂಬಾರರ ಅಭಿವೃದ್ಧಿ ನಿಗಮ ಮಂಡಳಿಗೆ ಕನಿಷ್ಠ ₹ 100 ಕೋಟಿ ಅನುದಾನ ಕೊಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಕುಂಬಾರಿಕೆ ವೃತ್ತಿ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ನಮ್ಮ ಸಮುದಾಯ ಸದ್ಯ 2ಎ ಪ್ರವರ್ಗದಲ್ಲಿ ಇದೆ. ನೂರಕ್ಕೂ ಅಧಿಕ ಜಾತಿಗಳು ಈ ಪಟ್ಟಿಯಲ್ಲಿದ್ದು, ನಮ್ಮ ಜಾತಿಯವರಿಗೆ ಅವಕಾಶಗಳು ಕಡಿಮೆ ಆಗಿದೆ. ಹೀಗಾಗಿ, ಒಳಮೀಸಲಾತಿ ಕಲ್ಪಿಸಬೇಕು. ಕುಂಬಾರಿಕೆಗೆ ಕೆರೆ ಮೀಸಲಿಡಬೇಕು, ಈ ಬಗ್ಗೆ ಪಿಡಿಒಗಳಿಗೆ ಮೇಲಧಿಕಾರಿಗಳು ಸೂಚನೆ ಕೊಡಬೇಕು ಎಂದು ಬೇಡಿಕೆ ಇಟ್ಟರು.

ಪ್ರಬಲ ಸಮಾಜದವರು ಕೇಳಿದರೆ ಬೇಗ ಮಾಡಿಕೊಡುತ್ತಾರೆ. ಆದರೆ, ನಮ್ಮ ಧ್ವನಿ ಯಾರಿಗೂ ಕೇಳುವುದಿಲ್ಲ. ನಮ್ಮ ಸಮಾಜದವರು ಸೌಮ್ಯ ಹಾಗೂ ಸಜ್ಜನರು, ಏನೂ ಮಾಡಲ್ಲ ಎಂಬ ಧೋರಣೆಯನ್ನು ಜನಪ್ರತಿನಿಧಿಗಳು ಹೊಂದಿದ್ದು, ಅದನ್ನು ಬಿಡಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ದೊಡ್ಡ ಸಮಾವೇಶ ಮಾಡುತ್ತೇನೆ. ಆ ಸಮಾವೇಶಕ್ಕೆ ಎಲ್ಲಾ ಜನಪ್ರತಿನಿಧಿಗಳನ್ನು ಕರೆತರುತ್ತೇನೆ. ಇಲ್ಲದಿದ್ದರೆ ಸಂಘದಲ್ಲಿ ಹೊಂದಿರುವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.

ಸರ್ವಜ್ಞ ಉದ್ಯಾನದಲ್ಲಿ ಸರ್ವಜ್ಞನ ಮೂರ್ತಿ ಇದೆ. ಈಚೆಗೆ ಮರಬಿದ್ದು ಚಾವಣಿ ಮುರಿದು ಹೋಗಿದೆ. ಸುತ್ತ ಸ್ವಚ್ಛತೆಯೂ ಇಲ್ಲ. ಈ ಸಂಬಂಧ ಕ್ರಮ ವಹಿಸಿ ಎಂದು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ‘ಸರ್ವಜ್ಞ ಉದ್ಯಾನದಲ್ಲಿ ಸರ್ವಜ್ಞನ ಮೂರ್ತಿ ಹಿತಕಾಯಲು ಬದ್ಧ. ನಗರಸಭೆಯವರಿಗೆ ಮಾಹಿತಿ ನೀಡಿದ್ದು, ಚಾವಣಿ ಸಿದ್ಧಪಡಿಸಿಕೊಡಲಾಗುವುದು’ ಎಂದರು.

ಜಯಂತಿ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್, ‘ಕುಂಬಾರ ಸಮುದಾಯದವರು ತಮ್ಮ ಬೇಡಿಕೆ, ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಈಡೇರಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಸಮಿತಿ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು ಎಂದು‌ ಅಭಿಪ್ರಾಯಪಟ್ಟರು.

ಜಿಲ್ಲಾ ಕುಂಬಾರರ ಸಂಘದ ಕಾರ್ಯದರ್ಶಿ ರೆಡ್ಡಪ್ಪ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲಾ ವಿಷಯ ತಿಳಿದವರು. ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ಎಂಬ ವಚನ ನೆನಪಿಸಿದರು. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ ಎಂದರು.

ಕುಂಬಕಲಾ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ‘ಜಿಲ್ಲೆಯಲ್ಲಿ ಕುಂಬಾರ ಸಮುದಾಯದವರು 16 ಸಾವಿರ ಮಂದಿ ಇದ್ದಾರೆ. ಈ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರೆ ಶಾಸಕರು ಬರುತ್ತಾರೆ ಎಂದು ತಿಳಿಸಿದರು .

ಉಪನ್ಯಾಸಕಿ ಎಂ.ವರಲಕ್ಷ್ಮಿ ಉಪನ್ಯಾಸ ನೀಡಿದರು. ತಮಿಳುನಾಡಿನಲ್ಲಿ ತಿರುವಳ್ಳವರ್, ಆಂಧ್ರದಲ್ಲಿ ಯೋಗಿ ವೇಮನ ಇದ್ದಂತೆ ಕರ್ನಾಟಕದಲ್ಲಿ ಸರ್ವಜ್ಞ ಹೆಸರು ಮಾಡಿದ್ದಾರೆ ಎಂದರು.

ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಕಲ್ಲಂಡೂರು ಶ್ರೀನಿವಾಸಪ್ಪ, ಕಾರ್ಯದರ್ಶಿ ರೆಡ್ಡಪ್ಪ, ನಾಗೇಶ್, ಈರಣ್ಣ, ಸರೋಜಾ ಶ್ರೀನಿವಾಸ್, ರಮೇಶ್, ಬಾಲಕೃಷ್ಣ, ನಂದೀಶ್, ಶಿವಪ್ರಸಾದ್, ರಾಜಣ್ಣ, ಕಲ್ಲಂಡೂರು ನಾರಾಯಣಸ್ವಾಮಿ, ನಾಗೇಶ್, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಇದ್ದರು. ವಿಜಯಲಕ್ಷ್ಮಿ ಸ್ವಾಗತಿಸಿದರು, ಮಂಜುಳಾ ಕೊಂಡರಾಜನಹಳ್ಳಿ ನಿರೂಪಿಸಿದರು. ಡಾ.ಕೆ.ನಾಗರಾಜ್ ವಂದಿಸಿದರು.

ಸರ್ವಜ್ಞ ದಾರ್ಶನಿಕ ಯುಗಪುರುಷ

ರಾಜ್ಯದಲ್ಲಿ ಬಸವಣ್ಣನ ಬಳಿಕ ವಚನ ಕ್ರಾಂತಿ ನಿರ್ಮಿಸಿದ ದಾರ್ಶನಿಕ ಯುಗಪುರುಷ ಸರ್ವಜ್ಞ. ಒಂದು ದಿನಕ್ಕೆ ಸರ್ವಜ್ಞ ಆದವರಲ್ಲ. ನಿತ್ಯ ವಿಷಯ ಕಲೆಹಾಕಿ ಒಂದು ದಿನ ಸರ್ವವನ್ನೂ ಬಲ್ಲವರಾದರು ಎಂದು ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ತಿಳಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ವಚನ ರಚಿಸಿದ್ದಾರೆ. ಒಂದು ಜಾತಿ ಸಮುದಾಯಕ್ಕೆ ಅವರು ಸೀಮಿತ ಅಲ್ಲ. ಅವರ ವಚನ ನೀತಿ‌ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಯಾವುದೇ ಸಮುದಾಯ ಸೀಮಿತ ಉದ್ದೇಶದ ರಾಜಕೀಯ ಬಿಡಬೇಕು ವೈಮನಸ್ಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕು ಎಂದು ಕಿವಿಮಾತು ಹೇಳಿದರು.

ಜನಪ್ರತಿನಿಧಿಗಳ ಗೈರು ಬೇಸರ

ಕುಂಬಾರರದ್ದು ಸಣ್ಣ ಸಮುದಾಯವೆಂದು ನಮ್ಮ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬಂದಿಲ್ಲ. ಇದು ದುರದೃಷ್ಟಕರ ಸಂಗತಿ. ಸಮುದಾಯದ ಮತಗಳು ಕಡಿಮೆ ಇರುವುದರಿಂದ ಪ್ರಯೋಜನವಿಲ್ಲ ಎಂಬುದು ಅವರ ಭಾವನೆ ಆಗಿರಬಹುದು ಎಂದು ಕಲ್ಲಂಡೂರು ಡಾ.ಕೆ.ನಾಗರಾಜ್‌ ಬೇಸರ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳೇ ಈ ರೀತಿ ಮಾಡಿದರೆ ನಮ್ಮ ಸಮಾಜದ ಕಷ್ಟಸುಖಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.