ADVERTISEMENT

ಜಮೀನು ವಿವಾದ: ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 14:32 IST
Last Updated 22 ಏಪ್ರಿಲ್ 2020, 14:32 IST
ಕೋಲಾರ ತಾಲ್ಲೂಕಿನ ನಾಚಹಳ್ಳಿಯಲ್ಲಿ ಜಮೀನು ವಿವಾದದ ಸಂಬಂಧ ಬುಧವಾರ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಾಗಿರುವ ಸೊಣ್ಣೇಗೌಡ ಮತ್ತು ಕುಟುಂಬ ಸದಸ್ಯರು.
ಕೋಲಾರ ತಾಲ್ಲೂಕಿನ ನಾಚಹಳ್ಳಿಯಲ್ಲಿ ಜಮೀನು ವಿವಾದದ ಸಂಬಂಧ ಬುಧವಾರ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಾಗಿರುವ ಸೊಣ್ಣೇಗೌಡ ಮತ್ತು ಕುಟುಂಬ ಸದಸ್ಯರು.   

ಕೋಲಾರ: ತಾಲ್ಲೂಕಿನ ನಾಚಹಳ್ಳಿಯಲ್ಲಿ ಜಮೀನು ವಿವಾದದ ಸಂಬಂಧ ಎರಡು ಕುಟುಂಬಗಳ ನಡುವೆ ಬುಧವಾರ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದಾರೆ.

ನಾಚಹಳ್ಳಿ ಗ್ರಾಮದ ಸರ್ವೆ ನಂಬರ್‌ 30/5ರಲ್ಲಿರುವ 19 ಗುಂಟೆ ಜಮೀನಿನ ಒಡೆತನದ ವಿಚಾರವಾಗಿ ಆಂಜಿನಪ್ಪ ಮತ್ತು ಸೊಣ್ಣೇಗೌಡ ಎಂಬುವರ ನಡುವೆ ವಿವಾದವಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಆಂಜಿನಪ್ಪ ಕುಟುಂಬ ಸದಸ್ಯರು ವಿವಾದಿತ ಜಮೀನಿನಲ್ಲಿ ದನಗಳಿಗೆ ನೆರಳಿನ ವ್ಯವಸ್ಥೆಗಾಗಿ ಬೆಳಿಗ್ಗೆ ಚಪ್ಪರ ಹಾಕಲು ಹೋಗಿದ್ದರು. ಇದಕ್ಕೆ ಸೊಣ್ಣೇಗೌಡ ಕುಟುಂಬ ಸದಸ್ಯರು ಅಡ್ಡಿಪಡಿಸಿ ಚಪ್ಪರ ಹಾಕದಂತೆ ತಡೆದಿದ್ದಾರೆ. ಬಳಿಕ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ADVERTISEMENT

ಇದರಿಂದ ಆಕ್ರೋಶಗೊಂಡ ಆಂಜಿನಪ್ಪ ಕುಟುಂಬದ ಮೈಲಾರಪ್ಪ, ನಾಗರಾಜ್‌ ಮತ್ತು ಚಿನ್ನಪ್ಪ ಅವರು ಸೊಣ್ಣೇಗೌಡ, ಚೌಡರೆಡ್ಡಿ ಹಾಗೂ ನಾರಾಯಣಸ್ವಾಮಿ ಮೇಲೆ ಕಾರದ ಪುಡಿ ಎರಚಿ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸೊಣ್ಣೇಗೌಡ, ಚೌಡರೆಡ್ಡಿ ಮತ್ತು ನಾರಾಯಣಸ್ವಾಮಿ ಅವರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್‌ ಠಾಣೆ ಪೊಲೀಸರು ಕೊಲೆ ಯತ್ನ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.