ADVERTISEMENT

ಜಮೀನು ವಿವಾದ: ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 17 ಮೇ 2020, 14:43 IST
Last Updated 17 ಮೇ 2020, 14:43 IST

ಕೋಲಾರ: ತಾಲ್ಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಸಂಬಂಧ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್‌ ಆಗಿದೆ.

ಮೇ 15ರಂದು ಈ ಘಟನೆ ನಡೆದಿದ್ದು, ಗ್ರಾಮದ ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್ ಎಂಬುವರ ಕುಟುಂಬಗಳ 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮೀನು ಒಡೆತನದ ವಿಚಾರವಾಗಿ ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್‌ ಕುಟುಂಬದ ನಡುವೆ ವಿವಾದವಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮೇ 15ರಂದು ಹೊಳೇರಹಳ್ಳಿಯ ಸ್ಮಶಾನ ಜಾಗದ ಸರ್ವೆ ಮಾಡಲು ಹೋಗಿದ್ದಾಗ ಎರಡೂ ಕುಟುಂಬಗಳ ನಡುವೆ ಪರಸ್ಪರ ವಾಗ್ವಾದ ನಡೆದು ಜಗಳವಾಗಿದೆ.

ADVERTISEMENT

ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಉಭಯ ಕುಟುಂಬಗಳ ಸದಸ್ಯರು ಪರಸ್ಪರ ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರನ್ನು ಅಟ್ಟಾಡಿಸಿ ದೊಣ್ಣೆಗಳಿಂದ ಥಳಿಸಲಾಗಿದೆ. ಗಾಯಾಳು ಮಹಿಳೆಯರು ನೆಲದಲ್ಲಿ ಬಿದ್ದು ಗೋಳಾಡುವ ವಿಡಿಯೋ ವೈರಲ್ ಆಗಿದೆ.

ಘಟನೆಯಲ್ಲಿ ಚಿಕ್ಕ ವೆಂಕಟೇಶಪ್ಪ ಅವರ ಕೈಗಳು ಮುರಿದಿವೆ. ಅಶೋಕ್‌ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಇಬ್ಬರು ಮಹಿಳೆಯರ ಬೆನ್ನು ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕುಟುಂಬಗಳು ವೇಮಗಲ್ ಪೊಲೀಸ್‌ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.