ADVERTISEMENT

ಮುನಿಯಪ್ಪಗೆ ಅನ್ಯಾಯ: ಮುಖಂಡರ ಬೇಸರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 5:37 IST
Last Updated 11 ಆಗಸ್ಟ್ 2022, 5:37 IST
ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ   

ಕೋಲಾರ: ‘ನಮ್ಮ ಮುಖಂಡ ಕೆ.ಎಚ್‌.ಮುನಿಯಪ್ಪ ಅವರನ್ನು ಕಾಂಗ್ರೆಸ್‌ ಪಕ್ಷನಿರ್ಲಕ್ಷಿಸುತ್ತಿದೆ. ಪಕ್ಷ ಕಟ್ಟಿ ಬೆಳೆಸಿದ ಅವರಿಗೆ ಅನ್ಯಾಯವಾಗುತ್ತಿದೆ...’

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಪಾದಯಾತ್ರೆ ಸಂಬಂಧ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ವಕ್ತಾರ ಎಲ್.ಎ. ಮಂಜುನಾಥ್ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಮರೆತು ಎಲ್ಲರೂ ಒಂದಾಗಬೇಕು. ಗುಂಪುಗಾರಿಕೆಯಿಂದ ಏನೂ ಪ್ರಯೋಜನವಿಲ್ಲ‌. ಮುನಿಯಪ್ಪ ಅವರಿಗೆ ತೊಂದರೆ ಕೊಟ್ಟರೆ ನಾವು ಕ್ಷಮಿಸಲ್ಲ’ ಎಂದರು.

ADVERTISEMENT

ಮುಖಂಡ ಇಕ್ಬಾಲ್ ಮಾತನಾಡಿ, ‘ಜಿಲ್ಲೆಗೆ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಬಂದರೂ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಮುನಿಯಪ್ಪ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರು ಕಳೆದಲೋಕಸಭಾ ಚುನಾವಣೆಯಲ್ಲಿ5 ಲಕ್ಷ ವೋಟ್ ಪಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ 10 ಲಕ್ಷ ವೋಟ್‌ ಪಡೆಯುತ್ತಾರೆ’ ಎಂದು ನುಡಿದರು.

ಮುಖಂಡ ರಾಮಚಂದ್ರ ಮಾತನಾಡಿ, ‘ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡುತ್ತಿರುವುದು ನೋವುಂಟು ಮಾಡಿದೆ. ಅವರನ್ನು ಸೋಲಿಸಿದ ಜನರೇ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದು ಹೇಳಿದರು.

ಮುಖಂಡ ಗೋಪಾಲಕೃಷ್ಣ, ‘ಪಕ್ಷದಲ್ಲಿ ಒಗ್ಗಟ್ಟು, ಸಾಮರಸ್ಯ ಇಲ್ಲವೆಂದರೆ ಯಾವುದೇ ಕಾರ್ಯಕ್ರಮ ನಡೆಸಿದರೂ ಪ್ರಯೋಜನವಿಲ್ಲ. ಮುಂದೆ ಅಧಿಕಾರಕ್ಕೆ ಬರಲೂ ಕಷ್ಟವಾಗುತ್ತದೆ. ಹೀಗಾಗಿ, ಭಿನ್ನಾಭಿಪ್ರಾಯ ಬಿಟ್ಟು ಜೊತೆಗೂಡಿ ಕೆಲಸ ಮಾಡಬೇಕು’ ಎಂದರು.

ಎಲ್ಲರ ಮಾತುಗಳನ್ನು ಮುನಿಯಪ್ಪ ಆಲಿಸಿದರು.ಕಾರ್ಯಕ್ರಮದ ಬಳಿಕ ಪಾದಯಾತ್ರೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗುಂಪುಗಾರಿಕೆ ಕುರಿತು ಮಾತ್ರ ಯಾವುದೇ ಪ್ರತಿಕ್ರಿಯೆ
ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.