ನಂಗಲಿ: ಗಡಿನಾಡ ಕನ್ನಡಿಗರು ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಮುಂದಿನ ತಲೆಮಾರಿನವರಿಗೆ ಕನ್ನಡ ನುಡಿ, ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗನಂದ ಕೆಂಪರಾಜ್ ಹೇಳಿದರು.
ನಂಗಲಿ ಸಮೀಪದ ಎನ್.ಯಲುವಹಳ್ಳಿ ಬಳಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿರುವ ಕನ್ನಡ ದ್ವಜ ಸ್ತಂಭ ಉದ್ಘಾಟಿಸಿ ಮಾತನಾಡಿದರು.
ಗಡಿ ಭಾಗದಲ್ಲಿ ತೆಲುಗು ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಕನ್ನಡವನ್ನು ಹೃದಯದ ಭಾಷೆಯಾಗಿ ಬೆಳೆಸುತ್ತಿದ್ದಾರೆ. ತೆಲುಗು ಬಳಕೆ ಕಡಿಮೆ ಮಾಡಿ, ಕನ್ನಡವನ್ನು ಹೆಚ್ಚು, ಹೆಚ್ಚು ಬಳಸಿ ಎಂದರು.
ಮುಳಬಾಗಿಲು ಕಸಾಪ ವಿನೂತನ ಕ್ರಮವನ್ನು ಜಾರಿಗೆ ತಂದಿದೆ. ರಾಜ್ಯದ ಗಡಿ ಭಾಗದಲ್ಲಿ ಧ್ವಜ ಸ್ತಂಭ ಹಾಕುವುದರ ಮೂಲಕ ರಾಜ್ಯಕ್ಕೆ ಬರುವವರಿಗೆ ಸ್ವಾಗತ ಕೋರುವ ಮತ್ತು ಹೊರಗಿನಿಂದ ಬರುವವರಿಗೆ ಅಭಿಮಾನ ಹೆಚ್ಚಿಸಲು ಸ್ತಂಭ ಸಹಕಾರಿ ಎಂದರು.
ಕಾರ್ಯಕ್ರಮಕ್ಕೆ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಗೈರಾದ ಅವರು, ವಿಡಿಯೊ ಮೂಲಕ ಮಾತನಾಡಿದರು. ಕೊರೊನಾ ಭೀತಿಯಿಂದಾಗಿ ನಂಗಲಿಗೆ ಬರಲು ಸಾಧ್ಯವಾಗಲಿಲ್ಲ. ಕನ್ನಡ ಬಾವುಟ ಹಾಕುತ್ತಿರುವ ವಿನೂತನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಮರೆಡ್ಡಿ, ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ವೆಂಕಟಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಜಯಪ್ಪ, ಖಜಾಂಚಿ ಹನುಮಂತಪ್ಪ, ಜಿಲ್ಲಾ ಕೋಶಾಧ್ಯಕ್ಷ ರತ್ನಪ್ಪ, ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್ ಗುಪ್ತ, ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ್ಯಾಗರಾಜ್, ಪಿಡಿಒ ಚಂದ್ರಶೇಖರ್, ಸರ್ಕಾರಿ ಕನ್ನಡ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಎನ್.ಆನಂದ್, ಪ್ರಧಾನ ಸಂಚಾಲಕ ಭಾಸ್ಕರ್ ರೆಡ್ಡಿ, ಎಎಸ್ಐ ಸಿ.ಜಿ. ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.