
ಮಾಲೂರು ನಗರದ ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ
ಮಾಲೂರು: ಸೋರುವ ಕೊಠಡಿಗಳು, ಶಿಥಿಲಗೊಂಡ ಕಟ್ಟಡ, ಬಿರುಕು ಬಿಟ್ಟ ಗೋಡೆ... ಇದು ಮಾಲೂರಿನ ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ.
ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 54 ಮಕ್ಕಳು ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂರು ಮಂದಿ ಶಿಕ್ಷಕರಿದ್ದಾರೆ. ಆದರೆ, ಶಾಲೆಯೂ ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.
ಪಟ್ಟಣದಲ್ಲಿ 1958ರಲ್ಲಿ ಆರಂಭವಾಗಿದ್ದ ಶಾಲೆಯನ್ನು ನಂತರದ ದಿನಗಳಲ್ಲಿ ದೇವಾಲಯ ಅಭಿವೃದ್ಧಿ ದೃಷ್ಟಿಯಿಂದ ಪಕ್ಕದ ಸರ್ಕಾರಿ ಜಾಗದಲ್ಲಿ ದೇವಾಲಯ ಹಾಗೂ ದಾನಿಗಳ ನೆರವಿನಿಂದ ಮೂರು ಕೊಠಡಿಗಳ ಶಾಲೆಯನ್ನು ನಿರ್ಮಿಸಲಾಯಿತು. ಆದರೆ, ಕೆಲವರು ಶಾಲೆಯಿರುವ ಜಮೀನು ನಮ್ಮದು ಎಂದು ಕೆಲವರು ದಾಖಲೆ ಸೃಷ್ಟಿಸಿದ್ದು, ಸರ್ಕಾರಿ ಶಾಲೆಗೆ ನೆಲೆಯೂ ಇಲ್ಲದಂತಾಗಿದೆ.
ಹಂದಿ ಗೂಡಂತಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವುದೇ ಸಾಹಸದ ಕೆಲಸವಾಗಿದೆ. ರಸ್ತೆಗಿಂತ ಒಂದು ಅಡಿ ಕೆಳ ಮಟ್ಟದಲ್ಲಿದೆ ಶಾಲಾ ಕೊಠಡಿ. ಶಾಲಾಯ ಮೇಲ್ಚಾವಣಿಯ ಸೀಮೆಂಟ್ ಶೀಟ್ಗಳು ಹೊಡೆದು ಹೋಗಿದ್ದು, ಮಳೆ ಬಂದರೆ ಕೊಠಡಿಯಲ್ಲಿ ನೀರು ತುಂಬಿಕೊಂಡು ಕೆರೆಯಂತಾಗುತ್ತದೆ. ಹಾಗಾಗಿ ಮಳೆ ಬಂದರೆ ಶಾಲೆಗೆ ರಜೆ ನೀಡುವಂತಾಗುತ್ತದೆ.
ಖಾಸಗಿ ಶಾಲೆಗಳ ವ್ಯಾಮೋಹ ಸೇರಿದಂತೆ ಇತರೆ ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ತಾಲ್ಲೂಕಿನ ಕೊಂಡರಹಳ್ಳಿ ಹಾಗೂ ನಕ್ಕೇನಹಳ್ಳಿ ಸರ್ಕಾರಿ ಶಾಲೆಗೆ ಮಕ್ಕಳ ಕೊರತೆಯಿಂದ ಶಾಲೆಗೆ ಬೀಗ ಜಡಿಯಲಾಗಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದ್ದ ಸರ್ಕಾರಿ ಶಾಲೆಗಳು ಈ ರೀತಿ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸರ್ಕಾರ ಮತ್ತು ಸಾರ್ವಜನಿಕರು ಈ ಶಾಲೆಗೆ ನಿವೇಶನ ಕಲ್ಪಿಸಿ ಉತ್ತಮ ಕಟ್ಟಡ ನಿರ್ಮಿಸಿಕೊಡಬೇಕೆಂಬುದು ಈ ಭಾಗದ ನಾಗರಿಕರ ಒತ್ತಾಯವಾಗಿದೆ.
ನಿವೇಶನಕ್ಕಾಗಿ ಪುರಸಭೆಗೆ ಮನವಿ
ಸುಮಾರು ವರ್ಷಗಳಿಂದ ಶಾಲೆ ಇದೇ ಜಾಗದಲ್ಲಿ ನಡೆಯುತ್ತಿದೆ. ಮಕ್ಕಳ ಅನುಕೂಲಕ್ಕಾಗಿ ನಿವೇಶನ ಬಿಟ್ಟುಕೊಡಿ ಎಂದು ನಿವೇಶನ ಮಾಲೀಕರ ಬಳಿ ಮನವಿ ಮಾಡಲಾಯಿತು. ಆದರೆ ಅವರು ಒಪ್ಪಲಿಲ್ಲ. ಪಕ್ಕದಲ್ಲಿರುವ ಬಡಾವಣೆಯ ಸಿಎ ಸೈಟ್ ನೀಡುವಂತೆ ಪುರಸಭೆಗೆ ಮನವಿ ಮಾಡಲಾಗಿದೆ. ಸ್ಥಳೀಯ ಶಾಸಕರ ಸಹಕಾರದಿಂದ ನಿವೇಶನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ನಿವೇಶನ ನೀಡಿದರೆ ಸರ್ಕಾರ ಮತ್ತು ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು.
-ಕೆಂಪಯ್ಯ, ಬಿಇಒ
ಶಾಲಾ ಕಟ್ಟಡ ದುರಸ್ತಿಗೆ ತೊಂದರೆ: ತನಿಖೆಗೆ ಒತ್ತಾಯ
ಧರ್ಮರಾಯಸ್ವಾಮಿ ದೇವಾಲಯದ ಕಟ್ಟಡದಲ್ಲಿ ಉಚಿತವಾಗಿ ಶಾಲೆ ನೆಡೆಸಲು ಅವಕಾಶ ಕಲ್ಪಿಸಲಾಗಿತ್ತು. 20 ವರ್ಷಗಳ ಹಿಂದೆ ದೇವಾಲಯ ಅಭಿವೃದ್ಧಿಪಡಿಸುವ ಸಲುವಾಗಿ ದೇವಾಲಯ ಸಮಿತಿ ಪಕ್ಕದ ಸರ್ಕಾರಿ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಿ ವರ್ಗಾಯಿಸಲಾಯಿತು. ಕೆಲವು ಅಕ್ರಮ ದಾಖಲೆ ಸೃಷ್ಟಿಸಿ ಸ್ಥಳವನ್ನು ಮಾಯ ಮಾಡಿ, ಶಾಲಾ ಕಟ್ಟಡ ದುರಸ್ತಿಗೆ ಅವಕಾಶ ಕಲ್ಪಿಸದೆ ತೊಂದರೆ ಮಾಡಿದ್ದಾರೆ. ಹಾಗಾಗಿ ಸರ್ಕಾರ ಸಂಪೂರ್ಣ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
-ಎಂ.ಪಿ.ವಿಜಯಕುಮಾರ್, ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.