ಕೋಲಾರ: ನಗರದ ಮುನ್ಸಿಪಲ್ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಗರಸಭೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಯಿತು.
ನಗರಸಭೆ ಪ್ರಭಾರ ಪೌರಾಯುಕ್ತ ಶಿವಪ್ರಕಾಶ್ ಮಾತನಾಡಿ, ‘ಇಡೀ ನಗರವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬಾರದು ಎಂದು ಸಲಹೆ ನೀಡಿದರು.
‘ಪ್ರತಿಯೊಬ್ಬರಿಗೂ ಸ್ವಚ್ಛಗಾಳಿ, ಶುದ್ಧ ಕುಡಿಯುವ ನೀರು, ಪೂರಕ ಪೌಷ್ಠಿಕಾಂಶಯುಕ್ತ ಆಹಾರ ಅವಶ್ಯ. ಉತ್ತಮ ಪರಿಸರ ಕಾಯ್ದುಕೊಳ್ಳಲು ಶ್ರಮಿಸುತ್ತಿರುವ ಪೌರಕಾರ್ಮಿಕರು ದಿನನಿತ್ಯ ತ್ಯಾಜ್ಯ, ಗಲೀಜು ತುಂಬಿದ ಚರಂಡಿಗಳಲ್ಲಿ ಇಳಿದು ಸ್ವಚ್ಛ ಮಾಡುತ್ತಾರೆ, ರಸ್ತೆ ಬದಿಯಲ್ಲಿನ ಮಣ್ಣು, ಬೆಳೆದ ಗಿಡಿಗಂಟಿ ತೆರೆವುಗೊಳಿಸುತ್ತಾರೆ. ಮನೆಮನೆಗೆ ತೆರಳಿ ಒಣ ಮತ್ತು ಘನ ತ್ಯಾಜ್ಯ ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಾರೆ. ಅಂತಹ ಕಾರ್ಮಿಕರನ್ನು ಮಾನವೀಯತೆಯೊಂದಿಗೆ ಆರೋಗ್ಯವಾಗಿರಲು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಸೇರಿದಂತೆ ಸೇವಾ ನೌಕರರ ಆರೋಗ್ಯ ಸುಧಾರಣ ದೃಷ್ಠಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನೆ ಪಡೆದುಕೊಳ್ಳಬೇಕು. ಕೀಲು, ಮೂಳೆ, ಗಂಟಲು, ಚರ್ಮ ಹಾಗೂ ಇತರೆ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ತಜ್ಞರು ತಪಾಸಣೆ ನಡೆಸುತ್ತಾರೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಚೀಟಿಗಳನ್ನು ವಿತರಿಸಲಾಯಿತು.
ಆರೋಗ್ಯ ನಿರೀಕ್ಷರಾದ ದೀಪಾ, ಮರಿಯಾ, ರಾಜೇಶ್ಸಿಂಗ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.