ADVERTISEMENT

ಮಾಲೂರು: ವಿದ್ಯುತ್ ಮೀಟರ್ ಕನಿಷ್ಠ ದರ ಏರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 8:31 IST
Last Updated 7 ಆಗಸ್ಟ್ 2025, 8:31 IST
ವಿದ್ಯುತ್‌ನ ಕನಿಷ್ಠ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಮಾಲೂರಿನ ಬೆಸ್ಕಾಂ ಇಲಾಖೆ ಕಚೇರಿ ಮಂಭಾಗದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು
ವಿದ್ಯುತ್‌ನ ಕನಿಷ್ಠ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಮಾಲೂರಿನ ಬೆಸ್ಕಾಂ ಇಲಾಖೆ ಕಚೇರಿ ಮಂಭಾಗದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು   

ಮಾಲೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮತ್ತು ಬೆಸ್ಕಾಂ ವಿದ್ಯುತ್ ಯುನಿಟ್ ದರ ಏರಿಕೆ ಮಾಡಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಿಣಿ ಶಿವಪ್ಪ ಮಾತನಾಡಿ, ಕರ್ನಾಟಕ ಸರ್ಕಾರವು ವಿದ್ಯುತ್ ಬಳಕೆದಾರರನ್ನು ಸುಲಿಗೆ ಮಾಡುತ್ತಿದೆ. ರಾಜ್ಯ ಸರ್ಕಾರದ ಉಚಿತ 200 ಯುನಿಟ್ ವಿದ್ಯುತ್ ಯೋಜನೆಯಲ್ಲಿ ಜನರು ಮೈಮರೆತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸರ್ಕಾರವು, ₹3.80 ಇದ್ದ ವಿದ್ಯುತ್ ಪ್ರಾರಂಭಿಕ ಶುಲ್ಕವನ್ನು ಈಗ ₹5.80ಕ್ಕೆ ನಿಗದಿಪಡಿಸಿದೆ ಎಂದು ದೂರಿದರು.

ಒಂದು ಕಿ.ವ್ಯಾಟ್ ವಿದ್ಯುತ್ ಬಳಕೆ ಮಾಡಿದ್ದರೆ ಈ ಹಿಂದೆ ₹40 ಕನಿಷ್ಠ ದರ ವಿಧಿಸಲಾಗುತ್ತಿತ್ತು. ಇದನ್ನು ಈಗ ₹145ಕ್ಕೆ ಹೆಚ್ಚಿಸಲಾಗಿದೆ. ಈ ರೀತಿ ವಿದ್ಯುತ್ ಬಳಕೆದಾರರ ಗಮನಕ್ಕೆ ತರದೆ ವಿದ್ಯುತ್ ದರವನ್ನು ಏಕಮುಖವಾಗಿ ಏರಿಕೆ ಮಾಡಿರುವ ಸರ್ಕಾರದ ತೀರ್ಮಾನವು ಸಾರ್ವಜನಿಕರ ಶೋಷಣೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. 

ADVERTISEMENT

ಹಳೆಯ ಮೀಟರ್‌ಗಳನ್ನು ಬದಲಿಸಿ ಡಿಜಿಟಲ್ ಮೀಟರ್ ಅಳವಡಿಸುವುದಾಗಿ ಹೇಳುತ್ತಿರುವ ಕೆಇಆರ್‌ಸಿ ಮತ್ತು ಬೆಸ್ಕಾಂ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ. ಕೇವಲ ₹900 ಇರುವ ಮೀಟರ್ ಅನ್ನು ₹10 ಸಾವಿರಕ್ಕೆ ಖರೀದಿಸಿರುವುದೇ ದೊಡ್ಡ ಭ್ರಷ್ಟಾಚಾರ ಎಂದು ಆರೋಪಿಸಿದರು. 

ಜನರ ಮನೆಗಳಿಗೆ ಹೊಸ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಬೆಸ್ಕಾಂ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಒಟ್ಟುಗೂಡಿ ಬೆಸ್ಕಾಂ ವಿರುದ್ಧ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್, ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್, ದಿನ್ನೆಹೊಸಹಳ್ಳಿ ರಮೇಶ್, ನಿದರಮಂಗಲ ನಾಗಪ್ಪ, ಸಾದಪ್ಪ, ಮುನಿಯಪ್ಪ, ಮುನಿರಾಜು ಕರಿಸಂದ್ರ ನಾರಾಯಣಸ್ವಾಮಿ, ಚಂದ್ರಪ್ಪ, ಮುನಿ ನಾರಾಯಣಪ್ಪ, ಸೀನಪ್ಪ, ನರಸಿಂಹಯ್ಯ ಹಾಜರಿದ್ದರು.

‘ಡಿಜಿಟಲ್ ಮೀಟರ್ ಅಳವಡಿಕೆ ನಿಲ್ಲಿಸಿ’

ಹಳೆಯ ವಿದ್ಯುತ್ ಮೀಟರ್ ತೆಗೆದು ಹೊಸ ಡಿಜಿಟಲ್ ಮೀಟರ್ ಹಾಕುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ರೈತ ಮುಖಂಡ ಬೆಡಶೆಟ್ಟಿಹಳ್ಳಿ ರಮೇಶ್ ಒತ್ತಾಯಿಸಿದರು.  ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಜಾರಿ ಮಾಡಿರುವ ಸ್ವಯಂ ಆರ್ಥಿಕ ಯೋಜನೆಯನ್ನು ನಿಲ್ಲಿಸಬೇಕು. ವಿದ್ಯುತ್ ಖಾಸಗೀಕರಣ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.  ಪ್ರತಿ ತಿಂಗಳು ರೈತರು ರೈತ ಮುಖಂಡರು ಹಾಗೂ ಅಧಿಕಾರಿಗಳ ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.