ADVERTISEMENT

ಮಾಲೂರು ಭೂ ಹಗರಣ: ರೈತ ಸಂಘದಿಂದ ಬಾರು ಕೋಲು ಚಳವಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:00 IST
Last Updated 21 ಫೆಬ್ರುವರಿ 2026, 8:00 IST
ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ರೈತಸಂಘದಿಂದ ಶುಕ್ರವಾರ ಬಾರು ಕೋಲು ಚಳವಳಿ ನಡೆಸಿ ಸರ್ಕಾರಿ ಆಸ್ತಿ ಉಳಿಸಲು ಕಂದಾಯ ಸಚಿವರಿಗೆ ಕಂದಾಯ ಶಿರಸ್ತೇದಾರ ಹರಿಪ್ರಸಾದ್ ಮೂಲಕ ಮನವಿ ಸಲ್ಲಿಸಿದರು
ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ರೈತಸಂಘದಿಂದ ಶುಕ್ರವಾರ ಬಾರು ಕೋಲು ಚಳವಳಿ ನಡೆಸಿ ಸರ್ಕಾರಿ ಆಸ್ತಿ ಉಳಿಸಲು ಕಂದಾಯ ಸಚಿವರಿಗೆ ಕಂದಾಯ ಶಿರಸ್ತೇದಾರ ಹರಿಪ್ರಸಾದ್ ಮೂಲಕ ಮನವಿ ಸಲ್ಲಿಸಿದರು   

ಮಾಲೂರು: ತಾಲ್ಲೂಕಿನ ಪಿ.ನಂಬರ್ ದುರಸ್ತಿ ಅಕ್ರಮ ಸಾಗುವಳಿ ದಂಧೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಇದರಲ್ಲಿ ತೊಡಗಿರುವ ಭೂಗಳ್ಳರು ಹಾಗೂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಚೇರಿ ಮುಂಭಾಗ ಬಾರು ಕೋಲು ಚಳವಳಿ ನಡೆಸಿ ಕಂದಾಯ ಶಿರಸ್ತೇದಾರ ಹರಿಪ್ರಸಾದ್ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸಾವಿರಾರು ಕೋಟಿ ಬೆಲೆ ಬಾಳುವ ಸಾವಿರಾರು ಎಕರೆ ಸರ್ಕಾರಿ ಆಸ್ತಿಯನ್ನು ಭೂಗಳ್ಳರಿಂದ ರಕ್ಷಿಸುವವರು ಯಾರು? ದಿನೇ ದಿನೇ ಮಾಲೂರಿನಲ್ಲಿ ಭೂ ಹಗರಣಗಳು ಹೆಚ್ಚಾಗುತ್ತಿದ್ದರೂ ಇದನ್ನು ಜಿಲ್ಲಾಡಳಿತ ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಿಡಿಕಾರಿದರು.

ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸುವವರು ಯಾರು ಎಂಬುವುದು ಬಹಿರಂಗ ಪಡಿಸಬೇಕಾದರೆ ಸರ್ವೆ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಅವರ ಅವಧಿಯಲ್ಲಾಗಿರುವ ತಾಲ್ಲೂಕಿನ ಎಲ್ಲಾ ಆದೇಶಗಳನ್ನು ರದ್ದು ಮಾಡಬೇಕು. ತಾಲ್ಲೂಕಿನ ಭೂ ಹಗರಣಗಳ ತನಿಖೆಗೆ ಸಿಬಿಐಗೆ ಒಪ್ಪಿಸಿ ಸರ್ಕಾರಿ ಆಸ್ತಿಯನ್ನು ಉಳಿಸಬೇಕೆಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕಿನ ನೊಸಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಂದ ಬರುವ ವಿಷಪೂರಿತ ಕೆಮಿಕಲ್‌ ನೀರಿನಿಂದ ಸುತ್ತಮುತ್ತಲ 20 ಗ್ರಾಮಗಳ ರೈತರ ಕೃಷಿ ಪೆಂಪ್‌ಸೆಟ್‌ಗಳು ವಿಷ ನೀರಾಗಿವೆ. ಇದರಿಂದ ಬೆಳೆಯುವ ಬೆಳೆಗಳಲ್ಲೂ ವಿಷಕಾರಿ ಅಂಶಗಳು ಕಾಣಿಸಿಕೊಂಡಿವೆ. ಹಾಗಾಗಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡು ರೈತರ ಬದಕನ್ನು ರಕ್ಷಿಸಬೇಕೆಂದು ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ಬಡ ರೈತರಿಗೆ ಅನಕೂಲವಾಗಲೆಂದು ಕಂದಾಯ ಸಚಿವರು ಪಿ.ನಂಬರ್ ದುರಸ್ತಿಗೆ ಆದೇಶ ನೀಡಿದ್ದಾರೆ. ಇದು ಬಡವರಿಗೆ ವರದಾನವಾಗಬೇಕಾದದ್ದು, ಬಡವರಿಗೆ ಶಾಪವಾಗಿ ಭೂಗಳ್ಳರಿಗೆ ವರದಾನವಾಗಿದೆ. ನೂರಾರು ವರ್ಷಗಳಿಂದ ಭೂಮಿ ಇಲ್ಲದ ಗಡಿಭಾಗದ ರೈತರು, ಭೂ ಮಂಜೂರಾತಿಗೆ ಜಾತಕ ಪಕ್ಷಿಗಳಂತೆ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದರೆ, ಅಧಿಕಾರಿಗಳು ಭೂಗಳ್ಳರಿಗೆ ರೈತರ ಹೆಸರಿನಲ್ಲಿ ಸಾಗುವಳಿ ಚೀಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ವಾರದೊಳಗೆ ತಾಲ್ಲೂಕಿನ ಭೂ ಮಾಫಿಯಾ, ಪಿ.ನಂಬರ್ ದುರಸ್ತಿ, ಅಕ್ರಮ ಸಾಗುವಳಿ ಚೀಟಿ, ಕೆರೆ ಮಣ್ಣು ಹಾಗೂ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಶಿರಸ್ತೇದಾರ ಹರಿಪ್ರಸಾದ್, ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಭೂ ಮಾಫಿಯಾ, ಅಕ್ರಮ ಗಣಿಗಾರಿಕೆ, ಪಿ.ನಂಬರ್ ದುರಸ್ತಿ ಹಾಗೂ ಅಕ್ರಮ ಸಾಗುವಳಿ ಚೀಟಿಗಳ ದಂಧೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಮುಖಂಡ ಹೊಸಹಳ್ಳಿ ವೆಂಕಟೇಶ್‌, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ದಾನವಹಳ್ಳಿ ಹರೀಶ್‌, ಆಂಜಿನಪ್ಪ, ರೂಪೇಶ್‌, ರಾಜು, ಗಿರೀಶ್‌, ತಿಮ್ಮಣ್ಣ, ಶೈಲಜ, ರತ್ನಮ್ಮ, ಗೌರಮ್ಮ, ಸುಶೀಲಮ್ಮ, ನಯನ, ಗಿರಿಜಾ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.