
ಮಾಲೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಸಿದ್ಧತೆ ಬಿರುಸುಗೊಂಡಿದ್ದು, ಮಾಲೂರು ತಾಲ್ಲೂಕು ಕಚೇರಿಯ ಉಪಖಜಾನೆಯಲ್ಲಿ ಇರಿಸಿದ್ದ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊರತೆಗೆದು ಚುಣಾವಣಾಧಿಕಾರಿಗಳ ವಶಕ್ಕೆ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಅವರು ನೇತೃತ್ವದಲ್ಲಿ ಶುಕ್ರವಾರ ದಾಖಲಾತಿಗಳನ್ನು
ಪೊಲೀಸ್ ಬಂದೋಬಸ್ತಿನೊಂದಿಗೆ ಕೋಲಾರದ ಜಿಲ್ಲಾ ಖಜಾನೆಗೆ ಸಾಗಿಸಲಾಯಿತು.
2023ರಲ್ಲಿ ನಡೆದ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಆ ಚುನಾವಣೆಯಲ್ಲಿ ಗೆದ್ದಿದ್ದ ಶಾಸಕ ಕೆ.ವೈ.ನಂಜೇಗೌಡ ಪರವಾಗಿ ಅವರ ಪುತ್ರರಾದ ಹರೀಶ್ ಹಾಗೂ ಸುನೀಲ್ ನಂಜೇಗೌಡ ಹಾಜರಿದ್ದರು. ಪ್ರತಿ ಸ್ಪರ್ಧಿಗಳಾದ ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ, ಹೂಡಿ ವಿಜಯಕುಮಾರ್ ಸೇರಿದಂತೆ 8 ಮಂದಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅವರ ಸಮ್ಮುಖದಲ್ಲಿ ದಾಖಲಾತಿಗಳನ್ನು ಕೋಲಾರದ ಜಿಲ್ಲಾ ಖಜಾನೆಗೆ ಸಾಗಿಸಲಾಯಿತು.
ಮಾಲೂರು ತಾಲ್ಲೂಕಿನ ಉಪ ಖಜಾನೆಯಲ್ಲಿ 2023ರ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ದಾಖಲೆ ಪತ್ರಗಳು ಇದ್ದವು. ಅವುಗಳನ್ನು
ತೆಗೆದು ವಾಹನದಲ್ಲಿ ಇರಿಸಿ ಸಾಗಿಸಲಾಯಿತು. ಎಸ್.ಎಂ.ಮಂಗಳಾ ನೇತೃತದಲ್ಲಿ ಈ ಪ್ರಕ್ರಿಯೆ ನಡೆಯಿತು. ತಾಲ್ಲೂಕು ಕಚೇರಿಯ ಬಳಿ ಬಿಜೆಪಿ ಹಾಗೂ
ಕಾಂಗ್ರೆಸ್ ಪಕ್ಷದವರು ಜಮಾವಣೆ ಆಗಿದ್ದರು. ಮಾಲೂರು ತಾಲ್ಲೂಕು ತಹಶೀಲ್ದಾರ್ ರೂಪಾ ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಈ ನಡುವೆ, ಕೋಲಾರದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆಗೆ ಸಿದ್ಧತೆ ನಡೆಯುತ್ತಿದೆ.
2023ರಲ್ಲಿ ನಡೆದ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನ ಕೆ.ವೈ.ನಂಜೇಗೌಡ 248 ಮತಗಳಿಂದ ಬಿಜೆಪಿ ಮುಖಂಡ ಕೆ.ಎಸ್.ಮಂಜುನಾಥ್ ಗೌಡ ಅವರನ್ನು ಸೋಲಿಸಿದ್ದರು.
ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಮಂಜುನಾಥ್ ಗೌಡ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ನಂಜೇಗೌಡ ಅವರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್, ಮರು ಮತ ಎಣಿಕೆಗೆ ಸೂಚನೆ
ನೀಡಿತ್ತು. ಈ ಆದೇಶವನ್ನು ನಂಜೇಗೌಡರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನಂಜೇಗೌಡರ ಅಸಿಂಧು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತಾದರೂ ಹೈಕೋರ್ಟ್ ಆದೇಶದಂತೆ ಮರು ಮತ ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.
Highlights - ನ.11ರಂದು ಕೋಲಾರದಲ್ಲಿ ನಡೆಯಲಿರುವ ಮರು ಮತ ಎಣಿಕೆ 2023ರಲ್ಲಿ 248 ವೋಟುಗಳಿಂದ ಗೆದ್ದಿದ್ದ ಕೆ.ವೈ.ನಂಜೇಗೌಡ ತಕರಾರು ಅರ್ಜಿ ಸಲ್ಲಿಸಿದ್ದ ಕೆ.ಎಸ್.ಮಂಜುನಾಥಗೌಡ
ಜನರ ದಾರಿ ತಪ್ಪಿಸುತ್ತಿರುವ ಎದುರಾಳಿ
ಚುನಾವಣಾ ಆಯೋಗದ ನಿಯಮಗಳನ್ನು ಅಧಿಕಾರಿಗಳು ಪಾಲನೆ ಮಾಡುತ್ತಾರೆ. ಯಾವ ದಾಖಲೆ ಎಲ್ಲಿರಬೇಕು ಎಂಬುವುದು ಅಧಿಕಾರಿಗಳಿಗೆ ಬಿಟ್ಟಿದ್ದು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೇ ಅಧಿಕಾರಿಗಳು ಅನುಭವಿಸುತ್ತಾರೆ.
ಯಾರೂ ಯಾವ ದಾಖಲೆಯನ್ನು ತಿದ್ದಲು ಆಗದು. ಆದರೆ ವಿರೋಧಿಗಳು ಸುಮ್ಮನೇ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹರೀಶ್ ನಂಜೇಗೌಡ ವಾಗ್ದಾಳಿ ನಡೆಸಿದರು. ಕೋಲಾರಕ್ಕೆ ದಾಖಲೆ ಸ್ಥಳಾಂತರ ಸಂಬಂಧ ಸ್ಥಳದಲ್ಲಿರುವ ನೋಟಿಸ್ ಬಂದಿತ್ತು. ನಮ್ಮ ಸಮಕ್ಷಮದಲ್ಲೇ ಟ್ರಂಕ್ ತೆರೆದು ಅಭ್ಯರ್ಥಿಗಳಿಗೆ ದಾಖಲೆ ತೋರಿಸಿದರು. ನಂತರ ಮಹಜರ್ ಮಾಡಿ ಸಾಗಿಸಿದರು. 17 (ಸಿ) ಭಾಗ –1 ಫಾರಂಗಳು ಖಜಾನೆಯಲ್ಲಿ ಇದ್ದವು 17 (ಸಿ) ಭಾಗ–2 ಫಾರಂಗಳು ನ್ಯಾಯಾಲಯದಲ್ಲಿ ಇವೆ. ಇವೆಲ್ಲಾ ಸಾರ್ವಜನಿಕ ದಾಖಲೆ. ಈ ದಾಖಲೆಗಳು ಮರು ಮತ ಎಣಿಕೆಗೆ ಅವಶ್ಯವಿರುವುದಿಲ್ಲ ಎಂದರು. ವಿವಿ ಪ್ಯಾಟ್ ಏಣಿಕೆಯನ್ನು ಈ ಹಿಂದೆಯೂ ಮಾಡಿದ್ದರು. ಮರು ಮತ ಎಣಿಕೆ ಸಂದರ್ಭದಲ್ಲೂ ಮಾಡಬಹುದು ಎಂದು ಹೇಳಿದರು.
ಉಪಖಜಾನೆಯಲ್ಲಿ ದಾಖಲೆ ಇಟ್ಟಿದ್ದೇಕೆ?
ಚುನಾವಣೆಗೆ ಸಂಬಂಧಿಸಿದ 17 (ಸಿ) ಭಾಗ –1 ಫಾರಂ 17 (ಸಿ) ಭಾಗ –2 ಫಾರಂ ದಾಖಲಾತಿಗಳನ್ನು ಮಾಲೂರು ಉಪಖಜಾನೆಯಲ್ಲೇ ಇಟ್ಟಿದ್ದಾರೆ. ವಿವಿ ಪ್ಯಾಟ್ಗಳನ್ನು ಜಿಲ್ಲಾ ಭದ್ರತಾ ಕೊಠಡಿಯಲ್ಲಿ ಇಟ್ಟಿದ್ದಾರೆ. ಈ ದಾಖಲಾತಿಗಳನ್ನು ಮಾತ್ರ ಮಾಲೂರು ಉಪಖಜಾನೆಯಲ್ಲಿ ಇಟ್ಟಿದ್ದು ಏಕೆ? ಇಲ್ಲೇ ಇಡಬೇಕು ಎಂದಿದ್ದರೆ ಏಕೆ ಕೋಲಾರಕ್ಕೆ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರ ಮಾಡಿದರು ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಪ್ರಶ್ನಿಸಿದರು.
ಮೂರು ಬಾರಿ ಉಪಖಜಾನೆಯನ್ನು ತೆರೆದಿದ್ದು ನಮ್ಮ ಗಮನಕ್ಕೆ ಬಂದಿಲ್ಲ. ಅದರಿಂದ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಾವು ಅಂದುಕೊಂಡಂತೆ ಕೆಲ ದಾಖಲೆಗಳು ಇಲ್ಲಿಯೇ ಸಿಕ್ಕಿವೆ. ಕೆಲವರನ್ನು ಇಲ್ಲಿ ಇಡುವಂತಿಲ್ಲ. ಈ ಸಂಬಂಧ ಎಲ್ಲಾವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು. ಎಲ್ಲಾ ಇವಿಎಂ ವಿವಿ ಪ್ಯಾಟ್ಗಳನ್ನು ಎಣಿಕೆ ನಡೆಸಬೇಕು. ಇಲ್ಲವಾದಲ್ಲಿ ಎಣಿಕೆ ಪೂರ್ಣವಾಗದು ಎಂದರು. ಸ್ಥಳೀಯ ಶಾಸಕರು ಏಕವಚನದಲ್ಲಿ ಮಾತಾಡುವುದನ್ನು ಮತ್ತೆ ಆರಂಭಿಸಿದ್ದಾರೆ. ನಾನು ಕೂಡ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.