ಮಾಲೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನು ಭೂ ಕಬಳಿಕೆ ಮಾಡುತ್ತಿರುವವರ ವಿರುದ್ಧ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ದಲಿತ ಸಂಘರ್ಷ ಸಮಿತಿ ವತಿಯಿಂದ ಅ.28 ರಂದು ಅಹೋ ರಾತ್ರಿ ಪ್ರತಿಭಟನೆ ನಡೆಸುವುದಾಗಿ ದಸಂಸ ಸಂಚಾಲಕ ಎಸ್.ಎಂ.ವೆಂಕಟೇಶ್ ನೇತೃತ್ವದಲ್ಲಿ ಮಾಲೂರು ಶಿರಸ್ತೇದಾರ್ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ತಾಲ್ಲೂಕಿನ ತೋರ್ನಹಳ್ಳ, ದೊಂಬ್ರಹಳ್ಳಿ, ಹುಂಗೇನಹಳ್ಳಿ, ಗಂಗಾಪುರ, ಚಿಕ್ಕತಿರುಪತಿ, ಯಟ್ಟಕೊಡಿ, ಹುರಳಗೆರೆ, ಲಕ್ಕೂರು, ಲಿಂಗಾಪುರ, ರಾಜೀವ್ ನಗರ, ಮಡಿವಾಳ ಇನ್ನೂ ಹಲವೆಡೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಭೂ ಕಬಳಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಅನೇಕ ಬಾರಿ ಹೋರಾಟ ನಡೆಸಿದ್ದೇವೆ. ಆದರೆ, ಸರ್ಕಾರಿ ಆಸ್ತಿ ಕಾಪಾಡಬೇಕಾದ ಅಧಿಕಾರಿಗಳೇ ಉಳ್ಳವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಮಾಲೂರು ತಾಲ್ಲೂಕು ಕಸಬಾ ಹೋಬಳಿ ನೀಲಕಂಠ ಅಗ್ರಹಾರದ ಸರ್ವೆ ನಂಬರ್ 18ರ ಗುಡಿಸಲು ವಾಸಿಗಳು ಅಕ್ರಮ ಸಕ್ರಮ 94c ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ, ಹಕ್ಕು ಪತ್ರ ನೀಡದೆ ದಲಿತ ವಿರೋಧಿ ಧೋರಣೆ ತಳಿದಿದೆ ಎಂದರು.
ಸರ್ಕಾರಿ ಜಮೀನು ಉಳಿಸಿ ಕೊಳ್ಳುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಸರ್ಕಾರಿ ಆಸ್ತಿ ಕಾಪಾಡಬೇಕು. ಇಲ್ಲದಿದ್ದರೆ, ಅ.28ರಂದು ಆಹೋ ರಾತ್ರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಾಲ್ಲೂಕು ಸಂಘಟನಾ ಸಂಚಾಲಕರಾದ ಡಿ.ಎನ್.ನಾರಾಯಣಸ್ವಾಮಿ, ಬಂಡಟ್ಟಿ ನಾರಾಯಣ ಸ್ವಾಮಿ, ಶಾಮಣ್ಣ, ಮಾಸ್ತಿ ವೆಂಕಟೇಶಪ್ಪ, ಮಂಜುನಾಥ್ ನಾಯ್ಡು, ಮಾಸ್ತಿ ಶಿವ ಶಂಕರ್, ಉಲ್ಲೆರಹಳ್ಳಿ ಮುನಿರಾಜ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.