
ಕೋಲಾರ: ಎಲ್ಲಿಂದಲೋ ಬಂದಿರುವ ಮಂಜುನಾಥಗೌಡನಿಗೆ ಅಷ್ಟು ಗತ್ತು ಇರಬೇಕಾದರೆ ಮಾಲೂರು ತಾಲ್ಲೂಕಿನಲ್ಲಿ ಜನಿಸಿರುವ ನಾನು ಹೇಗಿರಬೇಕು? ಮಾಲೂರು ಕ್ಷೇತ್ರದ ಜನ ನನ್ನನ್ನು ಬೆಳೆಸಿದ್ದಾರೆ ಎಂದು ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ, ಎದುರಾಳಿಗೆ ತಿರುಗೇಟು ನೀಡಿದರು.
ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪ್ಪ, ಅಮ್ಮ ಎಲ್ಲರ ಹೆಸರು ಬಳಸಿಕೊಂಡು ಅಸಭ್ಯ ಭಾಷೆಯಲ್ಲಿ ಮಾತನಾಡುತ್ತಾರೆ. ಆತನನ್ನು ಕರೆತಂದಿದ್ದು, ಅವಕಾಶ ನೀಡಿದ್ದು, ನಂತರ ಎರಡು ಸಲ ಸೋಲಿಸಿ ವಾಪಸ್ ಕಳಿಸಿದ್ದೂ ನಾವೇ. ನನ್ನ ಕುಟುಂಬದ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ’ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ನನ್ನ ಮೇಲೆ ಇ.ಡಿ ಬಿಟ್ಟಾಯಿತು. ಸುಪ್ರೀಂ ಕೋರ್ಟ್ವರೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೇನು ಬಾಕಿ ಉಳಿಸಿದ್ದೀಯಪ್ಪ? ನನಗೆ ಯಾವುದೇ ಭಯ ಇಲ್ಲ. ಭಯವಿದ್ದಿದ್ದರೆ ಶಾಸಕ ಆಗುತ್ತಿರಲಿಲ್ಲ. ನನ್ನ ವೈಯಕ್ತಿಕ ವಿಚಾರ ಮಾತನಾಡಿದರೆ ಎಲ್ಲದ್ದಕ್ಕೂ ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ.11 ರಂದು ಮರು ಮತ ಎಣಿಕೆ ನಿಗದಿಯಾಗಿದೆ. ಇದರಿಂದಾಗಿ ಇಡೀ ದೇಶವೇ ಮಾಲೂರು ಕ್ಷೇತ್ರದತ್ತ ಎದುರು ನೋಡುವಂತಾಗಿದೆ. ಭವಿಷ್ಯದಲ್ಲಿ ಯಾರು ಇರುತ್ತಾರೋ, ಇಲ್ಲವೋ ಗೊತ್ತಿಲ್ಲ. ಮಾಲೂರು ಇತಿಹಾಸ ಪುಟಗಳಲ್ಲಿ ಸೇರುವಂತಾಗಿದೆ. ಇದಕ್ಕೆಲ್ಲ ಆ ಮಹಾನುಭವ ಕಾರಣ ಎಂದು ಹೇಳಿದರು.
2023ರಲ್ಲಿ ನಡೆದ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ 248 ಮತಗಳಿಂದ ಗೆದ್ದಿದ್ದೆ. ಎದುರಾಳಿ ತಕರಾರು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ಮರು ಮತ ಎಣಿಕೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶದ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಲಿದೆ. ಆದರೆ, ಏಜೆಂಟರು ಲೆಕ್ಕ ಹಾಕಿ ಫಲಿತಾಂಶ ತಿಳಿಸುತ್ತಾರೆ.ಹೀಗಾಗಿ, ನ್ಯಾಯಾಲಯವು ಅಧಿಕೃತವಾಗಿ ಘೋಷಿಸುವ ಮುನ್ನವೇ ನಮಗೆ ಮಾಹಿತಿ ಗೊತ್ತಾಗಿರುತ್ತದೆ. 11ರವರೆಗೆ ಕಾಯಬೇಕು. ಗೆಲುವುದು ನಮ್ಮದೇ ಎಂದು ತಿಳಿಸಿದರು.
ಮರು ಎಣಿಕೆ–ಜಿಲ್ಲಾಧಿಕಾರಿ ಸಭೆ
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ವಿಚಾರವಾಗಿ ಎಲ್ಲಾ 15 ಅಭ್ಯರ್ಥಿಗಳನ್ನು ಜಿಲ್ಲಾಧಿಕಾರಿ ಆಹ್ವಾನಿಸಿ ಸಹಕಾರ ಕೋರಿದ್ದಾರೆ ಎಂದು ನಂಜೇಗೌಡ ಹೇಳಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಮರು ಮತ ಎಣಿಕೆ ನಡೆಯುತ್ತಿದ್ದು ಎಲ್ಲರ ಸಹಕಾರ ಕೋರಿದ್ದಾರೆ. ಸಹಕರಿಸಲು ಈಗಾಗಲೇ ನಾವು ಒಪ್ಪಿಕೊಂಡಿದ್ದೇವೆ. ಆದರೆ ಎದುರಾಳಿಯು ನಿತ್ಯ ಒಂದಿಲ್ಲೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಧಿಕಾರಿಗಳು ನ್ಯಾಯಾಲಯದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಬುರುಡೆ ಬಿಡುವುದು ನನಗೆ ಗೊತ್ತಿಲ್ಲ
ನಂಜೇಗೌಡರು ಮೂರನೇ ಬಾರಿ ಅಲ್ಲ; 30 ಬಾರಿ ಗೆಲ್ಲಲಿ. ಆದರೆ ಅವರು ಒಂದೊಂದು ಸಲ ಒಂದೊಂದು ರೀತಿ ಮಾತನಾಡುತ್ತಾರೆ. ಅವರಂತೆ ಬುರುಡೆ ಬಿಡುವುದು ನನಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ಹೇಳಿದರು. ಈಗಾಗಲೇ ಜಿಲ್ಲಾಡಳಿತಕ್ಕೆ ಕೆಲವೊಂದು ದಾಖಲೆ ಸಲ್ಲಿಸಿದ್ದೇನೆ. ವಿವಿ ಪ್ಯಾಟ್ ಎಣಿಕೆ ಸೇರಿದಂತೆ ಎಲ್ಲವನ್ನೂ ಈಗಲೇ ನ್ಯಾಯಬದ್ಧವಾಗಿ ನಡೆಸಬೇಕು. ಸಮಸ್ಯೆ ಇರುವ ಯಂತ್ರದ ಮಾಹಿತಿ ಸಿಕ್ಕಿದೆ. ಏನಾದರೂ ಸಮಸ್ಯೆ ಆದರೆ ಮತ್ತೆ ಸುಪ್ರೀಂ ಕೋರ್ಟ್ಗೆ ಹೋಗಬೇಕಾಗುತ್ತದೆ. ಹೀಗಾಗಿ ಪಾರದರ್ಶಕವಾಗಿ ಮತ ಎಣಿಕೆ ನಡೆಸಬೇಕು ಎಂದರು.
ಮಾಲೂರು ಕ್ಷೇತ್ರದ ಮರು ಮತ ಎಣಿಕೆಯನ್ನು ಪಾರದರ್ಶಕವಾಗಿ ಅಧಿಕಾರಿಗಳು ನಡೆಸಲು ಅವಕಾಶ ಮಾಡಿಕೊಡಬೇಕಾಗಿದೆ. ಆದರೆ ಎದುರಾಳಿ ಅದಕ್ಕೂ ಅಡ್ಡಿಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆಕೆ.ವೈ.ನಂಜೇಗೌಡ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.