ADVERTISEMENT

ಕೆಲ ಮಹಾನುಭಾವರಿಂದ ಅಭಿವೃದ್ಧಿಗೆ ಅಡ್ಡಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಿಡಿ

ರಾಯಲ್ಪಾಡಿನಲ್ಲಿ 30 ಎಕರೆ ಜಮೀನು ಒತ್ತುವರಿ ತೆರವಿಗೆ ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:23 IST
Last Updated 24 ಫೆಬ್ರುವರಿ 2026, 6:23 IST
ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ ಗ್ರಾಮದಲ್ಲಿ ಸೋಮವಾರ ‘ತಾಲ್ಲೂಕು ಆಡಳಿತ ಗ್ರಾಮದ ಕಡೆ’ ಕ್ರಾರ್ಯಕ್ರಮವನ್ನು ಶಾಸಕ ಜಿ.ಕೆ.ವೆಂಟಕಶಿವಾರೆಡ್ಡಿ ಉದ್ಘಾಟಿಸಿದರು
ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ ಗ್ರಾಮದಲ್ಲಿ ಸೋಮವಾರ ‘ತಾಲ್ಲೂಕು ಆಡಳಿತ ಗ್ರಾಮದ ಕಡೆ’ ಕ್ರಾರ್ಯಕ್ರಮವನ್ನು ಶಾಸಕ ಜಿ.ಕೆ.ವೆಂಟಕಶಿವಾರೆಡ್ಡಿ ಉದ್ಘಾಟಿಸಿದರು   

ಶ್ರೀನಿವಾಸಪುರ: ರಾಯಲ್ಪಾಡಿನಲ್ಲಿ 30 ಎಕರೆ ಜಮೀನು ಒತ್ತುವರಿ ಆಗಿದೆ. ಅದನ್ನು ಒತ್ತುವಾರಿದಾರರಿಂದ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಲ್ಲಿ ಟೌನ್‌ಶಿಪ್‌ ನಿರ್ಮಿಸಲಾಗುವುದು. ಸಾವಿರ ನಿವೇಶನಗಳು ಆಗುತ್ತವೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ಅಡ್ಡಗಲ್‌ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ‘ತಾಲ್ಲೂಕು ಆಡಳಿತ ಗ್ರಾಮದ ಕಡೆ’ ಕ್ರಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೇಶನ ರಹಿತರನ್ನು ಒಂದು ತಿಂಗಳಲ್ಲಿ ಗುರುತಿಸಿ ಅಂಥರಿಗೆ ನಿವೇಶವನ್ನು ವಿತರಿಸಲಾಗುವುದು ಎಂದರು.

ADVERTISEMENT

ಕೆಲ ಮಹಾನುಭಾವರು ಅವರ ಸರ್ಕಾರವಿದೆ ಎಂದು ಅಭಿವೃದ್ಧಿ ಕೆಲಸಗಳಿಗೆ ಅಡ್ಡಪಡಿಸುತ್ತಿದ್ದಾರೆ. ನಾನು ಯಾರಿಗೂ ಭಯಪಡುವುದಿಲ್ಲ. ಹೋರಾಟ ಮಾಡಿ ಕ್ಷೇತ್ರದ ಜನತೆಯ ಋಣ ತೀರಿಸಿಕೊಳ್ಳುತ್ತೇನೆ. ತಾಲ್ಲೂಕಿನಲ್ಲಿ ಅವರು ಅಧಿಕಾರದಲ್ಲಿದ್ದಾಗ ನಾನು ಕ್ಷೇತ್ರದ ಅಭಿವೃದ್ಧಿಗೆ ಅಡ್ಡಪಡಿಸಿಲ್ಲ. ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಬೇಕಾದ ಮೂಲಸೌಲಭ್ಯಗಳನ್ನು ಕಲ್ಪಿಪಿಸಲು ಸಿದ್ಧನಿದ್ದೇನೆ. ₹ 8 ಕೋಟಿಯನ್ನು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ನೀಡಿದ್ದೇನೆ. ರಾಯಲ್ಪಾಡು ಗ್ರಾಮದಲ್ಲಿ ₹ 65 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಕೊಟ್ಟಿದ್ದೇನೆ. ವಿವಿಧ ಇಲಾಖಾಧಿಕಾರಿಗಳು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಬೇಕು ಎಂದರು.

10 ವರ್ಷಗಳಿಂದ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಜನಾಂಗಕ್ಕೆ ಕೊಳವೆಬಾವಿ ಕೊಟ್ಟಿರಲಿಲ್ಲ. ನನ್ನ ಅವಧಿಯಲ್ಲಿ 600 ಕೊಳವೆಬಾವಿ ಕೊರೆಯಿಸಲಾಗಿದೆ. ಮುದಿಮಡುಗು ಗ್ರಾಮ ಪಂಚಾಯಿತಿಗೆ ಸೇರಿದಂತೆ ಕೆಲವರಿಗೆ ರೇಷನ್‌ ಕಾರ್ಡ್‌ ರದ್ದಾಗಿ ಅವರಿಗೆ ಅಕ್ಕಿ, ಇತರೆ ಸಾಮಗ್ರಿ ಸಿಗುತ್ತಿಲ್ಲವೆಂದು ದೂರು ನೀಡಿದ್ದಾರೆ. ಬಡಕುಟುಂಬಗಳು ಅನ್ಯಾಯಕ್ಕೆ ಒಳಗಾದರೆ ನಾನು ಸುಮ್ಮನೆ ಇರುವುದಿಲ್ಲ. ತಕ್ಷಣ ಅಧಿಕಾರಿಗಳು ಬಡಕುಟುಂಬಗಳಿಗೆ ಸೌಲಭ್ಯ ದೊರಕಿಸಬೇಕು ಎಂದು ಸೂಚಿಸಿದರು.

ಸುಮಾರು ₹ 20 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಐದು ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ ಎಂದರು.

ಸರ್ಕಾರದಿಂದ ಬಡವರಿಗೆ ಸೌಲಭ್ಯ ದೊರಕಿಸಲು ನನ್ನ ಪ್ರಯತ್ನ ಹಾಕುತ್ತಿದ್ದೇನೆ. ಐದು ಬಾರಿ ಶಾಸಕರನ್ನಾಗಿ ಮಾಡಿರುವ ಮತದಾರರ ಋಣ ತೀರಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಆಡಳಿತಕ್ಕೆ ಬಂದೇ ಬರುತ್ತದೆ ಎಂದು ತಿಳಿಸಿದರು.

ರಾಯಲ್ಪಾಡು ಗ್ರಾಮದ ಬ್ರಾಹ್ಮಣರ, ಆರ್ಯವೈಶ್ಯರ ಸ್ಮಶಾನವನ್ನು ಅಭಿವೃದ್ಧಿಪಡಿಸಲು ಸಮುದಾಯದ ಮುಖಂಡರು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಕೆ.ಸರ್ವೇಶ್ ಮಾತನಾಡಿ, ‘ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಚೇರಿಗಳಿಗೆ ಅಲೆದಾಡಬಾರದೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೇಸಿಗೆ ಸನ್ನಿಹತವಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಕುಡಿಯವ ನೀರಿನ ಸೌಲಭ್ಯವನ್ನು ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕು’ ಎಂದರು.

ವಿವಿಧ ಇಲಾಖೆಗಳ ಸಂಬಂಧಪಟ್ಟ ಸಾರ್ವಜನಿಕರಿಂದ ಮುದಿಮುಡುಗು 33, ರಾಯಲ್ಪಾಡು 34, ಯರಂವಾರಿಪಲ್ಲಿ 14, ಅಡ್ಡಗಲ್ 9 ಅರ್ಜಿಗಳನ್ನು ಸ್ವೀಕರಿಸಲಾಯಿತು.

ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ಪಿಡಿಓ ನರೇಂದ್ರ ಬಾಬು, ಏಜಾದ್ ಪಾಷ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೇಂಪಲ್ಲಿ ನಾಗರಾಜರೆಡ್ಡಿ, ಮುಖಂಡರಾದ ಜಿ.ವಿ.ರಾಮಕೃಷ್ಣಾರೆಡ್ಡಿ, ಸಿಮೆಂಟ್‌ ನಾರಾಯಣಸ್ವಾಮಿ, ಸುಧಾಕರ್, ಆಂಜಿ, ಡಿ.ಸಿ.ವೆಂಕಟರಮಣ, ವಿಶ್ವನಾಥ್, ನರೇಶ್, ಆನಂದ್, ಶಿವಾರೆಡ್ಡಿ, ರಘುನಾಥಪುರ ಸುಬ್ರಮಣ , ರಾಜ, ಶಿವಾರೆಡ್ಡಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.