ಕೋಲಾರ: ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಬದುಕನ್ನು ರಕ್ಷಿಸಲು ಐಕ್ಯ ಚಳವಳಿ ಅಗತ್ಯ ಎಂದು ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಹೇಳಿದರು.
ರೈತ, ಕಾರ್ಮಿಕರ ಹಾಗೂ ಕೃಷಿ ಕೂಲಿಕಾರ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಸಿಐಟಿಯು ಮತ್ತು ಕೆಪಿಆರ್ಎಸ್ನಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ
ಮಾತನಾಡಿದರು.
ದೇಶವನ್ನು ಕಟ್ಟಿದ ರೈತ,ಕಾರ್ಮಿಕ, ಜನಸಾಮಾನ್ಯ ಹಾಗೂ ಮಹಿಳಾ ಕೂಲಿಕಾರರ ಬದುಕಿಗೆ,ಅವರ ಕುಟುಂಬಕ್ಕೆ ಭದ್ರತೆ ಇಲ್ಲದೆ ಕಳೆದ ಮೂರು ದಶಕಗಳಿಂದ ಜಾರಿಯಲ್ಲಿರುವ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ನೀತಿಗಳಿಂದಾಗಿ ಜನಸಾಮಾನ್ಯರು ಬಲಿಪಶುಗಳಾಗಿದ್ದಾರೆ. ದೇಶದ ಶ್ರಮ ಜೀವಿಗಳ ಮೇಲೆ ಇಂತಹ ದಾಳಿಗಳನ್ನು ಒಂದು ವರ್ಗವಾಗಿ ಐಕ್ಯತೆಯಿಂದ ಎದುರಿಸಬೇಕು ಎಂದರು.
ಸರ್ಕಾರಗಳು ಈ ಕೂಡಲೇ ಪ್ರತಿಯೊಬ್ಬರನ್ನು ಉಚಿತವಾಗಿ ಕೊವಿಡ್ ಪರೀಕ್ಷೆಗೆ ಒಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು. 6 ತಿಂಗಳು ತಿಂಗಳಿಗೆ ₹7,500 ಕೋವಿಡ್ ಪರಿಹಾರ ನೀಡಬೇಕು. ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿ ವೇತನವನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆಪಿಆರ್ಎಸ್ ತಾಲ್ಲೂಕು ಅಧ್ಯಕ್ಷ ಎನ್.ಎನ್ ಶ್ರೀರಾಮ್, ದೇವರಾಜ್, ವಿ.ನಾರಾಯಣರೆಡ್ಡಿ, ಗಂಗಮ್ಮ, ಉಪಾಧ್ಯಕ್ಷ ಯಲ್ಲಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಮುಖಂಡ ಆಶಾ, ಭೀಮರಾಜ್, ಅಪ್ಪಯ್ಯಣ್ಣ, ನಾಗರಾಜಪ್ಪ, ಮಂಜುಳಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.