ADVERTISEMENT

ಮುಳಬಾಗಿಲು | ತಿಂಗಳು ಕಳೆದರೂ ತೆರೆಯದ ಅಕ್ಕ ಕೆಫೆ

9.50 ಲಕ್ಷದಲ್ಲಿ ನಿರ್ಮಿಸಲಾಗಿರುವ ಕಟ್ಟಡ l ಅರ್ಹರಿಗೆ ಕೆಫೆ ಹಸ್ತಾಂತರ: ತಾಲ್ಲೂಕು ಪಂಚಾಯಿತಿ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 5 ಸೆಪ್ಟೆಂಬರ್ 2025, 5:54 IST
Last Updated 5 ಸೆಪ್ಟೆಂಬರ್ 2025, 5:54 IST
ಮುಳಬಾಗಿಲು ನಗರದ ಶಾಸಕರ ಕಚೇರಿ ಮುಂಭಾಗದಲ್ಲಿರುವ ಅಕ್ಕ ಕೆಫೆ
ಮುಳಬಾಗಿಲು ನಗರದ ಶಾಸಕರ ಕಚೇರಿ ಮುಂಭಾಗದಲ್ಲಿರುವ ಅಕ್ಕ ಕೆಫೆ   

ಮುಳಬಾಗಿಲು: ಸ್ವಸಹಾಯ ಗುಂಪುಗಳ ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಂಡು, ಆರ್ಥಿಕವಾಗಿ ಸದೃಢಗೊಳಿಸಲು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರದಲ್ಲಿ ಅಕ್ಕ ಕೆಫೆ (ಒಲವಿನ ಊಟ) ತೆರೆಯಲಾಗಿದೆ. 

ಆದರೆ, ಈ ಕೆಫೆಯನ್ನು ನಿರ್ವಹಣೆ ಮತ್ತು ಮುನ್ನಡೆಸಲು ಇದುವರೆಗೆ ಯಾರೂ ಮುಂದೆ ಬಾರದ, ಕಾರಣ ಕಳೆದೊಂದು ತಿಂಗಳಿನಿಂದ ಕೆಫೆ ಕಟ್ಟಡಕ್ಕೆ ಬೀಗ ಹಾಕಲಾಗಿದೆ. 

ಮುಳಬಾಗಿಲು ನಗರದ ಶಾಸಕರ ಕಚೇರಿ ಕಟ್ಟಡ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮುಂಭಾಗದಲ್ಲಿದ್ದ ಹಳೆ ಕಟ್ಟಡವೊಂದನ್ನು ₹9.50 ಲಕ್ಷ ವೆಚ್ಚದಲ್ಲಿ ನವೀಕರಿಸಿ, ಕೆಫೆಗೆ ಅಗತ್ಯವಿರುವ ಎಲ್ಲ ಮೂಲ‌ಸೌಕರ್ಯಗಳನ್ನು ಒದಗಿಸಲಾಗಿದೆ. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು, ಗೋಡೆಗಳ ಮೇಲೆ ದೇಸೀ ಕಲೆಯ ಚಿತ್ರಗಳನ್ನು ಬಿಡಿಸಲಾಗಿದೆ. ಕಬ್ಬಿಣದ ಚಾವಣಿ ಮತ್ತಿತರರ ಸೌಕರ್ಯಗಳೊಂದಿಗೆ ಕಟ್ಟಡವನ್ನು ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈವರೆಗೆ ಅಕ್ಕ ಕೆಫೆಯನ್ನು ನಿರ್ವಹಿಸುವ ಅಥವಾ ಮುನ್ನಡೆಸಲು ಮಹಿಳೆಯರ ಸ್ವಸಹಾಯ ಗುಂಪುಗಳ ಸಂಘದ ಸದಸ್ಯರು ಆಸಕ್ತಿ ತೋರದ ಕಾರಣ ಕಟ್ಟಡವು ಒಂದು ತಿಂಗಳಿನಿಂದ ನಿರುಪಯುಕ್ತವಾಗಿದೆ. 

ADVERTISEMENT

ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರನ್ನು ಸಂಘಟಿಸುವುದು. ಅವರನ್ನು ಕೃಷಿ ಮತ್ತು ಕೃಷಿಯೇತರ ವಿಭಾಗಗಳ ಅಡಿ ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದು. ಆ ಮೂಲಕ ಅವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುವಂತೆ ಮಾಡಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ(ಎನ್ಆರ್‌ಎಲ್ಎಂ) ಮಹಿಳೆಯರಿಗೆ ನಿರಂತರವಾಗಿ ನಾನಾ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆದರೆ, ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಈ ಯೋಜನೆಗಳನ್ನು ಸೂಕ್ತ ಸಮಯಕ್ಕೆ ಸದ್ಬಳಕೆ ಮಾಡಿಕೊಳ್ಳದ ಕಾರಣ ಯೋಜನೆಗೆ ಅಂದುಕೊಂಡಷ್ಟು ಬೆಂಬಲ ವ್ಯಕ್ತವಾಗಿಲ್ಲ. 

ಕೆಫೆ ನಡೆಸುವವರು ಕಡ್ಡಾಯವಾಗಿ ಎನ್ಆರ್‌ಎಲ್ಎಂ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ (ಎನ್‌ಯುಎಲ್ಎಂ) ಸ್ವಸಹಯ ಗುಂಪಿನ ಸದಸ್ಯರಾಗಿದ್ದು, ಪಾಕ ಪರಿಣತಿಯಲ್ಲಿ ಆಸಕ್ತರಾಗಿಬೇಕು. ಯಾವುದೇ ಒಕ್ಕೂಟದ ಹಣಕಾಸು ಸಂಸ್ಥೆಯ ಸಾಲದ ಬಾಕಿದಾರರಾಗಿರಬಾರದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಲಾಗಿದೆ. ಈ ಷರತ್ತುಗಳೇ ಕೆಫೆ ನಿರ್ವಹಿಸಲು ಇಚ್ಛಿಸುವ ಸದಸ್ಯರ ಆಕಾಂಕ್ಷೆಗೆ ಹಿನ್ನೆಡೆಯಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಹೀಗಾಗಿ, ಕೆಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಿದರೆ, ಅಕ್ಕೆ ಕೆಫೆ ನಿರ್ವಹಿಸಲು ಅರ್ಹರು ಮುಂದೆ ಬರಬಹುದು ಎನ್ನಲಾಗುತ್ತಿದೆ. 

ಅಕ್ಕ ಕೆಫೆಯನ್ನು ಪ್ರಾರಂಭಿಸಲು ಇದುವರೆಗೂ ಯಾರೂ ಬಾರದೆ ಇರುವ ಕಾರಣ ಬೀಗವನ್ನು ಜಡಿದಿರುವುದು.
ಕೆಫೆ ಆರಂಭಿಸಲು ಮುಂದಾಗುವವರು ಮುಂಗಡವಾಗಿ ₹30 ಸಾವಿರ ಪಾವತಿಸಬೇಕು. ಆರಂಭದಲ್ಲಿ ಮಾಸಿಕ 5500 ಬಾಡಿಗೆ ನೀಡಬೇಕು. ಅಂಥ ಅರ್ಹರಿಗೆ ಕೆಫೆ ಹಸ್ತಾಂತರಿಸಲಾಗುವುದು
ಡಾ.ಕೆ. ಸರ್ವೇಶ್ ಕಾರ್ಯ ನಿರ್ವಾಹಕ ಅಧಿಕಾರಿ ತಾ. ಪಂ
ಮುಳಬಾಗಿಲು ನಗರದಲ್ಲಿ ಇಂದಿರಾ ಕ್ಯಾಂಟೀನ್ಆಹಾರ ಪದಾರ್ಥಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಅಕ್ಕ ಕೆಫೆಯಿಂದ ಮತ್ತಷ್ಟು ರಿಯಾಯಿತಿ ಸಿಗಲಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ
ನೀಲಮ್ಮ ಸ್ಥಳೀಯರು
ಸಂಘದ ಸದಸ್ಯರಿಗೆ ಮಾಹಿತಿ ಕೊರತೆ
ಅಕ್ಕ ಕೆಫೆಯ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದು ಒಂದೆರಡು ತಿಂಗಳು ಕಳೆಯುತ್ತಿದೆ. ಆದರೆ ಇದುವರೆಗೆ ಮಹಿಳಾ ಸ್ವಸಹಾಯದ ಗುಂಪಿನ ಯಾವುದೇ ಸದಸ್ಯರು ಕೆಫೆ ನಿರ್ವಹಿಸಲು ಮುಂದೆ ಬಂದಿಲ್ಲ. ಅಕ್ಕ ಕೆಫೆ ಕಟ್ಟಡ ಕಾಮಗಾರಿ ಮುಕ್ತಾಯವಾಗಿದೆ ಮತ್ತು ಅಕ್ಕ ಕೆಫೆಯನ್ನು ಯಾರು ನಿರ್ವಹಿಸಬಹುದು ಎಂಬ ಕುರಿತು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದೆ ಇರುವುದು ಅಕ್ಕ ಕೆಫೆ ಆರಂಭಕ್ಕೆ ಹಿನ್ನಡೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.  ಅಕ್ಕ ಕೆಫೆಯ ಬಗ್ಗೆ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಭಿತ್ತಿಪತ್ರಗಳು ಅಥವಾ ಇನ್ನಿತರ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕಿತ್ತು. ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡಿಲ್ಲ ಎಂದು ದೂರುತ್ತಾರೆ ಸ್ಥಳೀಯರು.  ಕೆಫೆಯ ಕಟ್ಟಡ ಕಾಮಗಾರಿ ಪೂರ್ಣವಾಗಿರುವ ಕುರಿತು ತಾಲ್ಲೂಕು ಪಂಚಾಯಿತಿ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕೆಲವರು ಬಂದು ನೋಡಿಕೊಂಡು ಹೋಗಿದ್ದಾರೆ. ಅರ್ಹರು ಬಂದಲ್ಲಿ ಕೆಫೆಯನ್ನು ಹಸ್ತಾಂತರಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.