ಕೋಲಾರ: ‘ಕಲೆ ಯಾರ ಸ್ವತ್ತಲ್ಲ. ಯಾರು ಬೇಕಾದರೂ ಗಾಯನ ಕಲಿತು ಹಾಡಬಹುದು. ಇದಕ್ಕೆ ತಾಲ್ಲೂಕಿನ ಶಾನುಭೋಗನಹಳ್ಳಿಯ ಗಾಯಕ ಸುಬ್ರಮಣಿ ಉದಾಹರಣೆ’ ಎಂದು ಜನಪದ ಕಲಾವಿದ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಕಲಾ ಸಂಘವು ತಾಲ್ಲೂಕಿನ ಜನಘಟ್ಟ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಬ್ರಮಣಿ ಅವರನ್ನು ಸನ್ಮಾನಿಸಿ ಮಾತನಾಡಿ, ‘ಸಂಗೀತಕ್ಕೆ ಮನಸ್ಸಿಗೆ ಆನಂದ ನೀಡುವ ಶಕ್ತಿಯಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಸುಬ್ರಮಣಿ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಗಾಯನದ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ’ ಎಂದರು.
‘ಸಂಘದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತೇವೆ. ಪ್ರತಿ ತಿಂಗಳು ಎಲ್ಲಾ ಕಲಾವಿದರಿಗೆ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ. ಗ್ರಾಮೀಣ ಭಾಗದ ಭಜನೆ ಕಲಾವಿದರು, ತತ್ವಪದಕಾರರು, ತಮಟೆ ಕಲಾವಿದರು, ಭರತನಾಟ್ಯ, ವೀರಗಾಸೆ ಕಲಾವಿದರನ್ನು ಸಂಘದ ವತಿಯಿಂದ ಸನ್ಮಾನಿಸುತ್ತೇವೆ. ಅವರಿಗೆ ಗೌರವ ಸಂಭಾವನೆ ಹಾಗೂ ಪ್ರಶಸ್ತಿಪತ್ರ ನೀಡುತ್ತೇವೆ’ ಎಂದು ಹೇಳಿದರು.
ಜನಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಟಿ.ವಿ.ತಿಮ್ಮರಾಯಪ್ಪ, ಸಾಹಿತಿ ಶರಣಪ್ಪ ಗಬ್ಬೂರ್ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.