ADVERTISEMENT

ಹಿಂದೂಗಳ ಹಬ್ಬಕ್ಕೆ ಮುಸ್ಲಿಮರ ದುಡಿಮೆ, ಮಹಾಶಿವರಾತ್ರಿ ಹಬ್ಬದೊಂದಿಗೆ ಬೆಸೆದ ಶ್ರಮ

ಜೆ.ಆರ್.ಗಿರೀಶ್
Published 10 ಮಾರ್ಚ್ 2021, 19:30 IST
Last Updated 10 ಮಾರ್ಚ್ 2021, 19:30 IST
ಕೋಲಾರದ ಸುಲ್ತಾನ್‌ ತಿಪ್ಪಸಂದ್ರ ಬಡಾವಣೆಯ ಮನೆಯೊಂದರಲ್ಲಿ ಜೋಳದ ಪುರಿ ಹುರಿಯುತ್ತಿರುವುದು.
ಕೋಲಾರದ ಸುಲ್ತಾನ್‌ ತಿಪ್ಪಸಂದ್ರ ಬಡಾವಣೆಯ ಮನೆಯೊಂದರಲ್ಲಿ ಜೋಳದ ಪುರಿ ಹುರಿಯುತ್ತಿರುವುದು.   

ಕೋಲಾರ: ಮಹಾ ಶಿವರಾತ್ರಿ ಹಬ್ಬ ಬಂತೆಂದರೆ ನಗರದ ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರ ಬಡಾವಣೆಯ ಮುಸ್ಲಿಂ ಸಮುದಾಯದ ಮನೆಗಳಲ್ಲಿ ದುಡಿಮೆಯ ಸಂಭ್ರಮ. ಹಿಂದೂಗಳ ಹಬ್ಬ ಶಿವರಾತ್ರಿಯೊಂದಿಗೆ ಮುಸ್ಲಿಂ ಬಾಂಧವರ ಶ್ರಮದ ಕೊಂಡಿ ಬೆಸೆದಿದೆ.

ಹಬ್ಬದ ದಿನ ಶಿವನಿಗೆ ಸಾಮೆ, ರಾಗಿ, ಜೋಳ, ಭತ್ತದಿಂದ ತಯಾರಿಸಿದ ಅರಳಿಟ್ಟು ನೈವೇದ್ಯ ಮಾಡಲಾಗುತ್ತದೆ. ನಗರದ ಹಾಗೂ ಸುತ್ತಮುತ್ತಲಿನ ಜನರಿಗೆ ಹಬ್ಬಕ್ಕೆ ಬೇಕಾದ ಸಾಮೆ, ಜೋಳ ಹಾಗೂ ಭತ್ತದ ಪುರಿಯನ್ನು ಮುಸ್ಲಿಂ ಸಮುದಾಯದವರು ಹುರಿದು ಕೊಡುತ್ತಾರೆ.

ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರದಲ್ಲಿನ ಸಾಕಷ್ಟು ಮುಸ್ಲಿಂ ಕುಟುಂಬಗಳು ಈ ವೃತ್ತಿಯಲ್ಲೇ ಬದುಕು ಕಟ್ಟಿಕೊಂಡಿವೆ. ವಂಶಪಾರಂಪರ್ಯವಾಗಿ ಬಂದಿರುವ ಈ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿವೆ. ಹಿಂದೆ ಸಾರ್ವಜನಿಕರು ಈ ಕುಟುಂಬಗಳಿಗೆ ಸಾಮೆ, ಜೋಳ, ರಾಗಿ ಕೊಟ್ಟು ಪುರಿ ಹುರಿಸಿಕೊಳ್ಳುತ್ತಿದ್ದರು. ಇದರಿಂದ ಕುಟುಂಬಗಳಿಗೆ ಹಣ ಸಂಪಾದನೆಯಾಗುತ್ತಿತ್ತು.

ADVERTISEMENT

ಕಾಲ ಬದಲಾದಂತೆ ಈ ಆಚರಣೆ ನೇಪಥ್ಯಕ್ಕೆ ಸರಿದಿದೆ. ಈಗ ಮುಸ್ಲಿಂ ಕುಟುಂಬಗಳೇ ತಮಿಳುನಾಡು, ವಿಜಾಪುರ, ದಾವಣಗೆರೆ ಕಡೆಯಿಂದ ಸಾಮೆ, ಭತ್ತ, ಜೋಳ ಖರೀದಿಸಿ ತಂದು ಹುರಿದು ಪೊಟ್ಟಣ ಕಟ್ಟಿ ಮಾರುತ್ತಿವೆ. ಶಿವರಾತ್ರಿಗೂ ಮುನ್ನ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಹಗಲಿರುಳು ಇದೇ ಕೆಲಸ. ಹಬ್ಬ ಮುಗಿದ ನಂತರ ಕಾರದ ಶೇಂಗಾ ಬೀಜ ತಯಾರಿಕೆಯ ಕಾಯಕ.

ಹುರಿಯುವ ಪರಿ: ಸಮುದ್ರ ದಂಡೆಯಲ್ಲಿ ಸಿಗುವ ಶುದ್ಧ ಮರಳನ್ನು ಪುರಿ ಹುರಿಯುವುದಕ್ಕೆ ಬಳಸಲಾಗುತ್ತದೆ. ಒಲೆಯ ಮೇಲಿನ ಕಬ್ಬಿಣದ ಬಾಣಲೆಗೆ ಮರಳು ಹಾಕಿ ಬಿಸಿ ಮಾಡಲಾಗುತ್ತದೆ. ಬಿಸಿಯಾದ ಮರಳಿಗೆ ಸಾಮೆ, ಜೋಳ ಹಾಗೂ ಭತ್ತ ಹಾಕುತ್ತಿದ್ದಂತೆ ಪುರಿ ಹುರಿಯುತ್ತದೆ. ನಂತರ ಜಾಲರಿಯಿಂದ ಮರಳು ಮತ್ತು ಪುರಿ ಕಾಳು ಪ್ರತ್ಯೇಕಿಸಲಾಗುತ್ತದೆ.

ಬಳಿಕ 2 ಹಂತದಲ್ಲಿ ಪುರಿ ಜರಡಿ ಮಾಡಿ, ಪ್ಲಾಸ್ಟಿಕ್‌ ಪೊಟ್ಟಣ ಕಟ್ಟಲಾಗುತ್ತದೆ. ಈ ಕೆಲಸಕ್ಕೆ ಕುಟುಂಬದ ಮಹಿಳೆಯರು ಕೈ ಜೋಡಿಸುತ್ತಾರೆ. ಮಾರುಕಟ್ಟೆಯಲ್ಲಿ 1 ಲೀಟರ್‌ ಪುರಿಗೆ ₹ 20 ದರವಿದೆ. ಶಿವರಾತ್ರಿ ಹಿಂದಿನ ದಿನ ಪುರಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ.

ಪ್ರಸಾದವಾಗಿ ಸ್ವೀಕಾರ: ಶಿವರಾತ್ರಿ ದಿನ ಜಾಗರಣೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಹಬ್ಬದಂದು ರಾತ್ರಿಯಿಡೀ ಶಿವನಾಮ ಸ್ಮರಣೆಯಲ್ಲಿ ಜಾಗರಣೆ ಮಾಡುವುದು ಮತ್ತೊಂದು ವಿಶೇಷ. ಶಿವ ದೇವಾಲಯಗಳಲ್ಲಿ ಬಿಲ್ವ ಪತ್ರೆ ಅರ್ಚನೆಯು ಪ್ರಮುಖವಾದುದು.

ಗ್ರಾಮೀಣ ಭಾಗದಲ್ಲಿ ಶಿವನಿಗೆ ನೈವೇದ್ಯವಾಗಿ ಸಾಮೆ ಅಥವಾ ರಾಗಿ ಅರಳಿಟ್ಟು ಇಡುವುದು ಹಿಂದಿನಿಂದ ನಡೆದುಕೊಂಡು ಪದ್ಧತಿ. ಹುರಿದ ಸಾಮೆ, ಜೋಳ, ಭತ್ತದ ಕಾಳುಗಳು ಹಾಲಿನಂತೆ ಬೆಳ್ಳಗೆ, ಹೂವಿನಂತೆ ಹಗುರವಾಗಿರುತ್ತವೆ. ಈ ಕಾಳುಗಳನ್ನು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಹಾಕಿ ಉಂಡೆ ಕಟ್ಟಿ ನೈವೇದ್ಯವಾಗಿ ಇಟ್ಟು ನಂತರ ಪ್ರಸಾದವಾಗಿ ಸ್ವೀಕರಿಸುತ್ತಾರೆ.

ನೈವೇದ್ಯ ಸ್ವೀಕಾರಕ್ಕೂ ಮುನ್ನ ಹಕ್ಕಿಗಳಿಗೆ ಒಂದು ಎಡೆ ಮೀಸಲಿಡಲಾಗುತ್ತದೆ. ಭಕ್ತರು ನೈವೇದ್ಯವಾಗಿ ಏನು ಇಟ್ಟರೂ ವಿಷಕಂಠ ಶಿವ ಪ್ರೀತಿಯಿಂದ ಸ್ವೀಕರಿಸುತ್ತಾನೆ ಎಂದು ಆಸ್ತಿಕರು ನಂಬಿಕೊಂಡು ಬಂದಿದ್ದಾರೆ. ನಾಗರೀಕತೆ ಬೆಳೆದಂತೆ ಹಬ್ಬದ ಆಚರಣೆ ಕೂಡ ಬದಲಾಗುತ್ತಿದೆ. ಧಾನ್ಯ ಹುರಿಯಲು ಯಂತ್ರೋಪಕರಣ ಬಳಸುತ್ತಿರುವುದರಿಂದ ಸಾಂಪ್ರದಾಯಿಕ ಪದ್ಧತಿಯಲ್ಲಿ ಪುರಿ ಹುರಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.