ಕೋಲಾರ: ನಗರದ ಹೊರವಲಯದ ಅಂತರಗಂಗೆ ಬೆಟ್ಟದಿಂದ ಆಕಸ್ಮಿಕವಾಗಿ ಶಹಿನ್ಷಾ ನಗರ ವಸತಿ ಪ್ರದೇಶಕ್ಕೆ ಬಂದ ಚಿಪ್ಪು ಹಂದಿಯನ್ನು (ಪಂಗೋಲಿಯನ್) ಕಿಡಿಗೇಡಿಗಳು ಹೊಡೆದು ಕೊಂದಿರುವ ಘಟನೆ ಶುಕ್ರವಾರ ನಡೆದಿದೆ.
ನಗರದ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಭಾರಿ ಗಾತ್ರದ ಚಿಪ್ಪು ಹಂದಿಯು ದಾರಿ ತಪ್ಪಿ ರಾಜಕಾಲುವೆಯಲ್ಲಿ ಮಳೆ ನೀರಿನ ಜತೆ ಅಂತರಗಂಗೆ ಬೆಟ್ಟದ ಬಳಿಯ ಶಹಿನ್ಷಾ ನಗರಕ್ಕೆ ಬಂದಿತ್ತು. ಬಡಾವಣೆಯಲ್ಲಿ ಚಿಪ್ಪು ಹಂದಿಯನ್ನು ನೋಡಿದ ಯುವಕರ ಗುಂಪು ಕಬ್ಬಿಣ ಸಲಾಕೆಯಿಂದ ಹೊಡೆದು ಕೊಂದಿದೆ.
ನಂತರ ಮೃತ ಚಿಪ್ಪು ಹಂದಿಯನ್ನು ಕಬ್ಬಿಣದ ಸಲಾಕೆಗೆ ಸಿಕ್ಕಿಸಿಕೊಂಡು ಬಡಾವಣೆಯಲ್ಲಿ ಮೆರವಣಿಗೆ ಮಾಡಿ ವಿಕೃತಿ ಮೆರೆದಿದೆ. ಇದಕ್ಕೆ ಸಂಬಂಧಪಟ್ಟ ದೃಶ್ಯಾವಳಿ ತುಣುಕುಗಳು ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿಯು ಚಿಪ್ಪು ಹಂದಿ ಕೊಂದಿರುವ ಕಿಡಿಗೇಡಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.