ಕೋಲಾರ: ಪಾಲಾರ್ ನದಿ ಮೂಲದ ದೊಡ್ಡಕೆರೆಯಾದ ಸೋಮಾಂಬುಧಿ ಅಗ್ರಹಾರ ಕೆರೆಯನ್ನು ಪ್ರವಾಸಿ ತಾಣವಾಗಿಸಿ, ಕೋಡಿ ಪಕ್ಕದಲ್ಲಿ ಸುಂದರ ಉದ್ಯಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ತಾಲ್ಲೂಕಿನ ಸೋಮಂಬುಧಿ ಅಗ್ರಹಾರ ಕೆರೆಗೆ ಭಾನುವಾರ ಭಾಗಿನ ಅರ್ಪಿಸಿದ ನಂತರ ಮಾತನಾಡಿದರು.
ನೀರು ಸಂಗ್ರಹದಲ್ಲಿ ಜಿಲ್ಲೆಯ ದೊಡ್ಡ ಕೆರೆ ಹಾಗೂ ಸುಂದರ ಕೋಡಿ ಹೊಂದಿರುವ ಈ ಕೆರೆ ವೀಕ್ಷಣೆಗೆ ವಿವಿಧೆಡೆಯಿಂದ ಜನರು ಬರುತ್ತಿದ್ದಾರೆ. ಅರಣ್ಯ, ತೋಟಗಾರಿಕಾ ಇಲಾಖೆ ಸಹಕಾರ ಪಡೆದು ಇಲ್ಲಿ ಉದ್ಯಾನ ನಿರ್ಮಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಜಿಂಕೆ ಹಾಗೂ ನವಿಲು ಹೇರಳವಾಗಿವೆ. ಕೆರೆ ಪಕ್ಕದಲ್ಲೆ ಅರಣ್ಯವೂ ಇರುವುದರಿಂದ ಇಲ್ಲಿ ತಂದು ಬಿಟ್ಟು, ಪ್ರವಾಸಿ ತಾಣವಾಗಿಸುವುದಾಗಿ ತಿಳಿಸಿದರು.
ಮೀನುಗಾರಿಕೆಗೆ ಹೇರಳ ಅವಕಾಶಗಳಿವೆ. ಮೀನುಗಾರಿಕೆ ಇಲಾಖೆಗೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ. ಕೆರೆಗಳ ಪುನಶ್ಚೇತನಕ್ಕೆ ಸರ್ಕಾರದ ಜತೆ ರೈತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ರಮೇಶ್ಕುಮಾರ್, ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಸ್ಎಫ್ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಬ್ಯಾಟಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.