ADVERTISEMENT

ಸಿಎಂ ಕುರ್ಚಿ ಅಲುಗಾಡಿದಾಗಲೆಲ್ಲಾ ಜಾತಿಗಣತಿ

ಜಾತಿಗಣತಿ ನಡೆಸಲು ರಾಜ್ಯಕ್ಕೆ ಅಧಿಕಾರ ಇಲ್ಲ: ಸಿದ್ದರಾಮಯ್ಯ ವಿರುದ್ಧ ಸಂಸದ ಪಿ.ಸಿ. ಮೋಹನ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:47 IST
Last Updated 9 ಜುಲೈ 2025, 2:47 IST
ಕೋಲಾರದಲ್ಲಿ ಮಂಗಳವಾರ ಆಯೋಜಿಸಿದ್ದ ಜಾತಿಗಣತಿ ಹಿನ್ನೆಲೆ-ಮುನ್ನೆಲೆ ಪೂರ್ವಭಾವಿ ಸಭೆಯನ್ನು ಸಂಸದ ಪಿ.ಸಿ.ಮೋಹನ್‌ ಉದ್ಘಾಟಿಸಿದರು. ನೆ.ಲ.ನರೇಂದ್ರಬಾಬು, ಎಂ.ಡಿ.ಲಕ್ಷ್ಮಿನಾರಾಯಣ, ಓಂಶಕ್ತಿ ಚಲಪತಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಮಂಗಳವಾರ ಆಯೋಜಿಸಿದ್ದ ಜಾತಿಗಣತಿ ಹಿನ್ನೆಲೆ-ಮುನ್ನೆಲೆ ಪೂರ್ವಭಾವಿ ಸಭೆಯನ್ನು ಸಂಸದ ಪಿ.ಸಿ.ಮೋಹನ್‌ ಉದ್ಘಾಟಿಸಿದರು. ನೆ.ಲ.ನರೇಂದ್ರಬಾಬು, ಎಂ.ಡಿ.ಲಕ್ಷ್ಮಿನಾರಾಯಣ, ಓಂಶಕ್ತಿ ಚಲಪತಿ ಪಾಲ್ಗೊಂಡಿದ್ದರು   

ಕೋಲಾರ: ‘ಹಿಂದುಳಿದ ವರ್ಗದವರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಜಾತಿ ಸಮೀಕ್ಷೆ ಅಗತ್ಯವಿದೆ. ಈ ನಿಟ್ಟಿನಲ್ಲಿ 2027ಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲಿದ್ದು, ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಅಧಿಕಾರ ಇಲ್ಲ’ ಎಂದು ಸಂಸದ ಪಿ.ಸಿ.ಮೋಹನ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಾತಿಗಣತಿ ಹಿನ್ನೆಲೆ-ಮುನ್ನೆಲೆ’ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಚರ್ಚೆ ನಡೆದಾಗ ಅಥವಾ ನ್ಯಾಯಾಲಯಕ್ಕೆ ಹೋದಾಗ ಜಾತಿಗಳ ದತ್ತಾಂಶ ಬೇಕು ಎಂದು ಕೇಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೊಂದರೆ ಬಂದಾಗಲೆಲ್ಲಾ,‌ ಕುರ್ಚಿ ಅಲುಗಾಡಿದಾಗಲೆಲ್ಲಾ ಜಾತಿಗಣತಿ ನೆನಪಿಗೆ ಬರುತ್ತದೆ. ಆದರೆ, ರಾಹುಲ್‌ ಗಾಂಧಿ ಹಾಗೂ ರಣದೀಪ್‌ ಸಿಂಗ್ ಸುರ್ಜೇವಾಲಾ ಬೇಡವೆಂದಿದ್ದಕ್ಕೆ ₹160 ಕೋಟಿ ವೆಚ್ಚದ ವರದಿಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಈಗ ಮತ್ತೆ ಕುರ್ಚಿ ಉಳಿಸಿಕೊಳ್ಳಲು ₹300 ಕೋಟಿ ವೆಚ್ಚದಲ್ಲಿ ಮತ್ತೊಮ್ಮೆ ಸಮೀಕ್ಷೆಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುತ್ತಿರುವಾಗ ರಾಜ್ಯದಲ್ಲಿ ನಡೆಸುವುದು ಅಗತ್ಯವಿಲ್ಲ, ಅಧಿಕಾರವೂ ಇಲ್ಲ’ ಎಂದರು.

‘ಸಮೀಕ್ಷೆ ಸಂಬಂಧ ಮೊದಲ ಅವಧಿಯ ಮುಖ್ಯಮಂತ್ರಿ ಆಗಿದ್ದಾಗಲೇ ಕಾಂತರಾಜ ವರದಿ ಬಂತು. ಆಗ ಜಾರಿ ಮಾಡಲಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಕುರ್ಚಿ ಅಲುಗಾಡಲು ಶುರುವಾಯಿತು. ಡಿ.ಕೆ.ಶಿವಕುಮಾರ್‌ ಕೂಡ ರೇಸ್‌ನಲ್ಲಿದ್ದಾರೆ. ಹೀಗಾಗಿ, ಜಯಪ್ರಕಾಶ್‌ ಹೆಗಡೆ ನೇತೃತ್ವದ ವರದಿ ಚರ್ಚೆಗೆ ಬಂತು’ ಎಂದು ಹೇಳಿದರು.

ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿ, ‘ಸ್ವಾತಂತ್ರ್ಯ ಬಂದು 78 ವರ್ಷ ಆಗಿದ್ದರೂ ಹಿಂದುಳಿದ ವರ್ಗಗಳ ಸಣ್ಣ ಜಾತಿಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳಿಂದ ವಂಚಿತವಾಗಿವೆ. ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಶ್ರಮದ ಫಲವಾಗಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ನ್ಯಾಯ ಹಾಗೂ ಮೀಸಲಾತಿ ಲಭಿಸಿತು. ಆದರೆ, ಹಿಂದುಳಿದ ವರ್ಗದವರಿಗೆ ಏನೂ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

‘₹160 ಕೋಟಿ ವೆಚ್ಚದಲ್ಲಿ ತಯಾರಿಸಿದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರ ಚರ್ಚೆಗೆ ಇಡಲಿಲ್ಲ.‌ ಬದಲಾಗಿ ದಾರಿ ತಪ್ಪಿಸುವ ಕೆಲಸ ಮಾಡಿದರು. ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಇನ್ನು ಮೋಸಕ್ಕೆ ಒಳಗಾಗಬಾರದು’ ಎಂದರು.

‘ಈಗ‌ ಮೋದಿ ಸರ್ಕಾರ ಜಾತಿಗಣತಿ ನಡೆಸಲಿದೆ. ಸಣ್ಣ ಸಮಾಜಗಳಿಗೆ ಅವಕಾಶ ಸಿಗಬೇಕಿದೆ. ಹಿಂದುಳಿದ ವರ್ಗ ಬರೀ ವೋಟ್ ಬ್ಯಾಂಕ್ ಆಗಬಾರದು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು.

ಮುಖಂಡರಾದ ಗೋವಿಂದರಾಜು, ಸೋಮಶೇಖರ್, ಎಸ್.ಹರೀಶ್, ರಾಮಲಿಂಗಪ್ಪ, ಅಶ್ವಿನಿ ಶೇಖರ್, ಬಿ.ವಿ.ಮಹೇಶ್, ಬಾಲಕೃಷ್ಣಪ್ಪ, ಆಂಜನೇಯ ಗೌಡ, ನಾಗರಾಜ್, ಬಾಲಾಜಿ, ರಾಮಕೃಷ್ಣಪ್ಪ, ನಾರಾಯಣ, ವೆಂಕಟೇಶ್ ಇದ್ದರು‌.

ಜಾತಿಗಣತಿಗೆ ಮೋದಿ ಬರಬೇಕಾಯಿತು

‘1931ರಲ್ಲಿ ಜಾತಿವಾರು ಸಮೀಕ್ಷೆ ನಡೆದಿತ್ತು. ಈಗ 94 ವರ್ಷಗಳ ನಂತರ ಜಾತಿಗಣತಿ ಸಮೀಕ್ಷೆ ನಡೆಯಲಿದೆ. ಈ ಸಂಬಂಧ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೀರ್ಮಾನ ಕೈಗೊಂಡಿದೆ. 10 ವರ್ಷಗಳಿಗೊಮ್ಮೆ ನಡೆಯಬೇಕಿತ್ತು. ಸ್ವಾತಂತ್ರ್ಯ ಬಂದು 78 ವರ್ಷ ಆಗಿದ್ದು ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಈ ಬಗ್ಗೆ ಚಿಂತನೆಯನ್ನೂ ಮಾಡಲಿಲ್ಲ. ಅದಕ್ಕೂ ಮೋದಿ ಸರ್ಕಾರವೇ ಬರಬೇಕಾಯಿತು’ ಎಂದು ಪಿ.ಸಿ.ಮೋಹನ್‌ ಹೇಳಿದರು. ‘ಕಾಂಗ್ರೆಸ್‌ ಸರ್ಕಾರ ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿದೆ. ಕಾಂಗ್ರೆಸ್‌ನವರು ಯಾವತ್ತೂ ಹಿಂದುಳಿದ ವರ್ಗದವರ ಪರ ಇಲ್ಲ. ನೆಹರೂ ಕಾಲದಿಂದ ಈವರೆಗೆ ಸಮೀಕ್ಷೆ ನಡೆಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.