ADVERTISEMENT

ಗುರಿ ಇದ್ದರೆ ಸಾಧನೆ ಸುಲಭ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 13:44 IST
Last Updated 8 ಫೆಬ್ರುವರಿ 2020, 13:44 IST
ಕೋಲಾರದ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ವಿಶೇಷ ಕಾರ್ಯಾಗಾರದಲ್ಲಿ ಕೆಎಎಸ್ ಅಧಿಕಾರಿ ನಜೀಯಾ ಸುಲ್ತಾನಾ ಮಾತನಾಡಿದರು.
ಕೋಲಾರದ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ವಿಶೇಷ ಕಾರ್ಯಾಗಾರದಲ್ಲಿ ಕೆಎಎಸ್ ಅಧಿಕಾರಿ ನಜೀಯಾ ಸುಲ್ತಾನಾ ಮಾತನಾಡಿದರು.   

ಕೋಲಾರ: ‘ಸೂಕ್ತ ಮಾರ್ಗ ದರ್ಶನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ’ ಎಂದು ಕೆಎಎಸ್ ಅಧಿಕಾರಿ ನಾಜಿಯಾ ಸುಲ್ತಾನಾ ತಿಳಿಸಿದರು.

ನಗರದ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಜೀವನದಲ್ಲಿ ಗುರಿ ಇದ್ದರೆ ಸಾಧನೆ ಮಾಡಲು ಕಷ್ಟವಾಗುವುದಿಲ್ಲ. ಭವಿಷ್ಯದ ಕನಸು ಕಾಣುವ ಜತೆಗೆ ನನಸು ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

‘ನಾನು ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡುತ್ತೇನೆ ಎಂದುಕೊಳ್ಳುವ ಬದಲು ನಾನು ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಬಲ್ಲೆ ಎಂದು ಕೊಳ್ಳುವುದು ಸೂಕ್ತ. ಹಾಗಾಗಿ ಸ್ಪರ್ಧಾರ್ಥಿಗಳಿಗೆ ಆತ್ಮವಿಶ್ವಾಸ ಇರಬೇಕೇ ಹೊರತು ಅತಿಯಾದ ಆತ್ಮವಿಶ್ವಾಸ ಒಳಿತಲ್ಲ’ ಎಂದು ಹೇಳಿದರು.

ADVERTISEMENT

‘ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉರ್ದು ಭಾಷೆಯಲ್ಲಿ ಪಡೆದೆ. ಬಿ.ಕಾಂ ಪದವಿಯನ್ನು ಮುಗಿಸಿದ ನಂತರ ಕೆಎಎಸ್ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಿದೆ. ಕನ್ನಡದಲ್ಲೇ ಕೆಎಎಸ್ ಪರೀಕ್ಷೆ ಎದುರಿಸಿದೆ. ಸ್ಪರ್ಧಾರ್ಥಿಗಳು ಕೇವಲ ಓದುವುದು ಮಾತ್ರವೇ ಅಲ್ಲದೆ ಇತರೆ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

‘ಸಮಾಜಕ್ಕೆ ಸೇವೆ ಮಾಡುವ ಅವಕಾಶ ಸಿಕ್ಕಾಗ ಕೆಲಸ ಬಡವರಿಗೆ ಅನುಕೂಲವಾಗುವಂತಿರಬೇಕು. ಸಮಾಜದಲ್ಲಿ ಗೌರವ ಸಂಪಾದಿಸಲು ಸಾಧ್ಯ. ಹಿಂದೆ ಜಿಲ್ಲೆಯ ಜಿಲ್ಲಾಧಿಕಾರಿ ಡಿ.ಕೆ.ರವಿ ಇದಕ್ಕೆ ಸಾಕ್ಷಿ. ಅವರ ಪ್ರೇರಣೆಯಿಂದಲೇ ನಾನು ಕೆಎಎಸ್ ಅಧಿಕಾರಿಯಾಗಿದ್ದೇನೆ’ ಎಂದು ಹೇಳಿದರು.

ವಿವೇಕ್ ಇನ್ಫೋಟೆಕ್‌ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ ಕುಮಾರ್ ಮಾತನಾಡಿ, ‘ಹಿಂದೆ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಜಿಲ್ಲೆಯ ೮ ಮಂದಿ ಆಯ್ಕೆಯಾಗಿದ್ದಾರೆ. ಇದೀಗ ನಡೆಯುತ್ತಿರುವ ಪರೀಕ್ಷೆಯಲ್ಲಿ ಕನಿಷ್ಟ ೧೫ ಮಂದಿಯಾದರೂ ಅಧಿಕಾರಿಗಳಾಗಿ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆಯಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ, ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಖೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.