ಕೆಜಿಎಫ್: ತಾಯಿ ಮತ್ತು ಮಗು ಸಬಲರಾಗಲುಅವರಿಗೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡುವುದು ಎಲ್ಲರ ಕರ್ತವ್ಯ. ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ದಯಾನಂದ ವಿ. ಹಿರೇಮಠ ಹೇಳಿದರು.
ರಾಬರ್ಟಸನ್ಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರೂ ಪೌಷ್ಟಿಕ ಆಹಾರ ಪಡೆಯಲು ಅರ್ಹರು. ಅದನ್ನು ನೀಡುವುದು ಸರ್ಕಾರದ ಹೊಣೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳು ಸಿಗುತ್ತದೆ. ಈ ಬಗ್ಗೆ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಅರ್ಹರು ಇದರ ಉಪಯೋಗ ಪಡೆಯಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್, ‘ಜಂಕ್ ಆಹಾರವನ್ನು ಸೇವಿಸುವುದು ಅಪಾಯಕಾರಿ. ಅದು ನಮ್ಮ ದೇಶಿ ಜೀವನ ಶೈಲಿಗೆ ಒಗ್ಗುವುದಿಲ್ಲ. ಅದರಲ್ಲಿ ಯಾವುದೇ ರೀತಿ ಪೌಷ್ಠಿಕಾಂಶ ಇರುವುದಿಲ್ಲ. ರಾಗಿ, ಮನೆಯ ಕೈತೋಟದಲ್ಲಿ ಬೆಳೆದ ತರಕಾರಿ ಮತ್ತಿತರ ತಾಜಾ ಆಹಾರವನ್ನು ಸೇವಿಸುವುದರಿಂದ ಅಗತ್ಯ ಪೌಷ್ಠಿಕಾಂಶ ಸಿಗುತ್ತದೆ. ರಾಸಾಯನಿಕಗಳನ್ನು ಬಳಸಿ ಬೆಳೆದ ತರಕಾರಿ ಮತ್ತು ಬೆಳೆ ಕೂಡ ಅಪಾಯಕಾರಿ. ಮೊಟ್ಟೆ ತಿಂದರೆ ಹುಟ್ಟುವ ಮಗುವಿಗೆ ತಲೆಯಲ್ಲಿ ಕೂದಲು ಇರುವುದಿಲ್ಲ ಎಂಬ ಭಾವನೆ ಗ್ರಾಮೀಣ ಭಾಗದಲ್ಲಿ ಇದೆ. ಇದು ಸುಳ್ಳು’ ಎಂದರು.
ನ್ಯಾಯಾಧೀಶರಾದ ಡಿ. ರೂಪ, ‘ಗೋಡಂಬಿ, ಬಾದಾಮಿ, ಪಿಷ್ಟ ಮೊದಲಾದ ಬೆಲೆಬಾಳುವ ಪದಾರ್ಥಗಳನ್ನು ನೀಡಿದರೆ ಮಗು ಆರೋಗ್ಯವಾಗಿರುತ್ತದೆ ಎಂಬುದು ಸುಳ್ಳು. ನುಗ್ಗೆಕಾಯಿ, ಸೊಪ್ಪು, ತಾಜಾ ತರಕಾರಿ ಮೊದಲಾದವುಗಳಲ್ಲಿ ಸಿಗುವ ಪೌಷ್ಠಿಕಾಂಶ ಬೇರೆ ಆಹಾರದಲ್ಲಿ ಸಿಗುವುದಿಲ್ಲ’ ಎಂದು ಹೇಳಿದರು.
ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ನಾಗರತ್ನಮ್ಮ ಸೌಲಭ್ಯಗಳ ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಇದ್ದರು. ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಗೋಪಾಲ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.