ADVERTISEMENT

ಬಂಗಾರಪೇಟೆ| ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ: ಸಿಬ್ಬಂದಿ ನಡುವೆ ಕಿತ್ತಾಟ ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:09 IST
Last Updated 24 ಸೆಪ್ಟೆಂಬರ್ 2025, 7:09 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ರಾತ್ರಿ ಸಿಬ್ಬಂದಿ ಇಲ್ಲದೆ ಬೀಗ ಹಾಕಿರುವುದು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ರಾತ್ರಿ ಸಿಬ್ಬಂದಿ ಇಲ್ಲದೆ ಬೀಗ ಹಾಕಿರುವುದು   

ಬಂಗಾರಪೇಟೆ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವೈದ್ಯರಿಲ್ಲದೆ ರಾತ್ರಿ ವೇಳೆ ಬೀಗ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ. 

ಈ ವಿಚಾರವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರವು ವೈದ್ಯರ ನೇಮಕಾತಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಸೇವೆ ಸಲ್ಲಿಸಲು ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ. 

ತಾಲ್ಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಹಗಲು ಹೊತ್ತಿನಲ್ಲಿ ಮಾತ್ರವೇ ಕಾರ್ಯ ನಿರ್ವಹಿಸುತ್ತಿದೆ. ರಾತ್ರಿ ಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಬೀಗ ಹಾಕಲಾಗುತ್ತಿದೆ. ಇದರಿಂದ ತುರ್ತು ಚಿಕಿತ್ಸೆ ಮತ್ತು ಅನಾರೋಗ್ಯಕ್ಕೆ ಸಿಲುಕಿದವರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಹಾವು ಕಡಿತ, ಅಪಘಾತ ಸೇರಿದಂತೆ ಇನ್ನಿತರ ತುರ್ತು ಆರೋಗ್ಯ ಚಿಕಿತ್ಸೆಗೆ ಸ್ಥಳೀಯರು ಪರದಾಡುವಂತಾಗಿದೆ. ಕೆಲವು ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಮೃತಪಟ್ಟಿರುವ ಘಟನೆಗಳು ವರದಿಯಾಗಿದೆ. 

ADVERTISEMENT

ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಕಲಾವತಿ ಹಾಗೂ ವಾಹಿದ್ ಪಾಷಾ ನಡುವಿನ ಜಗಳದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಲಾವತಿ ಏಕಾಏಕಿ ಕೆಲಸಕ್ಕೆ ಬಾರದೆ ಆಸ್ಪತ್ರೆಗೆ ಬೀಗ ಹಾಕಿ ತೆರಳಿದ್ದಾರೆ. ಇದರಿಂದ ಸೋಮವಾರ ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಇಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಸರ್ಕಾರವು ಕೂಡಲೇ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ. 

ಆರೋಗ್ಯ ಇಲಾಖೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಡವರ ಸೇವೆಗೆ ಅವಕಾಶ ಮಾಡಿ ಕೊಟ್ಟರೆ, ಕೆಲವರ ಸ್ವಪ್ರತಿಷ್ಠೆ ಹಾಗೂ ಗುಂಪುಗಾರಿಕೆಯಿಂದ ಸಾರ್ವಜನಕ ಆಸ್ಪತ್ರೆಗೆ ಬೀಗ ಹಾಕುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಸಮಸ್ಯೆ ಪರಿಹರಿಸಬೇಕು ಎಂದು ಬೂದಿಕೋಟೆ ನಿವಾಸಿ ಭಾನುಪ್ರಕಾಶ್ ಒತ್ತಾಯಿಸಿದರು. 

 ರಾತ್ರಿ ವೇಳೆ ಸಿಬ್ಬಂದಿ ಮತ್ತು ರೋಗಿಗಳು ಇಲ್ಲದೆ ಬಿಕೊ ಎನ್ನುತ್ತಿರುವ  ಪ್ರಾಥಮಿಕ ಆರೋಗ್ಯ ಕೇಂದ್ರ
ಗರ್ಭಿಣಿಯರು ಮಕ್ಕಳು ಹಿರಿಯ ನಾಗರಿಕರು ತುರ್ತು ವೈದ್ಯಕೀಯ ಸಮಯದಲ್ಲಿ ಪಟ್ಟಣದ ಆಸ್ಪತ್ರೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ
ರಮೇಶ್ ಬೂದಿಕೋಟೆ
24 ಗಂಟೆ ರೋಗಿಗಳ ಸೇವೆಗೆ ಲಭ್ಯವಿರಬೇಕಿದ್ದ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಆಸ್ಪತ್ರೆ ಸಿಬ್ಬಂದಿ ನಡುವೆ ನಡೆದ ಜಗಳದ ಹಿನ್ನೆಲೆಯಲ್ಲಿ ಅನ್ನೋದು ಮತ್ತೊಂದು ವಿಷಾದಕರ
ದೊಡ್ಡಪ್ಪ ಮಾಜಿ ಜಿ.ಪಂ ಸದಸ್ಯ
ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜರೂರಾಗಿ ಸಿಬ್ಬಂದಿ ನೇಮಕ ಮಾಡಿ 24 ಗಂಟೆ ರೋಗಿಗಳ ಸೇವೆಗೆ ಅವಕಾಶ ಕಲ್ಪಿಸಲಾಗುವುದು. 
ಡಾ. ಸುನೀಲ್ ತಾಲ್ಲೂಕು ಆರೋಗ್ಯ ಅಧಿಕಾರಿ

‘ಸಿಬ್ಬಂದಿ ಕೊರತೆ’ ಇತ್ತೀಚೆಗೆ ಸಿಬ್ಬಂದಿ ನಡುವಿನ ಕಿತ್ತಾಟದಿಂದ ಸದ್ದು ಮಾಡಿದ್ದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಇದೀಗ ರಾತ್ರಿ ವೇಳೆ ಬೀಗ ಹಾಕಲಾಗಿದೆ. ಇದು ಆರೋಗ್ಯ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಇತ್ತೀಚೆಗೆ ನರ್ಸ್ ಕಲಾವತಿ ಮತ್ತು ಕಣ್ಣಿನ ವೈದ್ಯ ವಾಹಿದ್ ಪಾಷಾ ಮಧ್ಯೆ ಜಗಳವಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಕಲಾವತಿ ಏಕಾಏಕಿ ಕೆಲಸ ಬಾರದೆ ಇರುವುದರಿಂದ ಸಿಬ್ಬಂದಿ ಕೊರತೆಯಾಗಿದೆ.  ನಾಗರಾಜ್ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.