ಮುಳಬಾಗಿಲು: ಕೊರೊನಾ ಸೋಂಕು ಕೆಲವರನ್ನು ನೇರವಾಗಿ ಹಿಂಸಿಸಿದರೆ ಪರೋಕ್ಷವಾಗಿ ಎಲ್ಲ ರಂಗಗಳ ಜನರನ್ನು ನಿಸ್ತೇಜರನ್ನಾಗಿ ಮಾಡಿ ಬೀದಿಗೆ ತಳ್ಳುತ್ತಿದೆ.
ಕಳೆದ ನಾಲ್ಕು ತಿಂಗಳಿಂದ ನಗರದ 12 ಮತ್ತು ಗ್ರಾಮೀಣ ಪ್ರದೇಶದ 5 ಮುದ್ರಣಾಲಯಗಳು ಸ್ಥಗಿತಗೊಂಡಿವೆ. ಅವುಗಳನ್ನು ನಂಬಿ ಬದುಕುತ್ತಿದ್ದ ಮಾಲೀಕರು ಹಾಗೂ ನೂರಕ್ಕೂ ಹೆಚ್ಚು ಕಾರ್ಮಿಕರು ಅರ್ಥಿಕ ಸಂಕಷ್ಟದಿಂದ ತತ್ತರಿಸುವಂತಾಗಿದೆ.
ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಮುಂಜಿ, ಜಾತ್ರೆಗಳು ನಡೆಯುತ್ತವೆ. ಆಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಗಳನ್ನು ಮಾಡಿಸಲು ಮುದ್ರಣಾಯಗಳನ್ನು ಜನರು ಎಡತಾಕುತ್ತಿದ್ದರು. ಹಾಗೆಯೇ ಬಂಡಿದ್ಯಾವರ, ಜಾತ್ರೆಗಳ ಆಹ್ವಾನ ಪತ್ರಗಳ ಮುದ್ರಣ, ಕರಪತ್ರಗಳ ಮುದ್ರಣ ಹೀಗೆ ಬಿಡುವಿಲ್ಲದ ಕೆಲಸ ನಡೆಯುತ್ತಿತ್ತು.
ಕೊರೊನಾ ಕಾರಣ ಈ ಎಲ್ಲ ಕಾರ್ಯಗಳು ಸ್ಥಗಿತಗೊಂಡಿವೆ. ಹಗಲು, ರಾತ್ರಿ ಎನ್ನದೆ ಸದ್ದು ಮಾಡುತ್ತಿದ್ದ ಮುದ್ರಣ ಯಂತ್ರಗಳು ಸ್ತಬ್ಧವಾಗಿವೆ. ಮುದ್ರಣಾಲಯಗಳ ಮಾಲೀಕರು ಕೆಲಸವಿಲ್ಲದೆ ಮನೆಯಲ್ಲಿ ಕೂರಬೇಕಾಗಿದೆ.
ಪ್ರಿಂಟಿಂಗ್, ಬೈಡಿಂಗ್, ಥ್ರೆಡ್ಡಿಂಗ್, ಪ್ಯಾಕಿಂಗ್, ಡಿಟಿಪಿ, ಪುಟ ವಿನ್ಯಾಸ ಹೀಗೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸವಿಲ್ಲದೆ ಬೀದಿಪಾಲಾಗಿದ್ದಾರೆ.
ಸಾಮಾನ್ಯವಾಗಿ ಯುಗಾದಿ ನಂತರ ತಾಲ್ಲೂಕಿನಾದ್ಯಂತ ಜಾತ್ರೆಗಳು ನಡೆಯುತ್ತಿದ್ದವು. ಜಾತ್ರೆಗಳ ಅಂಗವಾಗಿ ಗ್ರಾಮಗಳಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ನಾಟಕದ ತಂಡಗಳು ಬಣ್ಣಬಣ್ಣದ ಬೃಹತ್ ಗಾತ್ರದ ಕರಪತ್ರಗಳನ್ನು ಅಚ್ಚು ಹಾಕಿಸುತ್ತಿದ್ದರು.
ಈಗ ಮುದ್ರಣಾಲಯಗಳಲ್ಲಿ ಕೆಲಸವಿಲ್ಲದೆ ಯಂತ್ರಗಳು ತುಕ್ಕು ಹಿಡಿಯತೊಡಗಿವೆ. ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್ ಮೊದಲಾದ ವೆಚ್ಚಗಳಿಗೆ ಹಣ ಹೊಂದಿಸಲಾರದೆ ಪರದಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.