ಬಂಗಾರಪೇಟೆ: ಈದ್ ಮಿಲಾದ್ ಆಚರಣೆ ವೇಳೆ ಪ್ಯಾಲೆಸ್ಟೀನ್ ಧ್ವಜ ಹಾರಾಟ ನಡೆಸಲಾಗಿದೆ ಎಂದು ಆರೋಪಿಸಿದ ಜೆಡಿಎಸ್ ಕಾರ್ಯಕರ್ತರು ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಲ್ಲದೆ, ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ದೇಶದ್ರೋಹಿಗಳನ್ನು ದೇಶದಿಂದ ಗಡೀಪಾರು ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಜಿಡಿಎಸ್ ತಾಲ್ಲೂಕು ಉಪಾಧ್ಯಕ್ಷ ಯಲ್ಲಪ್ಪ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದಲ್ಲಿ ಇರುವ ಜನರಿಗೆ ಅವರವರ ಹಬ್ಬಗಳನ್ನು ಆಚರಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಎಲ್ಲ ಧರ್ಮದವರೂ ಸಂಪ್ರದಾಯದ ಪ್ರಕಾರ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ, ಇತ್ತೀಚೆಗೆ ಪಟ್ಟಣದಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಕೆಲವು ಕಿಡಿಗೇಡಿಗಳು ಯಾರದ್ದೊ ಮಾತು ಕಟ್ಟಿಕೊಂಡು ದೇಶದ್ರೋಹದ ಕೃತ್ಯವೆಸಗಿದ್ದಾರೆ. ಅನ್ಯ ದೇಶದ ದ್ವಜವನ್ನು ಪ್ರದರ್ಶಿಸಿ, ದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಗಲ್ ಮುನಿಯಪ್ಪ ಮಾತನಾಡಿ, ಪ್ಯಾಲೆಸ್ಟೀನ್ ಬಾವುಟ ಹಾರಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಶಾಂತಿ ಸೌಹಾರ್ದತೆಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅನ್ಯ ದೇಶದ ಬಾವುಟ ಪ್ರದರ್ಶಿಸಿ, ಹೀನ ಕೃತ್ಯ ಮೆರೆದವರನ್ನು ಬಂಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿ.ವಿ. ಶ್ರೀನಿವಾಸಮೂರ್ತಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ಬಾಲಚಂದ್ರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ, ದೇವರಾಜ್, ಗುಟ್ಟಹಳ್ಳಿ ಮಂಜುನಾಥ, ಸತೀಶ್ ಗೌಡ, ನರೇಂದ್ರ ಬಾಬು, ಡಿ.ಕೆ.ಹಳ್ಳಿ ಬಾಬು, ಸುಮಿತ್ರಮ್ಮ, ತಮ್ಮೇನಹಳ್ಳಿ ಚಂದ್ರಪ್ಪ, ಬಾಸ್ಕರ್ ಗೌಡ, ಆಕಾಶ್, ಮೂರ್ತಿ, ರಾಜಣ್ಣ , ಪುರಂ ಸತೀಶ್ ಉಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.