ಕೋಲಾರ: ‘ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಕೌಶಲ ತರಬೇತಿ ಪಡೆದುಕೊಂಡಾಗ ಅವಕಾಶಗಳು ಉಡುಕಿಕೊಂಡು ಬರುತ್ತವೆ’ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಆರ್.ರಾಜು ತಿಳಿಸಿದರು.
ತಾಲ್ಲೂಕಿನ ಮಂಗಸಂದ್ರದ ಮಂಜುನಾಥ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ‘ಈಗ ಯಾರು ಬೇಕಾದರು ಉತ್ತಮ ಫಲಿತಾಂಶಗಳಿಸುತ್ತಾರೆ. ಆದರೆ ಕೌಶಲ ತರಬೇತಿ ಕೊರತೆಯಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಕರು ತರಗತಿಯಲ್ಲಿ ಕೌಶಲ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.
‘ಸಣ್ಣ ಕೈಗಾರಿಕೆಗಳಿಂದ ದೇಶದ ಪ್ರಗತಿ ಕಾಣಲು ಸಾಧ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜಿಡಿಪಿ ಬದಲಾವಣೆ ಕೈಗಾರಿಕೆಗಳ ಮೇಲೂ ಪರಿಣಾಮ ಬೀರುತ್ತಿವೆ, ಉತ್ಪಾದನೆಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ದೊರೆಯುತ್ತಿಲ್ಲ’ ಎಂದು ವಿಷಾದಿಸಿದರು.
‘ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು. ದೇಶದಲ್ಲಿ ಎಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆ ತರಬೇತಿ ಅಭ್ಯರ್ಥಿಗಳು ಮುಂದಾಗಬೇಕು, ಸರ್ಕಾರದ ಯೋಜನೆಗಳ ಪ್ರಯೋಜನೆ ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಮತ್ತಷ್ಟು ಮಂದಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.
ವಿಸ್ಟ್ರಾನ್ ಇನ್ಪೋಕಾಂ ಕಂಪನಿಯ ಆಡಳಿತಾಧಿಕಾರಿ ಬಿ.ಮಂಜುನಾಥ್ ಮಾತನಾಡಿ. ‘ಸ್ಪರ್ಧಾತ್ಮಕ ಯುಗದಲ್ಲಿ ಸ್ವತಂತ್ರವಾಗಿ ದುಡಿಯುವ ಮನಸ್ಥಿತಿಯನ್ನು ಬೆಳಸಿಕೊಂಡು ಯಾರ ಮೇಲೂ ಅವಲಂಭಿತರಾಗದೆ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.
‘ವೃತ್ತಿ ಕೋರ್ಸ್ಗಳಿಗೆ ಬಹುಗೇಗ ಉದ್ಯೋಗ ಸಿಗುತ್ತದೆ ಎಂಬುದು ನಂಬಿಕೆ. ಆದರೆ ವೃತ್ತಿ ಕೌಶಲ ತರಬೇತಿ ಇಲ್ಲದೆ ಸಾಕಷ್ಟು ಮಂದಿ ಅವಕಾಶ ವಂಚಿತರಾಗುತ್ತಿದ್ದಾರೆ, ಈ ಕೊರತೆಯನ್ನು ನಿಗಿಸಲು ಕೌಶಲ ತರಬೇತಿ ಕೇಂದ್ರದ ಸ್ಥಾಪನೆ ಅಗತ್ಯವಿದೆ’ ಎಂದರು.
ಪಶುಸಂಗೋಪನ ಇಲಾಖೆಯ ನಿವೃತ್ತ ಜಂಟಿ ನರ್ದೇಶಕ ಡಾ.ಆರ್.ಎಸ್.ರಾಜಾ ನಾಯಕ್, ಮಂಜುನಾಥ ಐಟಿಐ ಕಾಲೇಜಿನ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ, ಜಿಲ್ಲಾ ಕೈಗಾರಿಕಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಎನ್ ಶೇಷಾದ್ರಿಗೌಡ, ಜಿಲ್ಲಾ ಖಾಸಗಿ ಐಟಿಐ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥಗೌಡ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.