ಕೆಜಿಎಫ್: ಕ್ಯಾಸಂಬಳ್ಳಿ ಮಜರಾ ಗುಟ್ಟಹಳ್ಳಿ ಬಳಿ ಪಿಯು ಕಾಲೇಜಿಗೆ ಮಂಜೂರಾಗಿರುವ ಜಾಗವನ್ನು ಸರ್ವೆ ಇಲಾಖೆ ಅಧಿಕಾರಿಗಳು ಗುರುವಾರ ಸರ್ವೆ ನಡೆಸಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಕ್ಯಾಸಂಬಳ್ಳಿ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಪ್ರೌಢಶಾಲೆ ಹಂತದ ವಿದ್ಯಾಭ್ಯಾಸ ಮುಗಿಸುವ ವಿದ್ಯಾರ್ಥಿಗಳು ನಂತರದ ವಿದ್ಯಾಭ್ಯಾಸಕ್ಕೆ ದೂರದ ಊರುಗಳಿಗೆ ಹೋಗಬೇಕಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಸಂಬಳ್ಳಿಯಲ್ಲಿ ಪಿಯು ಕಾಲೇಜು ಪ್ರಾರಂಭ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. 2022ರಲ್ಲಿ ಕಾಲೇಜಿಗೆ ಮಜರಾ ಗುಟ್ಟಹಳ್ಳಿ ಬಳಿ ಸರ್ವೆ ನಂಬರ್ 146ರಲ್ಲಿ 7 ಎಕರೆ 3 ಗುಂಟೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಅದರ ಪಕ್ಕದಲ್ಲಿಯೇ ಇರುವ ಸರ್ವೆ ನಂಬರ್ 5ರಲ್ಲಿ ಐದು ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಜೊತೆಗೆ ಸರ್ವೆ ನಂಬರ್ 121ರಲ್ಲಿ ಸಹ ಶಾಲಾ ಶಿಕ್ಷಣ ಇಲಾಖೆಗೆ ಜಾಗ ಮಂಜೂರು ಮಾಡಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆ ಕೋರಿಕೆಯಂತೆ ಜಾಗದ ಸರ್ವೆ ನಡೆಸಿ ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ಕಾಲೇಜಿಗೆ ಮಂಜೂರಾದ ಸ್ಥಳದಲ್ಲಿ ಗ್ರಾಮ ಪಂಚಾಯಿತಿಯಿಂದ ಗೋಕುಂಟೆ ನಿರ್ಮಾಣ ಮಾಡಲಾಗಿದೆ. ಕಾಲೇಜು ಜಾಗದಲ್ಲಿ ನಿರ್ಮಾಣ ಮಾಡಲು ಹೇಗೆ ಅನುಮತಿ ನೀಡಲಾಯಿತು ಎಂದು ಸ್ಥಳದಲ್ಲಿದ್ದ ಮುಖಂಡ ಸೋಮಸುಂದರ ರೆಡ್ಡಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ತಾಲ್ಲೂಕು ಸರ್ವೆ ಅಧಿಕಾರಿ ಮೌಲಾಖಾನ್, ಪ್ರಾಂಶುಪಾಲ ಮಂಜುನಾಥ್, ಕ್ಯಾಸಂಬಳ್ಳಿ ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್, ಕಾರ್ಯದರ್ಶಿ ರೋಜಾ, ಶಾಲಾ ಶಿಕ್ಷಣ ಇಲಾಖೆ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.