ADVERTISEMENT

ಮುಳಬಾಗಿಲು: ಸರ್ವೆ ಬಳಿಕ ಸ್ತಬ್ಧಗೊಂಡ ರೈಲ್ವೆ ಯೋಜನೆ

ರೈಲು ಮಾರ್ಗಕ್ಕೆ ಗುರುತಿಸಲಾದ ಜಮೀನು ಮಾರುವಂತಿಲ್ಲ, ಅಭಿವೃದ್ಧಿ ಪಡಿಸುವಂತಿಲ್ಲ ಗೊಂದಲದಲ್ಲಿ ರೈತರು

ಜಿ.ವಿ.ಪುರುಷೋತ್ತಮರಾವ್
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
ಮುಳಬಾಗಿಲು ತಾಲ್ಲೂಕಿನ ಸೊನ್ನವಾಡಿ ಸರಹದ್ದಿನಿಂದ ನರಸೀಪುರದಿನ್ನೆ ಕಡೆಗೆ ರೈಲು ಮಾರ್ಗಕ್ಕಾಗಿ ಜಮೀನು ಗುರುತಿಸಿ ಕಲ್ಲು ನೆಡಲಾಗಿದೆ
ಮುಳಬಾಗಿಲು ತಾಲ್ಲೂಕಿನ ಸೊನ್ನವಾಡಿ ಸರಹದ್ದಿನಿಂದ ನರಸೀಪುರದಿನ್ನೆ ಕಡೆಗೆ ರೈಲು ಮಾರ್ಗಕ್ಕಾಗಿ ಜಮೀನು ಗುರುತಿಸಿ ಕಲ್ಲು ನೆಡಲಾಗಿದೆ   

ಮುಳಬಾಗಿಲು: ತಾಲ್ಲೂಕಿಗೆ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವಕ್ಕೆ ದಶಕಗಳೇ ಕಳೆದಿದೆ. ಯೋಜನೆಗೆ ಅಡಿಗಲ್ಲು ಹಾಕಲಾಗಿದೆ. ಆದರೆ ಸದ್ಯಕ್ಕೆ ರೈಲು ಬರುವ ಸೂಚನೆಗಳು ಮಾತ್ರ ಕಾಣುತ್ತಿಲ್ಲ.

ರೈಲು ಮಾರ್ಗಕ್ಕಾಗಿ 2016ರ ಆಗಸ್ಟ್‌ನಲ್ಲಿ 13 ಗ್ರಾಮಗಳಲ್ಲಿ 222 ಎಕರೆ ಜಮೀನನ್ನು ರೈಲ್ವೆ ಇಲಾಖೆ ಗುರುತಿಸಿತ್ತು. ಆನಂತರ ಭೂಸ್ವಾಧೀನಕ್ಕಾಗಿ ಕಂದಾಯ ಇಲಾಖೆ ಸಮೀಕ್ಷೆ ಮಾಡಿ ವರದಿ ಕಳುಹಿಸಿತ್ತು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡು ರೈಲು ಮಾರ್ಗ ನೆನೆಗುದ್ದಿಗೆ ಬಿದ್ದಿದೆ.

ಹನುಮನಹಳ್ಳಿ, ಕುರುಬರಹಳ್ಳಿ, ಅನಂತಪುರ, ಜಮ್ಮನಹಳ್ಳಿ, ಚಿಕ್ಕಮಾದೇನಹಳ್ಳಿ, ವಿರೂಪಾಕ್ಷಿ, ಗುಟ್ಟಹಳ್ಳಿ, ಮುಳಬಾಗಿಲು ಗ್ರಾಮ ಕುಮದೇನಹಳ್ಳಿ ತುರುಕರಹಳ್ಳಿ, ಇಂಡ್ಲಕೆರೆ, ಸೊನ್ನವಾಡಿ, ನರಸೀಪುರದಿನ್ನೆ ಗ್ರಾಮಗಳಲ್ಲಿ ಜಮೀನು ಸರ್ವೆ ಮಾಡಲಾಗಿದೆ. ಜಮೀನು ಮಾಲೀಕರಿಗೆ ಭೂಸ್ವಾಧೀನದ ಪರಿಹಾರವೂ ದೊರೆತಿಲ್ಲ. ಇತ್ತ ಜಮೀನು ಅಥವಾ ನಿವೇಶನವನ್ನು ಮಾರಾಟ ಮಾಡುವ ಹಾಗೂ ಇಲ್ಲ. ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಯಾರನ್ನು ಕೇಳಬೇಕು ಎಂದು ತಿಳಿಯದ ರೈತರು ಗೊಂದಲದಲ್ಲಿದ್ದಾರೆ.

ADVERTISEMENT

ಜಮೀನು ಸರ್ವೆ ಸಂದರ್ಭದಲ್ಲಿ ಮಾಲೀಕರು ತಮ್ಮ ಆಸ್ತಿ ನಷ್ಟದ ಲೆಕ್ಕಾಚಾರ ಹಾಕಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅಳಲು ತೋಡಿಕೊಂಡಿದ್ದರು. ತಮಗೆ ಸೇರಿದ ಪೂರ್ತಿ ಜಮೀನು ರೈಲ್ವೆ ಇಲಾಖೆಗೆ ಸೇರಬಹುದೆಂದು ಅತಂಕ ವ್ಯಕ್ತಪಡಿಸಿದ್ದರು. ತುರುಕರಹಳ್ಳಿ ಆರ್. ತಿಮ್ಮಯ್ಯ,ನರಸೀಪುರದಿನ್ನೆಯಮುನಿಯಪ್ಪ, ಕಿಟ್ಟಪ್ಪ, ನಾಗರಾಜು, ಶಂಕರಪ್ಪ, ನಾರಾಯಣಸ್ವಾಮಿ ಅವರು ಸಂಪೂರ್ಣ ಜಮೀನು ಸ್ವಾಧೀನಕ್ಕೆ ಒಳಪಡಲಿದ್ದು ಪರ್ಯಾಯ ವ್ಯವಸ್ಥೆ ಇಲ್ಲದೆ ತೊಂದರೆ ಆಗುತ್ತದೆ ಎಂದು ತಮ್ಮ ಆಳಲು ತೊಡಿಕೊಂಡಿದ್ದರು.

ಸರ್ವೆ ಮುಗಿದು ನಾಲ್ಕು ವರ್ಷವಾಗಿದೆ. ಜಮೀನು ಸರ್ವೆ ಮಾಡಿದ್ದರಿಂದ ಮಾಲೀಕರು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಅತ್ತ ರೈಲ್ವೆ ಇಲಾಖೆ ಪರಿಹಾರ ನೀಡುವ ಯಾವುದೇ ಭರವಸೆಯನ್ನು ನೀಡಿಲ್ಲ. ಸರ್ವೆಯಾಗಿರುವ ಜಮೀನನ್ನು ರೈಲ್ವೆ ಇಲಾಖೆಗೆ ನೀಡಲು ಮಾಲೀಕರು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಹೀಗಾಗಿ ಬೆಳೆ ಬೆಳೆಯಲೂ ಹಿಂದೇಟು ಹಾಕುತ್ತಿದ್ದಾರೆ.

ಕನಸು ಈಡೇರುವ ಲಕ್ಷಣಗಳಿಲ್ಲ
ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಎಂ.ವಿ. ಕೃಷ್ಣಪ್ಪ ರೈಲ್ವೆ ಸಚಿವರಾಗಿದ್ದರು. ಅವರಿಗೂ ತಮ್ಮ ಸ್ವಂತ ತಾಲ್ಲೂಕಿಗೆ ರೈಲು ಸಂಪರ್ಕ ಒದಗಿಸಲು ಸಾಧ್ಯವಾಗಲಿಲ್ಲ. ಸಂಸದ ಕೆ.ಎಚ್.ಮುನಿಯಪ್ಪ ಅವರ ಕಾಲದಲ್ಲೂ ಹೋರಾಟ ನಡೆದಿತ್ತು. ಆಗ ರೈಲು ಮಾರ್ಗದ ನಿರ್ಮಾಣ ಯೋಜನೆಗೆ ಸಮ್ಮತಿ ಸಿಕ್ಕಿತ್ತು. ಆದರೆ ಅದಕ್ಕೆ ಪೂರಕ ನೆರವು ಸಿಕ್ಕಿಲ್ಲ. ರೈಲು ಮಾರ್ಗ ನಿರ್ಮಾಣ ಸಾಧ್ಯವಾದರೆ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಮಾರುಕಟ್ಟೆ ಅಭಿವೃದ್ಧಿಗೂ ಸಹಕಾರಿ ಆಗುತ್ತದೆ ಆದರೆ ಕನಸು ಈಡೇರುವ ಸೂಚನೆಗಳಿಲ್ಲ ಎನ್ನುತ್ತಾರೆ ನಿವೃತ ಸಂಖ್ಯಾಶಾಸ್ತ್ರಧಿಕಾರಿ ಹಾಗೂ ರೈಲ್ವೆ ಯೋಜನೆಗೆ ಜಮೀನು ನೀಡಿರುವ ಎಸ್.ವಿ. ವೆಂಕಟಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.