ಬಂಗಾರಪೇಟೆ: ಸಾರ್ವಜನಿಕರ ಅನುಕೂಲಕ್ಕಾಗಿ ಸಂಜಯ್ಗಾಂಧಿ ಬಡಾವಣೆ ಬಳಿ ಪುರಸಭೆ ನಿರ್ಮಿಸಿರುವ ರಾಜೀವ್ ಗಾಂಧಿ ಸಮುದಾಯ ಭವನ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ಅಡ್ಡವಾಗಿದೆ.
ವಿಶೇಷವಾಗಿ ಕೊಳಚೆಪ್ರದೇಶದ ಜನರ ಅನುಕೂಲಕ್ಕೆ ಎಂದು ಸುಮಾರು ದಶಕದ ಹಿಂದೆ ಐಡಿಎಸ್ಎಂಟಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದ್ದು, ಅತಿ ಕಡಿಮೆ ಬಾಡಿಗೆಗೆ ಸಾರ್ವಜನಿಕರ ಕಾರ್ಯಕ್ರಮಗಳಿಗೆ ನೀಡುವ ಉದ್ದೇಶದಿಂದ ಭವನ ನಿರ್ಮಾಣವಾಗಿದ್ದು. ಆದರೆ, ಈಗ ಯಾವ ಕೆಲಸಕ್ಕೂ ಬಳಕೆಯಾಗದಂತಾಗಿದೆ.
ಪ್ರಸ್ತುತ ಭವನದ ಒಳಗೆ ಕಸ, ಅನುಪಯುಕ್ತ ವಸ್ತುಗಳು ತುಂಬಿದೆ. ಹೊರಗಿನ ಕಟ್ಟಡವನ್ನು ಗಿಡಗಂಟಿ, ಬಳ್ಳಿಗಳು ಆವರಿಸಿದೆ. ಭವನದ ಆವರಣದೆಲ್ಲಡೆ ಗಾಜು ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯಲಾಗಿದೆ. ಕೆಲ ಕಿಟಕಿ ಬಾಗಿಲು ಗಾಜುಗಳು ಹೊಡೆದು ಹೋಗಿವೆ. ಲಕ್ಷಗಟ್ಟಲೆ ವೆಚ್ಚದಲ್ಲಿ ಕಟ್ಟಿದ ಭವನ ಈಗ ಯಾವುದಕ್ಕೂ ಬಳಕೆ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಅಧಿಕಾರ ವಹಿಸಿಕೊಂಡು ಕೆಲವೇ ತಿಂಗಳಾಗಿದೆ. ಪುರಸಭೆ ಕಟ್ಟಡಗಳು ಎಲ್ಲಿಲ್ಲಿ ಖಾಲಿ ಇವೆ ಎಂದು ಕಂದಾಯ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇನೆ. ಸೋಮವಾರದ ಒಳಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.ಮೀನಾಕ್ಷಿ, ಪುರಸಭೆ ಮುಖ್ಯಾಧಿಕಾರಿ
ಕಟ್ಟಡ 2014ರಲ್ಲಿ ಉದ್ಘಾಟನೆಯಾಗಿದ್ದು, ಬಳಿಕ ಎರಡ್ಮೂರು ವರ್ಷ ತಾತ್ಕಾಲಿಕವಾಗಿ ಸಾರ್ವಜನಿಕ ಆಸ್ಪತ್ರೆಯಾಗಿ ಬಳಕೆಯಾಗಿತ್ತು. ಅಂದರೆ 2016-17ರಲ್ಲಿ ಪಟ್ಟಣದಲ್ಲಿ ಇದ್ದ ಆಸ್ಪತ್ರೆ ಕಟ್ಟಡವನ್ನು ಕೆಡವಿ 100 ಹಾಸಿಗೆಗಳ ಮೇಲ್ದರ್ಜಗೆ ಏರಿಸುವ ಕಾಮಗಾರಿ ನಡೆದಿತ್ತು. ಆ ಸಂದರ್ಭ ಭವನವನ್ನು ಆಸ್ಪತ್ರೆಗೆ ಬಳಸಿಕೊಳ್ಳಲಾಗಿತ್ತು. 2018ರಲ್ಲಿ ಆಸ್ಪತ್ರೆಯನ್ನು ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಆದರೆ ಭವನದಲ್ಲಿ ಆಸ್ಪತ್ರೆ ನಡೆಸಲು ಅಳವಡಿಸಿದ್ದ ತಾತ್ಕಾಲಿಕ ಕೊಠಡಿಗಳನ್ನು ಹಾಗೇ ಬಿಡಲಾಗಿದೆ. ಕೆಲ ವಸ್ತುಗಳು, ಪೀಠೋಪಕರಣಗಳು ಎಲ್ಲೆಂದರಲ್ಲಿ ಬಿದ್ದಿವೆ. ಭವನದ ಒಳಗೆ ಇದ್ದ ಮೂಲ ಸ್ವರೂಪ ಈಗ ಇಲ್ಲವಾಗಿದೆ. ಹಾಗಾಗಿ ಅದು ಯಾವುದಕ್ಕೂ ಬಳಸದ ಸ್ಥಿತಿಯಲ್ಲಿದೆ.
ಭವನವನ್ನು ತನ್ನ ಮೂಲ ಸ್ಥಿತಿಗೆ ಬದಲಾಯಿಸಿಕೊಡುವಂತೆ ಪುರಸಭೆ ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದೆ. ಆದರೆ ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.