ADVERTISEMENT

ರಾಜ್‌ಕುಮಾರ್ ರಾಜ್ಯದ ಸಾಂಸ್ಕೃತಿಕ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 15:51 IST
Last Updated 24 ಏಪ್ರಿಲ್ 2020, 15:51 IST
ಕೋಲಾರದಲ್ಲಿ ಶುಕ್ರವಾರ ನಡೆದ ರಾಜ್‌ಕುಮಾರ್‌ ಜನ್ಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ರಾಜ್‌ಕುಮಾರ್‌ ಜನ್ಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಚಿತ್ರನಟ ದಿವಂಗತ ರಾಜ್‌ಕುಮಾರ್ ಅವರು ಕನ್ನಡದ ಮೇರು ನಟ ಮಾತ್ರವಲ್ಲದೆ ರಾಜ್ಯದ ಸಾಂಸ್ಕೃತಿಕ ರಾಯಭಾರಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬಣ್ಣಿಸಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್‌ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ರಾಜ್‌ಕುಮಾರ್‌ ಅವರು ಅಭಿನಯಕ್ಕೆ ಮಾತ್ರ ಸೀಮಿತರಾಗದೆ ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರವಾಗಿ ಹೋರಾಟ ನಡೆಸಿ ಅನನ್ಯ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಅಭಿಮಾನಿಗಳೇ ದೇವರು ಎಂದು ಕರೆದ ರಾಜ್‌ಕುಮಾರ್ ಸದಾ ಜನರ ಮಧ್ಯೆ ಇರುತ್ತಿದ್ದರು. ಅವರು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ರಾಜ್ಯದಲ್ಲಿ ಅವರ ಹೆಸರು ಗೊತ್ತಿರದವರು ಯಾರೂ ಇಲ್ಲ. ರಾಜ್‌ಕುಮಾರ್‌ರ ಶಿಸ್ತಿನ ಜೀವನ ಎಲ್ಲರಿಗೂ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಾಜ್‌ಕುಮಾರ್‌ ಚಿತ್ರರಂಗದ ಜತೆಗೆ ಕನ್ನಡಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದರು. ಅವರು ಅದ್ಭುತ ನಟನೆಯ ಜತೆಗೆ ಸರಳ ಜೀವನ ಶೈಲಿಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಶಿಸ್ತು, ಕರ್ತವ್ಯ ನಿಷ್ಠೆ, ಸರಳ ಜೀವನ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ರಾಜ್‌ಕುಮಾರ್‌ರ ಚಲನಚಿತ್ರಗಳು ಸಮಾಜಕ್ಕೆ ದಾರಿದೀಪವಾಗಿವೆ. ಅವರು ಎಂದಿಗೂ ವಿವಾದಾತ್ಮಕವಾಗಿ ಮಾತನಾಡಿದವರಲ್ಲ. ಅವರ ಸಿನಿಮಾ ನೋಡಿ ಯಾವುದೇ ವ್ಯಕ್ತಿ ಹಾಳಾಗಿರುವ ಉದಾಹರಣೆಯಿಲ್ಲ. ಆದ ಕಾರಣ ಪೋಷಕರು ಮಕ್ಕಳಿಗೆ ರಾಜ್‌ಕುಮಾರ್‌ ಅಭಿನಯದ ಚಲನಚಿತ್ರಗಳನ್ನು ತೋರಿಸಿ ಮಾನವೀಯ ಮೌಲ್ಯ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಅವಿನಾಭಾವ ಸಂಬಂಧ: ‘ರಾಜ್‌ಕುಮಾರ್‌ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೂ ಹಾಗೂ ಜಿಲ್ಲೆಗೂ ಅವಿನಾಭಾವ ಸಂಬಂಧವಿತ್ತು. ಗೋಕಾಕ್‌ ಚಳವಳಿ ಸಂದರ್ಭದಲ್ಲಿ ಅವರು ಜಿಲ್ಲೆಗೆ ಬಂದು ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದರು. ಅವರ ನೆನಪು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಿಸುತ್ತಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು, ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.